ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಭದ್ರಾವತಿ: ಚಿಕ್ಕಮಗಳೂರು ಜಿಲ್ಲೆಯ ಚಂದ್ರದ್ರೋಣ ಪರ್ವತದಲ್ಲಿರುವ ಶ್ರೀಗುರು ದತ್ತಾತ್ರೇಯ ಪೀಠಕ್ಕೆ ಹಿಂದೂ ಅರ್ಚಕರನ್ನು ನೇಮಕ ಮಾಡಬೇಕು ಹಾಗೂ ತ್ರಿಕಾಲ ಪೂಜಾ ವ್ಯವಸ್ಥೆ ಮಾಡಬೇಕು ಎಂದು ಬಜರಂಗದಳ ಮನವಿ ಮಾಡಿದೆ.
ಈ ಕುರಿತಂತೆ ತಹಶೀಲ್ದಾರ್ ಮೂಲಕ ಮನವಿ ಸಲ್ಲಿಸಲಾಗಿದ್ದು, ದತ್ತ ಪೀಠದಲ್ಲಿ ಹಿಂದೂ ಅರ್ಚಕರನ್ನು ನೇಮಿಸಬೇಕು, ಹಿಂದೂಗಳಿಗೆ ದಿನ ನಿತ್ಯ ಪಾದುಕೆಯ ದರ್ಶನಕ್ಕೆ ಅವಕಾಶ ನೀಡಬೇಕು ಎಂದು ಮನವಿ ಮಾಡಲಾಗಿದೆ.
ಇದು ಸಂಪೂರ್ಣ ಹಿಂದೂ ದೇವಾಲಯವಾಗಿದ್ದು, ಕರ್ನಾಟಕ ಸರ್ಕಾರದ ಮುಜರಾಯಿ ಇಲಾಖೆ ವ್ಯವಸ್ಥೆಗೆ ಒಳಪಟ್ಟಿದೆ. ಅಧಿಕೃತವಾಗಿ ಸರ್ಕಾರಿ ದಾಖಲೆಗಳಲ್ಲೂ ಸಹ ಇನಾಂ ದತ್ತಾತ್ರೇಯ ಪೀಠ ಎಂದೇ ಉಲ್ಲೇಖಿಸಲಾಗಿದೆ. ಆದರೆ, ಹಿಂದೂ ಪೂಜಾ ಪದ್ದತಿಯಲ್ಲಿ ನಂಬಿಕೆಯೇ ಇಲ್ಲದ ಮುಜಾವರ್(ಮುಸ್ಲಿಂ ಅರ್ಚಕ)ರನ್ನು ನೇಮಿಸಿರುವುದು ಸಮಸ್ತ ಹಿಂದೂಗಳ ಭಕ್ತಿ, ಶ್ರದ್ಧೆ ಹಾಗೂ ಭಾವನೆಗಳಿಗೆ ಆಘಾತವಾಗಿದೆ. ಹೀಗಾಗಿ, ಹಿಂದೂ ಅರ್ಚಕರನ್ನೇ ನೇಮಿಸಬೇಕು ಎಂದು ಕೋರಲಾಗಿದೆ.
ಇನ್ನು, ಈ ವರ್ಷದ ದತ್ತ ಮಾಲೆ ಅಭಿಯಾನವನ್ನು ಯಾವುದೇ ತೊಂದರೆ ಇಲ್ಲದೆ ನಡೆಸಲು ಕ್ರಮ ಕೈಗೊಳ್ಳಬೇಕು. ಶ್ರೀ ಗುರು ದತ್ತಾತ್ರೇಯರ ಪಾದುಕೆಗಳಿಗೆ ತ್ರಿಕಾಲ ಪೂಜೆಗೆ ವ್ಯವಸ್ಥೆ ಮಾಡಬೇಕು ಎಂದು ವಿನಂತಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















