ಕಲ್ಪ ಮೀಡಿಯಾ ಹೌಸ್
ಭದ್ರಾವತಿ: ರಾಜ್ಯದಲ್ಲಿ ಕೋವಿಡ್ ಎರಡನೆಯ ಅಲೆಯು ಈ ರೀತಿಯಲ್ಲಿ ಉಲ್ಬಣಾವಸ್ಥೆಗೆ ತಲುಪಲು ಆಡಳಿತ ಪಕ್ಷ ಬಿಜೆಪಿ ಹಾಗೂ ವಿರೋಧ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಜೆಡಿಎಸ್ಗಳೇ ನೇರ ಹೊಣೆ ಎಂದು ಆಮ್ ಆದ್ಮಿ ಪಕ್ಷದ ರಾಜ್ಯ ಮಾಧ್ಯಮ ಸಂಚಾಲಕ ಜಗದೀಶ್ ವಿ ಸದಂ ಕಿಡಿ ಕಾಡಿದ್ದಾರೆ.
ನಗರದಲ್ಲಿ ಪತ್ರಿಕಾಗೋಷ್ಟಿಯನ್ನುದ್ದೇಶಿಸಿ ಮಾತನಾಡಿದ ಅವರು, ಮಸ್ಕಿ, ಬಸವಕಲ್ಯಾಣ ಹಾಗೂ ಸಿಂದಗಿ, ಬೆಳಗಾಂ ಲೋಕಸಭಾ ಉಪ ಚುನಾವಣೆಗಳನ್ನು ಕಳೆದ ಒಂದು ತಿಂಗಳಿನಿಂದ ಅತ್ಯಂತ ಪ್ರತಿಷ್ಠೆಯ ವಿಷಯವನ್ನಾಗಿ ತೆಗೆದುಕೊಂಡಿರುವ ಈ ಎಲ್ಲ ಪಕ್ಷಗಳ ಪ್ರಮುಖ ನಾಯಕರುಗಳು ಒಬ್ಬರಿಗೊಬ್ಬರು ಕೆಸರೆರೆಚಿಕೊಂಡು ಅಬ್ಬರದ ಪ್ರಚಾರ ಕಾರ್ಯದಲ್ಲಿ ತೊಡಗಿದ್ದರು. ಇವರುಗಳ ಬೇಜವಬ್ದಾರಿ ನಡೆಯಿಂದಲೇ ರಾಜ್ಯದಲ್ಲಿ ಈಗ ಈ ರೀತಿಯ ಕೋವಿಡ್ ಎರಡನೆಯ ಅಲೆಯ ದುಸ್ಥಿತಿಗೆ ನೇರ ಕಾರಣ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ತಜ್ಞರ ಸಮಿತಿಯು ಹಲವಾರು ವರದಿಗಳನ್ನು ನೀಡಿದರೂ ಸಹ ರಾಜ್ಯವು ಮುಂದೆ ಕೊರೋನಾ ನಿಯಂತ್ರಿಸಲು ಎದುರಿಸಬೇಕಾಗಿದ್ದ ಆರೋಗ್ಯ ತುರ್ತು ಪರಿಸ್ಥಿತಿಯನ್ನು ಸರ್ಕಾರದ ಮಂತ್ರಿಗಳು ಹಾಗೂ ವಿರೋಧ ಪಕ್ಷದ ಯಾವ ಪ್ರಮುಖ ನಾಯಕರುಗಳು ಅಂದಾಜಿಸಲಿಲ್ಲ. ಮುಂಜಾಗ್ರತಾ ಕ್ರಮಗಳ ಬಗ್ಗೆ ಮಾರ್ಚ್ನಲ್ಲಿ ನಡೆದ ಎರಡೂ ಸದನಗಳ ಅಧಿವೇಶನದಲ್ಲಿ ಸಹ ಚರ್ಚಿಸದೆ ಸದನದ ಸಮಯವನ್ನು ಹಾಳು ಮಾಡುವುದರಲ್ಲಿ ನಿರತರಾಗಿದ್ದರು ಎಂದು ಹೇಳಿದ್ದಾರೆ.
ಮುಖ್ಯಮಂತ್ರಿ ಯಡಿಯೂರಪ್ಪ ಅವರು ತಮ್ಮ ಸರ್ಕಾರವನ್ನು ಭದ್ರಪಡಿಸಿಕೊಳ್ಳಲು ಉಪ ಚುನಾವಣೆಯಲ್ಲಿ ಗೆಲುವು ಸಾಧಿಸಿ ತೋರಿಸುವುದೇ ನಮ್ಮ ಗುರಿ ಎಂಬಂತೆ ಮಾತನಾಡಿದರು. ಮೂರೂ ಪಕ್ಷಗಳ ಯಾವ ಶಾಸಕರುಗಳು ಸಹ ಮುಂದಾಗಬಹುದಾದ ಕೋವಿಡ್ ಎರಡನೇ ಅಲೆಯ ಅನಾಹುತಗಳ ಮುಂಜಾಗ್ರತಾ ಕ್ರಮದ ಬಗ್ಗೆ ಚರ್ಚಿಸಲೇ ಇಲ್ಲ. ಆರೋಗ್ಯ ಸಚಿವ ಸುಧಾಕರ್ ವ್ಯತಿರಿಕ್ತವಾಗಿ ಈ ಎಲ್ಲ ದುರವಸ್ಥೆಗೆ ರಾಜ್ಯದ ಜನತೆಯೇ ಕಾರಣ ಎಂದು ಆಪಾದಿಸುತ್ತಿದ್ದಾರೆ. ಸಚಿವರ ಬೇಜವಾಬ್ದಾರಿ ಹೇಳಿಕೆಯನ್ನು ಆಮ್ ಆದ್ಮಿ ಪಕ್ಷ ಖಂಡಿಸುತ್ತದೆ ಎಂದಿದ್ದಾರೆ.
ಜನಸಾಮಾನ್ಯರು ಬೆಡ್, ಆಕ್ಸಿಜನ್, ಐಸಿಯುಗಳು ಸಿಗದೆ ರಾಜ್ಯದಲ್ಲಿ ಅದರಲ್ಲೂ ಬೆಂಗಳೂರಿನಲ್ಲಿ ಧಾರುಣವಾಗಿ ಸಾವನ್ನಪ್ಪುತ್ತ್ತಿದ್ದಾರೆ. ಮುಖ್ಯಮಂತ್ರಿಗಳಾದಿಯಾಗಿ ಮೂರೂ ಪಕ್ಷಗಳ ಪ್ರಮುಖ ನಾಯಕರುಗಳು ಈ ಎಲ್ಲಾ ದುರವಸ್ಥೆಗೆ ನೇರ ಹೊಣೆಗಾರರು ಎಂದು ಜಗದೀಶ್ ವಿ ಸದಂ ಆಕ್ರೋಶ ವ್ಯಕ್ತಪಡಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಪಕ್ಷದ ಮಹಿಳಾ ಮುಖಂಡರಾದ ಶ್ರುತಿ ಪಿ.ಎಂ. ಕಾವೇರಿಪುರ ಭಾಗವಹಿಸಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post