ಕಲ್ಪ ಮೀಡಿಯಾ ಹೌಸ್ | ಭದ್ರಾವತಿ |
ಕ್ರೀಡೆ ಯಾವುದೇ ಧರ್ಮ, ಜಾತಿಗೆ ಸೀಮಿತವಾಗಿಲ್ಲ. ಇದರಿಂದ ಪ್ರತಿಯೊಬ್ಬರಿಗೂ ಉತ್ಸಾಹ, ಆರೋಗ್ಯ ಲಭಿಸುತ್ತದೆ ಎಂದು ಶಾಸಕ ಬಿ.ಕೆ ಸಂಗಮೇಶ್ವರ್ ಹೇಳಿದರು.
ಯುವ ಮುಖಂಡ ಕೆ.ಪಿ. ಗಿರೀಶ್ ನೇತೃತ್ವದಲ್ಲಿ ನಗರದ ಓಂ ಕ್ರಿಕೇಟರ್ಸ್ ವತಿಯಿಂದ ಹಳೇನಗರದ ಕನಕಮಂಟಪ ಮೈದಾನದಲ್ಲಿ ೩ ದಿನಗಳ ಕಾಲ ಹಮ್ಮಿಕೊಳ್ಳಲಾಗಿರುವ ರಾಜ್ಯಮಟ್ಟದ ಓಂ ಕಪ್ ಟೆನ್ನಿಸ್ ಬಾಲ್ ಕ್ರಿಕೆಟ್ ಪಂದ್ಯಾವಳಿಗೆ ಚಾಲನೆ ನೀಡಿ ಮಾತನಾಡಿದ ಅವರು, ಪ್ರಸ್ತುತ ಕ್ರೀಡೆಗಳು ಹೆಚ್ಚು ಹೆಚ್ಚಾಗಿ ನಡೆಯುವಂತಾಗಬೇಕು. ಕ್ರೀಡಾಪಟುಗಳು ಇರುವ ಕಡೆ ಉತ್ತಮ ಪರಿಸರ ರೂಪುಗೊಳ್ಳುತ್ತದೆ. ಜೊತೆಗೆ ಯುವ ಸಮೂಹ ದುಶ್ಚಟಗಳಿಂದ ದೂರು ಉಳಿಯಲು ಸಹಾಯವಾಗುತ್ತದೆ ಎಂದರು.
ಕ್ರೀಡೆಯಲ್ಲಿ ಸೋಲು ಗೆಲುವು ಸಹಜ. ಪ್ರಸ್ತುತ ಕ್ರೀಡಾ ಮನೋಭಾವ ಅಗತ್ಯವಿದ್ದು, ಸೋಲು ಗೆಲುವನ್ನು ಸಮಾನವಾಗಿ ಸಂಭ್ರಮಿಸುವ ಮನಃಸ್ಥಿತಿ ಬೆಳಿಸಿಕೊಳ್ಳಬೇಕು. ಗೆದ್ದವರು, ಸೋತವರು ಇಬ್ಬರೂ ಸಂಭ್ರಮಿಸಬೇಕು. ಕ್ರೀಡೆಗೆ ಯಾವುದೇ ಜಾತಿ, ಧರ್ಮದ ಭೇದಭಾವವಿಲ್ಲ ಎಲ್ಲರನ್ನು ಒಗ್ಗೂಡಿಸುವ ಶಕ್ತಿ ಕ್ರೀಡೆಗಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದರು.
ನಗರಸಭಾ ಸದಸ್ಯ, ಸಮಾಜ ಸೇವಕ ಮಣಿ, ಎಎನ್ಎಸ್ ತಾಲೂಕು ಬಗರ್ಹುಕುಂ ಸಮಿತಿ ಅಧ್ಯಕ್ಷ ನಾಗೇಶ್, ಯುವ ಮುಖಂಡರಾದ ಗಣೇಶ್, ಮಹೇಶ್, ಓಂ ಕ್ರಿಕೇಟರ್ಸ್ನ ಪ್ರಮುಖರು ಸೇರಿದಂತೆ ಇನ್ನಿತರರು ಉಪಸ್ಥಿತರಿದ್ದರು. ಕೇಸರಿಪಡೆಯ ಕೆ.ಪಿ ಗಿರೀಶ್ ಅಧ್ಯಕ್ಷತೆ ವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post