ಭದ್ರಾವತಿ: ಹಳೇನಗರದ 13 ನೇ ಶತಮಾನದ ಹೊಯ್ಸಳರ ಕಾಲದ ಪುರಾಣ ಪ್ರಸಿದ್ಧ ಶ್ರೀ ಲಕ್ಷ್ಮೀ ನರಸಿಂಹಸ್ವಾಮಿ ದೇವರ ಬ್ರಹ್ಮರಥೋತ್ಸವವು ಶನಿವಾರ ವಿಜೃಂಭಣೆಯಿಂದ ನೆರವೇರಿತು.
ದೇವಾಲಯದ ಮುಖ್ಯ ಅರ್ಚಕ ವೇ!!ಬ್ರ!! ರಂಗನಾಥ ಶರ್ಮ, ಸಹಾಯಕ ಅರ್ಚಕರಾದ ಶ್ರೀನಿವಾಸ ಹಾಗು ನರಸಿಂಹಚಾರ್ ಮತ್ತಿತರೆ ಅರ್ಚಕರ ನೇತೃತ್ವದಲ್ಲಿ ನಸುಕಿನ ಜಾವ ಯಾಗಶಾಲೆಯಲ್ಲಿ ಹೋಮ ನಡೆಯಿತು. ಪಲ್ಲಕ್ಕಿಯಲ್ಲಿ ಸುದರ್ಶನ ಚಕ್ರವಿರಿಸಿ ರಥಬೀದಿಯಲ್ಲಿ ಬಲಿ ಉತ್ಸವ ಬಲಿಹರಣ ನೆರವೇರಿಸಲಾಯಿತು. ನಂತರ ರಥದ ಕಳಸ ಪೂಜೆ ಮಾಡಲಾಯಿತು. ದೇವಾಲಯದಲ್ಲಿ ಮೂಲ ದೇವರಿಗೆ ಮತ್ತು ಉತ್ಸವ ದೇವರಿಗೆ ಪೂಜೆ ಸಲ್ಲಿಸಿದ ತರುವಾಯ ರಥಬೀದಿಯಲ್ಲಿ ದೇವರ ಉತ್ಸವ ನಡೆಯಿತು.
ಮಧ್ಯಾಹ್ನ ಭೂದೇವಿ, ಶ್ರೀದೇವಿ ಸಹಿತನಾದ ಶ್ರೀನಿವಾಸ ದೇವರ ಉತ್ಸವ ಮೂರ್ತಿಯನ್ನು ರಥಾರೋಹಣ ಮಾಡುತ್ತಿದ್ದಂತೆ ಸಾವಿರಾರು ಸಂಖ್ಯೆಯಲ್ಲಿ ನೆರದಿದ್ದ ಭಕ್ತಾದಿಗಳು ಶ್ರೀಲಕ್ಷ್ಮೀನರಸಿಂಹಸ್ವಾಮಿ ದೇವರಿಗೆ ಜಯಘೋಷಗಳನ್ನು ಹಾಕುತ್ತಾ ರಥದ ಕಳಸದ ಮೇಲೆ ಬಾಳೆಹಣ್ಣು, ಉತ್ತುತ್ತಿ, ಕರಿಮೆಣಸು ಕಾಳನ್ನು ಮತ್ತಿತರೆ ಹರಕೆ ಹೊತ್ತ ವಸ್ತುಗಳನ್ನು ಎಸೆಯುತ್ತಾ ಹರಕೆ ಸಲ್ಲಿಸಿದರು. ರಥಾರೂಢನಾದ ದೇವರಿಗೆ ನೈವೇದ್ಯ, ಮಹಾಮಂಗಳಾರತಿ ನೆರವೇರಿಸಿ ಪ್ರಸಾದ ವಿನಿಯೋಗಿಸಲಾಯಿತು.
ರಥೋತ್ಸವ ಸಂಧರ್ಭದಲ್ಲಿ ಮುಜರಾಯಿ ಅಧಿಕಾರಿ ಹಾಗು ತಹಶೀಲ್ದಾರ್ ಸೋಮಶೇಖರ್, ಆಡಳಿತಾಧಿಕಾರಿ ಹಾಗು ಕಂದಾಯಾಧಿಕಾರಿ ಪ್ರಶಾಂತ್, ಗ್ರಾಮ ಲೆಕ್ಕಾಧಿಕಾರಿ ಪ್ರೇಮ್, ನಗರಸಭಾ ಸದಸ್ಯ ಆನಂದಕುಮಾರ್, ಬ್ರಾಹ್ಮಣ ಮಹಾಸಭಾ ಅಧ್ಯಕ್ಷ ರಮಾಕಾಂತ್, ಮುಖಂಡ ಜನಾರ್ಧನ್ ಅಯ್ಯಂಗಾರ್ ಮುಂತಾದವರು ಹಾಜರಿದ್ದರು.
ರಥೋತ್ಸವ ವೀಕ್ಷಿಸಲು ಹಾಗೂ ದೇವರ ದರ್ಶನ ಭಾಗ್ಯ ಪಡೆಯಲು ತಾಲೂಕಿನ ಸುತ್ತಮುತ್ತಲ ಗ್ರಾಮಗಳಿಂದ ಸಹಸ್ರಾರು ಭಕ್ತರು ದರ್ಶನ ಭಾಗ್ಯ ಪಡೆದು ಪುನೀತರಾದರು. ದೇವಾಲಯದ ಅರ್ಚಕರ ನಿವಾಸದಲ್ಲಿ ಮತ್ತು ದೀಕ್ಷತ್ ಟ್ರಸ್ಟ್ ವತಿಯಿಂದ ಅನ್ನ ದಾನಪ್ರಸಾದ ಏರ್ಪಡಿಸಲಾಗಿತ್ತು. ಸಮೀಪದ ಶ್ರೀರಾಮೇಶ್ವರ, ಶ್ರೀಸುಬ್ರಹ್ಮಣ್ಯ ಸ್ವಾಮಿ ದೇವಾಲಯದಲ್ಲಿ ವೇದಮಾತ ಗಾಯತ್ರಿ ಅನ್ನದಾನ ಸಮಿತಿಯಿಂದ ಊಟದ ವ್ಯವಸ್ಥೆ ಮಾಡಲಾಗಿತ್ತು.
ಬಿಸಿಲ ಬೇಗೆ ನೀಗಿಸಲು ಭಕ್ತಾದಿಗಳಿಗೆ ಅಲ್ಲಲ್ಲಿ ಉಚಿತವಾಗಿ ಪಾನಕ,ನೀರು, ಕೋಸಂಬರಿ ವಿತರಿಸಲಾಯಿತು. ನೀರುಗಂಟೆ ಪಾರ್ವತಮ್ಮ ಕೆಂಚಪ್ಪ ನವರ ಮಕ್ಕಳಾದ ಬಿ.ಎನ್.ಕೆ.ಮೂರ್ತಿ ಮತ್ತು ಬಿ.ಎನ್.ಕೆ.ನಾಗರಾಜ ರಥದ ಅಲಂಕಾರವನ್ನು ಮಾಡಿಸಿದ್ದರು. ಹಳದಮ್ಮ ಬೀದಿಯ ಸುಣ್ಣಗಾರರಾದ ಜಯಲಕ್ಷ್ಮೀ ಮತ್ತು ಕೃಷ್ಣಪ್ಪ ಸಂಜೆ ಪ್ರಸಾದ ಸೇವೆ ನೀಡಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post