ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಮನೆಯಲ್ಲಿರುವ ಹಿರಿಯರು ಸದಾ ಕಾಲ ಸಂತೋಷದಿಂದ ಇರುವಂತೆ ನೋಡಿಕೊಳ್ಳಿ ಎಂದು ನಗರಸಭೆ ಆಯುಕ್ತ ಮನೋಹರ್ ಅವರ ಪತ್ನಿ ಶಿಲ್ಪಾ ಮನೋಹರ್ ಕರೆ ನೀಡಿದರು.
ಸ್ನೇಹ ಮಿಲನ ಮಹಿಳಾ ತಂಡದಿಂದ ನಂದಿನಿ ಹೋಟೆಲ್ನಲ್ಲಿ ಸ್ವಾತಂತ್ರ್ಯ ಹೋರಾಟಗಾರ್ತಿ ಪುಟ್ಟಮ್ಮ ಬಾರಂದೂರ್ ಅವರನ್ನು ಸನ್ಮಾನಿಸುವುದರ ಮೂಲಕ ಅಂತಾರಾಷ್ಟ್ರೀಯ ಮಹಿಳಾ ದಿನಾಚರಣೆ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಮನೆಯಲ್ಲಿರುವ ಹಿರಿಯರು ಸಂತೋಷದಿಂದ ಇರುವಂತೆ ನೋಡಿಕೊಳ್ಳಬೇಕು. ಮೊಮ್ಮಕ್ಕಳಿಗೆ ಅಜ್ಜ-ಅಜ್ಜಿಯರ ಪ್ರೀತಿ ಸಿಗಬೇಕು. ವೃದ್ಧರನ್ನು ಆಶ್ರಮಕ್ಕೆ ಸೇರಿಸದೆ ಅವರನ್ನು ಗೌರವಿಸಿ ಪ್ರೀತಿಯಿಂದ ನೋಡಿಕೊಳ್ಳುವುದರ ಮೂಲಕ ಹೆಣ್ಣುಮಕ್ಕಳ ಸಾಧನೆ ಶುರುವಾಗಬೇಕು ಎಂದರು.
ಜಿಲ್ಲಾ ಶರಣ ಸಾಹಿತ್ಯ ಪರಿಷತ್ತು ಅಧ್ಯಕ್ಷ ಎಚ್.ಎನ್. ಮಹಾರುದ್ರ ಮಾತನಾಡಿ, ಹೆಣ್ಣುಮಕ್ಕಳನ್ನು ಸಮಾನ ದೃಷ್ಠಿಯಿಂದ ನೋಡಬೇಕು ಮತ್ತು ಅವರನ್ನು ಗೌರವಿಸಬೇಕು. 12ನೆಯ ಶತಮಾನದಲ್ಲೇ ಬಸವಣ್ಣನವರು ಅನುಭವ ಮಂಟಪದಲ್ಲಿ ಹೆಣ್ಣುಮಕ್ಕಳಿಗೂ ಮಾತನಾಡುವ ಅವಕಾಶ ಕೊಟ್ಟಿದ್ದರು ಎಂದು ತಿಳಿಸಿದರು.
ಮಹಿಳಾ ತಂಡದ ಅಧ್ಯಕ್ಷೆ ಕವಿತಾ ಸುರೇಶ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಮಮತಾ ಪ್ರಾರ್ಥಿಸಿ, ಸಹನಾ ರಮೇಶ್ ಸ್ವಾಗತಿಸಿ, ವತ್ಸಲಾ ರಮೇಶ್ ಪ್ರಾಸ್ತಾವಿಕವಾಗಿ ಮಾತನಾಡಿದರು. ಚಂದ್ರಕಲಾ ವಂದಿಸಿ, ಸವಿತಾ ಉಮೇಶ್ ನಿರೂಪಿಸಿದರು. ಸ್ನೇಹ ಮಿಲನ ಮಹಿಳಾ ತಂಡದ ಉಪಾಧ್ಯಕ್ಷೆ ದ್ರಾಕ್ಷಾಯಣಿ ಪ್ರಕಾಶ್ ಉಪಸ್ಥಿತರಿದ್ದರು. ತಂಡದ ಎಲ್ಲಾ ಸದಸ್ಯರು ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















