ಭದ್ರಾವತಿ: ನಗರದ ನ್ಯೂಟೌನ್ ಆಂಜನೇಯ ಅಗ್ರಹಾರ ಕುಟುಂಬವೊಂದರ ಆಸ್ತಿ ಲಪಟಾಯಿಸಲು ಸಂಚು ಹೂಡಿರುವ ಸ್ವಜಾತಿಯ ಮತ್ತೊಂದು ಕುಟುಂಬವೊಂದು ನಗರಸಭೆಯಿಂದ ಸುಳ್ಳು ಮರಣ ದೃಢೀಕರಣ ಪತ್ರ ಪಡೆದಿದ್ದಾರೆಂದು ದಸಂಸ ಸಂಚಾಲಕ ವಿನೋದ್ ಆರೋಪಿಸಿ ತಪ್ಪಿತಸ್ಥರ ವಿರುದ್ದ ಕಾನೂನು ಶಿಸ್ತುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದಾರೆ.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಆಂಜನೇಯ ಅಗ್ರಹಾರದ ವಾಸಿ ಪ್ಯಾರೀಬಿ ಎಂಬುವರು ಕೆಲಕಾಲ ವಿದೇಶದಲ್ಲಿದ್ದರು. ಎರಡು ಮೂರು ವರ್ಷಕ್ಕೊಮ್ಮೆ ಮಗಳ ಮತ್ತು ತಾಯಿಯ ಯೋಗ ಕ್ಷೇಮ ವಿಚಾರಿಸಲು ಹಾಗೂ ಆರೈಕೆ ಮಾಡಲು ಬಂದು ಹೋಗುತ್ತಿದ್ದರು. ಇವರಿಬ್ಬರ ಉಸ್ತುವಾರಿ ಮತ್ತು ಮನೆ ನೋಡಿಕೊಳ್ಳಲು ತನ್ನ ಸೋದರಿ ನಸೀಮ ಎಂಬುವವರಿಗೆ ವಹಿಸಲಾಗಿತ್ತು. ಇದನ್ನೇ ಬಂಡವಾಳ ಮಾಡಿಕೊಂಡ ಸೋದರಿ ಮತ್ತು ಆಂಜನೇಯ ಅಗ್ರಹಾರದ ವಾಸಿ ಸಂಬಂಧಿಕರಾದ ಮಹಮ್ಮದ್ ಫಯಾಜ್, ರಹಮತುಲ್ಲಾ, ಮಹಮದ್ ಸುಹೇಲ್ ಹಾಗೂ ಬ್ಯಾಂಕ್ ಉದ್ಯೋಗಿ ಸತ್ಯ ಎಂಬುವವರು ಒಗ್ಗೂಡಿ ನಗರಸಭೆಯಿಂದ ಮನೆಯ ಯಜಮಾನಿ ಪ್ಯಾರೀಬಿ ಮರಣ ಹೊಂದಿದ್ದಾರೆಂದು ಸುಳ್ಳು ಮರಣ ದಾಖಲೆ ಪಡೆದಿದ್ದಾರೆ.
ವಿದೇಶದಿಂದ ಆಗಮಿಸಿದ ಪ್ಯಾರಿಬಿ ವಾಸಕ್ಕೆ ಮನೆ ನೀಡುವಂತೆ ಸೋದರಿಯನ್ನು ಕೇಳಿದಾಗ ಸುಳ್ಳು ದಾಖಲೆ ಪಡೆದ ವಿಷಯ ಬೆಳಕಿಗೆ ಬಂದಿದೆ. ನಂತರ ಆಕೆಯು ಆಸ್ತಿ ಲಪಟಾಯಿಸಲು ಯತ್ನಿಸಿ ಸುಳ್ಳು ಮರಣದಾಖಲೆ ಪಡೆದ ಬಗ್ಗೆ ಹಳೇನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ. ಪೊಲೀಸರು ಆರೋಪಿಗಳಾದ ಮಹಮ್ಮದ್ ಫಯಾಜ್, ನಸೀಮ, ರಹಮತುಲ್ಲಾ, ಮಹಮದ್ ಸುಹೇಲ್ ಹಾಗೂ ಬ್ಯಾಂಕ್ ಉದ್ಯೋಗಿ ಸತ್ಯ ಎಂಬುವವರ ಮೇಲೆ ಪ್ರಕರಣ ದಾಖಲಿಸಿದ್ದಾರೆ.
ಆದರೆ ಪೊಲೀಸರು ಕಳೆದ ಫೆಬ್ರವರಿ 4 ರಂದು ಪ್ರಕರಣ ದಾಖಲಿಸಿದ್ದರು ಆರೋಪಿಗಳನ್ನು ಬಂಧಿಸದೆ ನಿರ್ಲಕ್ಷ ದೋರಣೆ ತಾಳಿದ್ದಾರೆ. ಜೀವಂತವಾಗಿದ್ದಾಗಲೆ ಸುಳ್ಳು ಮರಣ ದಾಖಲೆ ನೀಡಿರುವ ನಗರಸಭೆ ಅಧಿಕಾರಿಗಳ ಮೇಲೆ ಶಿಸ್ತುಕ್ರಮ ಕೈಗೊಳ್ಳಲು ಹಿಂದೇಟು ಹಾಕಲಾಗುತ್ತಿದೆ. ಅನ್ಯಾಯಕ್ಕೊಳಗಾದ ಮಹಿಳೆಗೆ ಯಾರು ದಿಕ್ಕಿಲ್ಲವೆಂದು ಅಧಿಕಾರಿಗಳು ಕ್ರಮ ಕೈಗೊಳ್ಳು ಹಿಂದೇಟು ಹಾಕುವುದು ಖಂಡನೀಯ. ಕೂಡಲೇ ಆರೋಪಿಗಳನ್ನು ಬಂಧಿಸಬೇಕು. ಇಲ್ಲದಿದ್ದಲ್ಲಿ ಪೊಲೀಸರ ಮತ್ತು ನಗರಸಭೆಯ ಅಧಿಕಾರಿಗಳ ವಿರುದ್ದ ಹೋರಾಟ ರೂಪಿಸಲಾಗುವುದು ಎಂದು ವಿನೋದ್ ಆರೋಪಿಸಿದರು.
ಸುದ್ದಿಗೋಷ್ಠಿಯಲ್ಲಿ ಅನ್ಯಾಯಕ್ಕೆ ಬಲಿಯಾದ ಪ್ಯಾರೀಬಿ, ಆಕೆಯ ಪುತ್ರಿ ಸಬಾನ, ಅಳಿಯ ನಾಸೀರ್ ಖಾನ್, ದಸಂಸ ಮುಖಂಡರಾದ ಪಳನಿರಾಜ್, ಏಳುಮಲೈ, ಕುಬೇಂದ್ರಪ್ಪ, ಅಣ್ಣಪ್ಪ, ಸುಧಾ, ಗುಣಶೇಖರ್, ಪರಮಶಿವಯ್ಯ, ಸುವರ್ಣ ಮುಂತಾದವರಿದ್ದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post