ಭದ್ರಾವತಿ: ವಿದ್ಯಾರ್ಥಿಗಳು ಸಮಾಜಕ್ಕೆ ನೀಡುವ ಕೊಡುಗೆ ಕುರಿತು ಅರ್ಥೈಸಿಕೊಳ್ಳುವಂತಾಗಬೇಕು. ಯುವಕರು ಪುಸ್ತಕಗಳನ್ನು ಓದಿ ಮುಂದೇನಾಗಬೇಕೆಂಬುದನ್ನು ಯೋಚಿಸದೆ ಕೇವಲ ಮೊಬೈಲ್ ಬಳಕೆಗೆ ದಾಸರಾಗಿ ಸ್ವಂತಿಕೆ ಕಳೆದುಕೊಂಡಿದ್ದಾರೆ ಎಂದು ನಗರಸಭಾ ಪೌರಾಯುಕ್ತ ಮನೋಹರ್ ಹೇಳಿದರು.
ಹೊಸಮನೆ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಆವರಣದಲ್ಲಿ ಸರಕಾರಿ ಪ್ರಥಮ ದರ್ಜೆ ಕಾಲೇಜು ಹಾಗು ಸ್ನಾತಕೋತ್ತರ ಕೇಂದ್ರ ಸಂಯುಕ್ತಾಶ್ರಯದಲ್ಲಿ ಹಮ್ಮಿಕೊಂಡಿದ್ದ 2018-19 ನೆಯ ಸಾಲಿನ ಸಾಂಸ್ಕೃತಿಕ, ಕ್ರೀಡಾ, ರಾಷ್ಟ್ರೀಯ ಸೇವಾ ಯೋಜನೆ, ರೋವರ್ಸ್-ರೇಂಜರ್ಸ್, ಯುವ ರೆಡ್ಕ್ರಾಸ್ ಮತ್ತು ಎನ್ಸಿಸಿ ಚಟುವಟಿಕೆಗಳ ಸಮಾರೋಪ ಸಮಾರಂಭ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ವಿದ್ಯಾರ್ಥಿಗಳು ಕಲಿಕೆಗೆ ಪಾಮುಖ್ಯ ನೀಡುವಂತಾಗಬೇಕು. ಯುವಕರು ಸಮಾಜವನ್ನು ತಿದ್ದುವಂತಹ ಕೆಲಸ ಮಾಡುವುದು ಅಗತ್ಯವಿದೆ. ಕೇವಲ ಅಧಿಕಾರಿಗಳಾಗಿ ಸಾಧಿಸದ ಕರ್ತವ್ಯ ಎಲ್ಲರು ಮಾಡಲು ಸಿದ್ದರಾಗಿ ಸಮಾಜ ತಿದ್ದಲು ಶ್ರಮಿಸಬೇಕು ಎಂದರು.
ನ್ಯೂಟೌನ್ ಸರ್ಕಾರಿ ಸರ್.ಎಂ. ವಿಶ್ವೇಶ್ವರಾಯ ಕಲಾ ಮತ್ತು ವಾಣಿಜ್ಯ ಕಾಲೇಜಿನ ಪ್ರಾಂಶುಪಾಲ ಎಂ.ಜಿ. ಉಮಾಶಂಕರ್ ಸಮಾರೋಪ ನುಡಿಗಳನ್ನಾಡಿ, ಇಂದಿನ ಶೈಕ್ಷಣಿಕ ಯುಗದಲ್ಲಿ ವಿದ್ಯಾರ್ಥಿಗಳ ಸಂಖ್ಯೆ ಕುಂಠಿತಗೊಳ್ಳುತ್ತಿರುವುದು ವಿಷಾಧನೀಯ. ಶೈಕ್ಷಣಿಕ ವಿಚಾರದಲ್ಲಿ ವಿದ್ಯಾರ್ಥಿಗಳು ಜ್ಞಾನ ಸಂಪಾದನೆಗೆ ಒತ್ತು ನೀಡದೆ, ಆಸಕ್ತಿ ತೋರದೆ ಇರುವುದು ದುರಂತವಾಗಿದೆ. ಕ್ರೀಯಾಶೀಲತೆಗೆ ವಿದ್ಯೆಯೆ ಪ್ರಾಮುಖ್ಯ. ಲೇಖನಿ ಹಿಡಿದು ಸಾಧಕರಾಗಬೇಕೆ ವಿನಾ ಮೊಬೈಲ್ ಫೋನ್ಗಳಿಂದ ಏನನ್ನು ಸಾಧಿಸಲು ಸಾಧ್ಯವಿಲ್ಲ ಎಂದರು.
ಶಾಲಾ ಕಾಲೇಜುಗಳಲ್ಲಿ ಕಾಲಾವಕಾಶದ ತೊಂದರೆಯಿಂದಾಗಿ ಇಂದಿನ ಸೆಮಿಸ್ಟರ್ ಪರೀಕ್ಷೆಗಳಿಂದ ಅಧ್ಯಯನ ಮಾಡಲು ಸಾಧ್ಯವಾಗದೆ, ಪಠ್ಯೇತರ ಚಟುವಟಿಕೆಗಳಿಗೂ ಭಾಗಿಯಾಗದೇ ಕ್ಲಿಷ್ಟ ಪರಿಸ್ಥಿತಿ ಎದುರಿಸುವಂತಾಗಿದೆ. ಮೊದಲನೇ ಸೆಮಿಸ್ಟರ್ ಓದಿನ ವಿದ್ಯಾರ್ಥಿ ಕೊನೆಯ ಸೆಮಿಸ್ಟರ್ ಪರೀಕ್ಷೆ ಸಮಯಕ್ಕೆ ಹಿಂದಿನ ಎಲ್ಲಾ ವಿಷಯಗಳನ್ನು ಮರೆಯುವಂತಾಗಿದೆ. ಇದರಿಂದ ಯುವ ಜನಾಂಗದ ಸಮಸ್ಯೆ ದೇಶದ ಸಮಸ್ಯೆಯಾಗಿ ಮಾರ್ಪಟ್ಟಿದೆ. ಅದ್ದರಿಂದ ವಿದ್ಯಾರ್ಥಿಗಳು ಸ್ಪರ್ಧಾತ್ಮಕ ಪರೀಕ್ಷೆಗಳಿಗೆ ಹೆಚ್ಚಿನ ಒತ್ತು ನೀಡಿ ಜ್ಞಾನ ಸಂಪಾದನೆಗೆ ಮುಂದಾಗಬೇಕು ಎಂದರು ಕರೆ ನೀಡಿದರು.
ಹಿಂದೆ ವಿದ್ಯಾರ್ಥಿಗಳು ಗುರುಗಳನ್ನು ಕಾದು ಪಾಠಪ್ರವಚನಗಳನ್ನು ಕಲಿಯುವ ಸ್ಥಿತಿ ಇತ್ತು. ಆದರೆ ಇಂದು ವಿದ್ಯಾರ್ಥಿಗಳನ್ನು ಕಾಯುವಂತಹ ಸ್ಥಿತಿ ಬಂದೊದಗಿದೆ. ವಿದ್ಯಾರ್ಥಿಗಳು ಪ್ರಸ್ತುತ ವರ್ತಮಾನಗಳಗಳ ಬಗ್ಗೆ ಅರಿಯಲು ಗ್ರಂಥಾಲಯಗಳ ಬಳಕೆ ಮಾಡಿಕೊಳ್ಳಬೇಕು. ಆದರೆ ಇಂದಿನ ದಿನಗಳಲ್ಲಿ ಓದುಗರ ಸಂಖ್ಯೆ ಕುಂಠಿತಗೊಂಡಿವೆ. ಗ್ರಂಥಾಲಯಗಳು ಜ್ಞಾನ ಸಂಪಾದನೆಗೆ ಬಂಡಾರವಾಗಿರುವುದರಿಂದ ಕಲಿಕೆಗೆ ಹೆಚ್ಚು ಸಮಯ ವಿನಿಯೋಗಿಸುವಂತೆ ಕರೆ ನೀಡಿದರು.
ಕಾಲೇಜು ಪ್ರಾಂಶುಪಾಲ ಡಾ.ಬಿ.ಜಿ. ಧನಂಜಯ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿ ವಿದ್ಯಾರ್ಥಿಗಳು ವಿದ್ಯೆಯಿಂದ ವಂಚಿತರಾಗಬಾರದು. ಕಲಿಕೆಯಲ್ಲಿ ಕ್ರಮ ಬದ್ದತೆ ಇರಬೇಕು. ಪಠ್ಯೇಗಳ ಜೊತೆಗೆ ಪಠ್ಯೇತರ ಚಟುವಟಿಕೆಗಳಿಗೂ ಒತ್ತು ನೀಡಿದ್ದಲ್ಲಿ ಉನ್ನತ ವ್ಯಕ್ತಿಗಳಾಗಲು ಸಾಧ್ಯ ಎಂದರು.
ಸರ್ಎಂವಿ ಕಾಲೇಜಿನ ದೈಹಿಕ ಶಿಕ್ಷಣ ವಿಭಾಗದ ಮುಖ್ಯಸ್ಥ ಪ್ರೊ.ಕರಿಸಿದ್ದಪ್ಪ ದೈಹಿಕ ಶಿಕ್ಷಣದ ಮಾಹಿತಿ ನೀಡಿದರು. ವೇದಿಕೆಯಲ್ಲಿ ಸಾಂಸ್ಕೃತಿಕ ವೇದಿಕೆಯ ಸಂಚಾಲಕ ಎಂ.ಮಲ್ಲಪ್ಪ, ವಿದ್ಯಾರ್ಥಿ ಕ್ಷೇಮಾಧಿಕಾರಿ ಡಾ.ಬಿ.ಬಸವರಾಜಪ್ಪ, ಹಳೇಯ ವಿದ್ಯಾರ್ಥಿಗಳ ವೇದಿಕೆಯ ಡಾ.ಬಿ.ಜಿ. ಅಮೃತೇಶ್ವರ್, ಎಚ್.ಬಿ. ಗಂಗಾಧರ್, ಕೆ.ಬಿ. ರೇವಣ ಸಿದ್ದಪ್ಪ ಮುಂತಾದವರಿದ್ದರು.
ಯಶಸ್ವಿನಿ ಪ್ರಾರ್ಥಿಸಿ, ಅಕ್ಷತಾ ಮತ್ತು ತಂಡದಿಂದ ನಾಡಗೀತೆ ಹಾಡಿದರೆ, ಎಸ್. ಪವಿತ್ರ ಸ್ವಾಗತಿಸಿದರೆ, ಮುತ್ತುರಾಜ್ ಮತ್ತು ಸಹನಾ ಕಾರ್ಯಕ್ರಮ ನಿರೂಪಿಸಿದರು. ಇದೇ ಸಂದರ್ಭದಲ್ಲಿ ಕ್ರೀಡೆ ಮತ್ತಿತರೆ ಚಟುವಟಿಕೆಗಳಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಗೆ ಬಹುಮಾನ ವಿತರಿಸಲಾಯಿತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post