ಭದ್ರಾವತಿ: ನಗರಸಭೆ ವ್ಯಾಪ್ತಿಯ ಹೊಸಸಿದ್ದಾಪುರ ಗ್ರಾಮದಲ್ಲಿ ರಸ್ತೆ ಕಾಮಗಾರಿ ವಿಳಂಬ ಹಾಗೂ ಗುತ್ತಿಗೆದಾರನ ನಿರ್ಲಕ್ಷ್ಯದಿಂದ ವಾಹನಗಳ ಓಡಾಟ ಹಾಗು ಸಾರ್ವಜನಿಕರ ಸಂಚಾರಕ್ಕೆ ಅಡಚಣೆಯಾಗಿ ಪರಿತಪಿಸುವಂತಾಗಿದೆ ಎಂದು ಸ್ಥಳೀಯರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಸಿದ್ದಾಪುರ ಗ್ರಾಮದ ಮೂಲಕ ಹೊಸೂರು, ತಾಂಡಾಕ್ಕೆ ಕುಡಿಯುವ ನೀರಿನ ಹೊಸ ಸಂಪರ್ಕ ಪೈಪುಗಳನ್ನು ಹಾಕಲಾಗಿದೆ. ಕಾಮಗಾರಿಗೆಂದು ಮುಖ್ಯರಸ್ತೆಯನ್ನು ಅಗೆದಿದ್ದು ಇದುವರೆಗೂ ಮುಚ್ಚಿರುವುದಿಲ್ಲ. ಕಾಮಗಾರಿ ಆರಂಭಿಸಿ ಮೂರು ತಿಂಗಳಾಗಿದ್ದು, ಪೈಪ್ ಅಳವಡಿಸುವ ಕೆಲಸ ಮುಗಿದಿದ್ದು ಅಗೆದಿರುವ ಗುಂಡಿಯನ್ನು ಬೇಕಾಬಿಟ್ಟಿಯಾಗಿ ಮುಚ್ಚಿದ್ದು ವಾಹನ ಸವಾರರು ಜೀವ ಕೈಯಲ್ಲಿಡಿದು ಸಂಚರಿಸುವಂತಾಗಿದೆ. ಅಲ್ಲದೆ ಕಾಮಗಾರಿ ವೇಳೆ ಡಾಂಬಾರು ರಸ್ತೆಗೆ ಬಳಸಿದ್ದ ಜಲ್ಲಿಗಳು ಮೇಲೆದಿರುವ ಹಿನ್ನಲೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ.
ಮಳೆಗಾಲ ಆರಂಭವಾಗಿದ್ದು ರಸ್ತೆಯಲ್ಲ ಕೆಸರಿನಂತಾಗಿದೆ. ಬೈಪಾಸ್ ರಸ್ತೆ ಬಳಿ 30 ಅಡಿ ಪೈಪ್ ಅಳವಡಿಕೆ ಕಾರ್ಯ ಬಾಕಿ ಇದ್ದು ಗುಂಡಿ ತೆಗೆದು ವಾರ ಕಳೆದರೂ ಕಾಮಗಾರಿ ಪೂರ್ಣಗೊಳಿಸಿಲ್ಲ. ಸಿದ್ದಾಪುರ ಗ್ರಾಮದ ಬೈಪಾಸ್ ಮುಖ್ಯ ರಸ್ತೆಯು ಶಿವಮೊಗ್ಗ ಸಂಪರ್ಕಿಸುವದರಿಂದ ಪ್ರತಿನಿತ್ಯ ಸಾವಿರಾರು ವಾಹನಗಳು ಓಡಾಡುತ್ತವೆ. ಲಾರಿ, ಬಸ್ಗಳು ಸೇರಿದಂತೆ ಭಾರಿ ವಾಹನಗಳು ಓಡಾಡುವುದರಿಂದ ದ್ವಿಚಕ್ರ ವಾಹನ ಚಾಲಕರು ಸಂಚರಿಸಲು ಅಸಾದ್ಯವಾಗಿದೆ. ಪಾದಚಾರಿಗಳು ಸಹ ಭೀತಿಯಿಂದಲೇ ಸಂಚರಿಸಬೇಕಿದೆ. ಪೈಪ್ ಅಳವಡಿಸುವ ಕಾಮಗಾರಿ ಮುಗಿದಿದ್ದರೂ ಗುಂಡಿಯನ್ನು ಸಮತಟ್ಟು ಮಾಡಿ ಡಾಂಬಾರ್ ಹಾಕುವ ಕೆಲಸ ವಿಳಂಬಗೊಂಡಿರುವುದಕ್ಕೆ ಗ್ರಾಮಸ್ಥರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಉತ್ತಮವಾದ ಡಾಂಬಾರ್ ರಸ್ತೆಯನ್ನು ಅಗೆದು ಪೈಪ್ಲೈನ್ ಹಾಕಲಾಗಿದೆ. ಕಾಮಗಾರಿ ಶುರುವಾಗಿ ಮೂರು ತಿಂಗಳಾದರೂ ಪೂರ್ಣಗೊಳಿಸಿಲ್ಲ. ಗುಂಡಿಯನ್ನು ಸಹ ಮುಚ್ಚಿಲ್ಲ. ರಸ್ತೆಯಲ್ಲಿ ಓಡಾಡುವುದು ಕಷ್ಟಕರವಾಗಿದೆ ಎಂದು ಸ್ಥಳೀಯ ಗ್ರಾಮಸ್ಥ ರವಿ ಕಲ್ಪ ನ್ಯೂಸ್’ಗೆ ತಿಳಿಸಿದ್ದಾರೆ.
ಕಾಮಗಾರಿ ವಿಳಂಬಕ್ಕೆ ಸಂಬಂಧಿತ ಅಧಿಕಾರಿಗಳಿಂದ ಮಾಹಿತಿ ಪಡೆದು ಕೂಡಲೇ ಬಾಕಿ ಉಳಿದಿರುವ ಕಾಮಗಾರಿ ಪೂರ್ಣಗೊಳಿಸುವುದಾಗಿ ಪೌರಾಯುಕ್ತ ಮನೋಹರ್ ತಿಳಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post