ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ತಾಲ್ಲೂಕಿನ ತಾವರೆಘಟ್ಟ ಗ್ರಾಮ ಪಂಚಾಯಿತಿ ವ್ಯಾಪ್ತಿಯ ರೈತರ ಜಮೀನಲ್ಲಿ ಕಾಲುವೆ ಸಮಸ್ಯೆ ಎದುರಾಗಿದೆ ಎಂದು ಪಕ್ಕದ ಜಮೀನಿನ ರೈತರು ಕಾಡಾ ಕಛೇರಿಗೆ ಭೇಟಿ ನೀಡಿ ಕಳೆದೆರಡು ದಿನಗಳ ಹಿಂದೆ ನೀಡಿದ ದೂರಿನನ್ವಯ, ಸಂಬಂಧಪಟ್ಟ ನೀರಾವರಿ ಅಧಿಕಾರಿಗಳೊಂದಿಗೆ ಭದ್ರಾ ಅಚ್ಚುಕಟ್ಟು ಪ್ರದೇಶಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷೆ ಪವಿತ್ರಾ ರಾಮಯ್ಯ ರೈತರ ಜಮೀನಿಗೆ ಭೇಟಿ ನೀಡಿ ಸ್ಥಳ ಪರಿಶೀಲನೆ ನಡೆಸಿದರು.
ಈ ಹಿಂದೆ ನಿರ್ಮಿಸಿದ್ದ ಕಾಲುವೆಯನ್ನು ಪಕ್ಕದ ಜಮೀನಿನ ರೈತರು ಗುರುತು ಸಹ ಸಿಗದೆ ಮುಚ್ಚಿದ್ದು, ನೀರು ಹರಿದು ಕೆರೆಗೆ ಸೇರುತ್ತಿಲ್ಲ, ಇದರಿಂದ ಸಮಸ್ಯೆ ಉಂಟಾಗಿದೆ ಎಂದು ದೂರಿನಲ್ಲಿ ಉಲ್ಲೇಖಿಸಲಾಗಿತ್ತು. ಅದರಿಂದ ಅಕ್ಕಪಕ್ಕದ ಹೊಲದ ರೈತರ ನಡುವೆಯೆ ಕಿರಿ- ಕಿರಿ ಉಂಟಾಗಿ, ಅದು ಮನಸ್ಥಾಪಗಳಿಗೆ ಗುರಿಯಾಗಿತ್ತು.
ಅಕ್ಕಪಕ್ಕದ ಜಮೀನಿನ ರೈತರಾದ್ದರಿಂದ ಈ ರೀತಿಯ ಸಮಸ್ಯೆಗಳು ಎದುರಾದರೆ, ಕೂತು ಮಾತನಾಡಿ, ಬಗೆಹರಿಸಿಕೊಳ್ಳಬೇಕು. ಅದನ್ನು ಬಿಟ್ಟು ನಿಮ್ಮಗಳ ನಡುವೆಯೇ ಬಿರುಕು ಉಂಟಾದರೆ ಅದು ಮುಂದಿನ ದಿನಗಳಲ್ಲಿ ತುಂಬಾ ಅತಿರೇಕಕ್ಕೆ ಹೋಗುತ್ತದೆ. ಅದು ಯಾರಿಗೂ ಒಳಿತಲ್ಲವೆಂದು ತಿಳಿ ಹೇಳಲಾಯಿತು.
ಊರಿನ ಮುಖಂಡರು ಹಾಗೂ ಗ್ರಾಮ ಪಂಚಾಯಿತಿಗಳಿವೆ ಅಲ್ಲಿ ತೀರ್ಮಾನವಾಗುವಂತಹ ಸಮಸ್ಯೆಯನ್ನು ಕೋರ್ಟು, ಕೇಸು ಎಂದು ಹೊರಟರೆ ಅದು ಜೀವನ ಪರಿಯಂತ ನರಕದ ದರ್ಶನ ಉಚಿತವಾಗಿ ಪಡೆದಂತೆ. ಆದ್ದರಿಂದ ಮುಂದಿನ ದಿನಗಳಲ್ಲಿ ಈ ರೀತಿಯ ಮನಸ್ಥಾಪಗಳಿಗೆ ಒಳಗಾಗದೆ ಹೊಂದಾಣಿಕೆಯಿಂದ ನಡೆದುಕೊಳ್ಳಿ ಎಂದು ತಿಳಿಸಲಾಯಿತು.
ಈ ಮಾತು ಕೇಳಿದ ಸೂರ್ಯನಾರಾಯಣ ಮತ್ತು ಪ್ರತಾಪ್ ಎಂಬ ರೈತರು ಕೂತು ಮಾತಾಡಿ, ಮುಂದಿನ ದಿನಗಳಲ್ಲಿ ಜಮೀನಿನಲ್ಲಿ ಅಡಿಕೆ ಸಸಿ ನಡುವವರಿದ್ದೇವೆ. ಆದ್ದರಿಂದ ಕಾಲುವೆ ನಮ್ಮ ಜಮೀನಿನ ಪಕ್ಕದಲ್ಲಿಯೇ ಇದ್ದರೆ ಇನ್ನೂ ಉಪಯೋಗವಿದೆ ಎಂದು ಅರಿತು ಅನುಸರಿಸಿಕೊಂಡು ನಡೆದುಕೊಳ್ಳುತ್ತೇವೆ ಎಂದು ಮಾನವೀಯ ತೀರ್ಮಾನಕ್ಕೆ ಬಂದರು.
Also read: ಮೈಸೂರು ಜಂಬೂಸವಾರಿ: ಧಾರವಾಡದ ಸಂಸ್ಕೃತಿ ಶ್ರೀಮಂತಿಕೆ ಬಿಂಬಿಸುವ ಸ್ತಬ್ದಚಿತ್ರ ನಿರ್ಮಿಸಲು ಸೂಚನೆ
ಈ ಸಂಬಂಧ ಮುಂದಿನ ದಿನಗಳಲ್ಲಿ ಈ ಕಾಲುವೆ ಸಮಸ್ಯೆ ಮರುಕಳಿಸುವುದಿಲ್ಲ ಎಂಬುದಾಗಿಯು ಹಾಗೂ ಹೊಂದಾಣಿಕೆಯಿಂದ ನಡೆದುಕೊಳ್ಳುತ್ತೇವೆ ಎಂಬ ಬದ್ಧ ಸಂಧಾನದಲ್ಲಿ ಅಂತ್ಯಗೊಂಡಿತು.
ಈ ಸಂದರ್ಭದಲ್ಲಿ ಸಿಂಗನಮನೆ ಗ್ರಾ.ಪಂ ಸದಸ್ಯರಾದ ಕವಿತಾ ಪುಟ್ಟೆಗೌಡ, ಅಕ್ಕಿ ಮಂಜುನಾಥ್, ರೈತ ಸಂಘದ ಮುಖಂಡರಾದ ಶಾಂತಪ್ಪ, ರೈತರಾದ ಪ್ರಸನ್ನಕುಮಾರ್, ವೆಂಕಟೇಶ, ಸೂರ್ಯನಾರಾಯಣ್, ಪ್ರತಾಪ್, ಟೈಲರ್ ಷಫಿವುಲ್ಲಾ, ಸುರೇಶ್ ಗೌಡ್ರು, ನಾಗರಾಜ್ ರವರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post