ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ತಾಲೂಕಿನಾದ್ಯಂತ ಹಲವು ನ್ಯಾಯಬೆಲೆ ಅಂಗಡಿಗಳ ಮಾಲೀಕರು ಹಾಗೂ ಆಹಾರ ಮತ್ತು ನಾಗರಿಕ ಸರಬರಾಜು ಪಡಿತರ ಇಲಾಖೆಯ ಸಂಬಂಧಪಟ್ಟ ಅಧಿಕಾರಿಗಳು ಕಾನೂನು ಉಲ್ಲಂಘಿಸಿದ್ದು, ಲೋಪ ದೋಷ ಸರಿಪಡಿಸಬೇಕು ಎಂದು ಆಗ್ರಹಿಸಿ ಸಂಯುಕ್ತ ಜನತಾದಳದ ಮುಖಂಡ ಶಶಿಕುಮಾರ್ ಎಸ್. ಗೌಡ ಮಿನಿವಿಧಾನಸೌಧ ಮುಂಭಾಗ ಕಳೆದ 8 ದಿನಗಳಿಂದ ಏಕಾಂಗಿಯಾಗಿ ಧರಣಿ ಸತ್ಯಾಗ್ರಹ ನಡೆಸುತ್ತಿದ್ದಾರೆ.
ನಗರ ಹಾಗೂ ಗ್ರಾಮಾಂತರ ಪ್ರದೇಶಗಳಲ್ಲಿನ ನ್ಯಾಯಬೆಲೆ ಅಂಗಡಿಗಳ ಮಾಲೀಕರು ವಂಶಪಾರಂಪರ್ಯವಾಗಿ ನ್ಯಾಯಬೆಲೆ ಅಂಗಡಿ ನಡೆಸುತ್ತಿದ್ದೇವೆ ಎಂದು ಹೇಳಿಕೊಂಡು ಕಾನೂನು ನಿಯಮ ಪಾಲಿಸದೆ ಅಂಗಡಿ ನಡೆಸುತ್ತಿದ್ದಾರೆ. ಕನಿಷ್ಠ ಹತ್ತನೆಯ ತರಗತಿ ಉತ್ತೀರ್ಣ ರಾಗಿರಬೇಕು, 60 ವರ್ಷ ವಯೋಮಿತಿ ದಾಟಿರಬಾರದು. ಅವರಿಗೆ ನೀಡುವ ಪರವಾನಿಗೆ ಮೂರು ವರ್ಷಕ್ಕೆ ಸೀಮಿತವಾಗಿರಬೇಕು ಎಂದು ಕಾನೂನು ಹೇಳುತ್ತದೆ. ಆದರೆ ಇಲ್ಲಿ ಅದನ್ನೆಲ್ಲ ಉಲ್ಲಂಘಿಸಿ ಹಲವರು ವಹಿವಾಟು ನಡೆಸುತ್ತಿದ್ದಾರೆ. ಕೇಳಿದರೆ ನಮಗೆ ನ್ಯಾಯಾಲಯದ ಆದೇಶವಿದೆ ಎಂದು ಹೇಳುತ್ತಾರೆ ಎಂದು ದೂರಿದ್ದಾರೆ.
ತಿಂಗಳು ಪೂರ್ತಿ ಅಂಗಡಿ ತೆರೆಯದೆ, ತಿಂಗಳಲ್ಲಿ ಕೆಲವು ದಿನ ಮಾತ್ರ ಪಡಿತರ ವಿತರಣೆ ಮಾಡುತ್ತಾರೆ. ಇದರಿಂದ ಬಡ, ಕೂಲಿ ಕಾರ್ಮಿಕರಿಗೆ ಮದ್ಯಮವರ್ಗದ ಜನರಿಗೆ ಪಡಿತರ ಪಡೆಯಲು ತೊಂದರೆಯಾಗುತ್ತಿದೆ. ಈ ಎಲ್ಲಾ ಲೋಪದೋಷಗಳನ್ನು ಸರಿಪಡಿಸುವಂತೆ ಸಂಬಂಧಪಟ್ಟ ಇಲಾಖೆ ಅಧಿಕಾರಿಗಳಿಗೆ ಅನೇಕ ಬಾರಿ ತಿಳಿಸಿದರೂ ಯಾವುದೇ ಪ್ರಯೋಜನವಾ ಗಿರುವುದಿಲ್ಲ. ಲೋಪ ದೋಷ ಸರಿಪಡಿಸಿ ಎಲ್ಲಾ ದಿನಗಳಲ್ಲಿಯೂ ಪಡಿತರ ವಿತರಣೆ ಮಾಡುವ ವ್ಯವಸ್ಥೆ ಮಾಡಬೇಕು, ವಂಶಪಾರಂಪರ್ಯ ಎಂದು ಹೇಳಿಕೊಂಡು ನ್ಯಾಯಬೆಲೆ ಅಂಗಡಿ ನಡೆಸುತ್ತಿರುವವರ ದಾಖಲಾತಿ ಪರಿಶೀಲಿಸಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದವರು ಆಗ್ರಹಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news















