ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಆಯ್ಕೆಯಲ್ಲಿ ಯಶಸ್ವಿಯಾಗಿ ಭಾರತೀಯ ಸೇನೆ ಸೇರಿ, ದೇಶ ಸೇವೆ ಮಾಡುವುದೇ ನಿಮ್ಮ ನಿರ್ಧಿಷ್ಠ ಗುರಿಯಾಗಿರಲಿ ಎಂದು ಸ್ನೇಹ ಜೀವಿ ಬಳಗದ ಉಮೇಶ್(ಪೊಲೀಸ್ ಇಲಾಖೆ) ಕರೆ ನೀಡಿದರು.
ಜನವರಿ ತಿಂಗಳಿನಲ್ಲಿ ಉಡುಪಿಯಲ್ಲಿ ಭಾರತೀಯ ಸೇನೆಗೆ ನಡೆಯಲಿರುವ ಆಯ್ಕೆಗಾಗಿ ಭದ್ರಾವತಿಯ ಮಾಜಿ ಸೈನಿಕರಿಂದ ಉಚಿತ ತರಬೇತಿ ಪಡೆಯುತ್ತಿರುವ ಯುವಕರಿಗೆ ಕ್ರೀಡಾ ವಸ್ತ್ರ ವಿತರಿಸಿ ಅವರು ಮಾತನಾಡಿದರು.
ಭಾರತೀಯ ಸೇನೆಯಲ್ಲಿ ಸೇವೆ ಸಲ್ಲಿಸಲು ಪುಣ್ಯ ಮಾಡಿ ಹುಟ್ಟಿರಬೇಕು. ನೀವೆಲ್ಲರೂ ಸೇನೆ ಸೇರಬೇಕು ಎಂದು ಬಯಸಿ ತರಬೇತಿ ಪಡೆಯುತ್ತಿರುವುದು ಸಂತಸದ ವಿಚಾರ. ನಿಮಗೆ ತರಬೇತಿ ನೀಡುತ್ತಿರುವ ಮಾಜಿ ಸೈನಿಕರುಗಳೇ ನಿಮಗೆ ಸ್ಪೂರ್ತಿ. ಇವರುಗಳನ್ನೇ ಆದರ್ಶವಾಗಿಟ್ಟುಕೊಂಡು ಆಯ್ಕೆಯಾಗುವ ಏಕಚಿತ್ತದಿಂದ ಶ್ರಮಿಸಿ. ಇಲ್ಲಿ ತರಬೇತಿ ಪಡೆಯುತ್ತಿರುವ ನೀವುಗಳ ಎಲ್ಲರೂ ಆಯ್ಕೆಯಾಗಲಿ ಎಂದು ಹಾರೈಸಿದರು.
ಕಳೆದ ಒಂದು ತಿಂಗಳಿನಿಂದ ಸೇನಾ ಆಯ್ಕೆ ತರಬೇತಿ ಪಡೆಯುತ್ತಿರುವ ಯುವಕರಿಗೆ ಸ್ನೇಹಜೀವಿ ಬಳಗದ ವತಿಯಿಂದ ಕ್ರೀಡಾ ವಸ್ತ್ರ(ಶಾರ್ಟ್ಸ್ ಹಾಗೂ ಶರ್ಟ್)ನ್ನು ಉಚಿತವಾಗಿ ನೀಡಲಾಗುತ್ತಿದ್ದು, ಉಮೇಶ್ ಅವರು ಸಾಂಕೇತಿಕವಾಗಿ ವಿತರಣೆ ಮಾಡಿದರು.
ಮಾಜಿ ಸೈನಿಕರ ಸಂಘದ ಅಶೋಕ್ ಗಿರೀಶ್ ಮಾತನಾಡಿ, ದೇಶ ಸೇವೆ ಎನ್ನುವುದು ದೇವರ ಸೇವೆಯಿದ್ದಂತೆ. ಇಂತಹ ಭಾರತೀಯ ಸೇನೆಯನ್ನು ಸೇರಬೇಕು ಬಯಸಿರುವ ನಮ್ಮೂರಿನ ಯುವಕರಿಗೆ ತರಬೇತಿ ನೀಡುತ್ತಿರುವುದು ನಮಗೆ ತೃಪ್ತಿ ನೀಡುತ್ತಿದೆ. ಇದೇ ಸಂದರ್ಭದಲ್ಲಿ ಈ ಉತ್ಸಾಹಿ ಮಕ್ಕಳನ್ನು ಪ್ರೋತ್ಸಾಹಿಸಲು ಸ್ನೇಹಿ ಜೀವಿ ಬಳಗದ ಉಮೇಶ್ ಅವರು ಈ ರೀತಿ ಕೊಡುಗೆ ನೀಡುತ್ತಿರುವುದು ಮಾದರಿ ಕಾರ್ಯವಾಗಿದೆ ಎಂದು ಪ್ರಶಂಸಿಸಿದರು.
ಮಾಜಿ ಸೈನಿಕರ ಸಂಘದ ವತಿಯಿಂದ ಉಮೇಶ್ ಅವರನ್ನು ಸನ್ಮಾನಿಸಿ, ಕೃತಜ್ಞತೆ ಸಲ್ಲಿಸಲಾಯಿತು.
ತಾಲೂಕು ಮಾಜಿ ಸೈನಿಕರ ಸಂಘದ ಅಧ್ಯಕ್ಷ ಅಶೋಕ್, ಉಪಾಧ್ಯಕ್ಷ ದಿನೇಶ್, ಕಾರ್ಯದರ್ಶಿ ವೆಂಕಟಗಿರಿ, ನಿರ್ದೇಶಕರು, ಮಾಜಿ ಸೈನಿಕರು ಉಪಸ್ಥಿತರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post