ಭದ್ರಾವತಿ: ಕಾರ್ಮಿಕ ದಿನಾಚರಣೆಯ ಅಂಗವಾಗಿ ಬುಧವಾರ ಸರ್.ಎಂ. ವಿಶ್ವೇಶ್ವರಯ್ಯ ದ್ವಿಚಕ್ರ ವಾಹನ ದುರಸ್ಥಿಗಾರರ ಕ್ಷೇಮಾಭಿವೃದ್ಧಿ ಸಂಘದ ಸದಸ್ಯರು ನಗರದ ಪ್ರಮುಖ ಬೀದಿಗಳಲ್ಲಿ ಮೆರವಣಿಗೆ ಮಾಡಿ ಕಾರ್ಮಿಕ ದಿನಾಚರಣೆಯ ಮಹತ್ವವನ್ನು ಪ್ರಚುರ ಪಡಿಸಿದರು.
ಹಳೇನಗರದ ಕನಕ ಮಂಟಪ ಮೈದಾನದಲ್ಲಿ ಸಂಘದ ಅಧ್ಯಕ್ಷ ಬಾಬು ಮತ್ತು ಗೌರವಾಧ್ಯಕ್ಷ ಸುರೇಶ್ ಮುಂತಾದವರು ಮಾತನಾಡಿ, ಕಾರ್ಮಿಕ ದಿನಾಚರಣೆಯ ಅಂಗವಾಗಿ ಏರ್ಪಡಿಸಿರುವ ಕ್ರೀಡಾಕೂಟದಲ್ಲಿ ಎಲ್ಲರೂ ಸಕ್ರಿಯವಾಗಿ ತೊಡಗಿಸಿಕೊಂಡು ಪರಸ್ಪರ ಸಂತೋಷದಿಂದ ಕ್ರೀಡೆಗಳಲ್ಲಿ ಭಾಗವಹಿಸಿರುವುದು ಸಂತಸ ತಂದಿದೆ. ಪ್ರತಿನಿತ್ಯ ಕೆಲಸದ ಜಂಜಾಟದಲ್ಲಿ ಸಮಯ ಕಳೆಯುವ ಕಾರ್ಮಿಕರಾದ ನಾವು ಮೇ ದಿನವಾದಾರು ಪರಸ್ಪರ ಒಗ್ಗೂಡಿರುವುದು ಹೆಗ್ಗಳಿಕೆಯಾಗಿದೆ. ಅದೇ ಸಂದರ್ಭದಲ್ಲಿ ಕಾರ್ಮಿಕರ ಸಮಸ್ಯೆ ಹಾಗು ಮೂಲಭೂತ ಸೌಲಭ್ಯಗಳ ಚಿಂತನೆ ನಡೆಸಬೇಕಿದೆ. ಸಮಸ್ಯೆಗಳನ್ನು ಪರಿಹರಿಸಿಕೊಳ್ಳಲು ಸಂಘಟನೆ ಅಗತ್ಯವಾಗಿದೆ ಎಂದರು.
ಸಂಘದ ಸದಸ್ಯರು ಕ್ರೀಡಾ ಕೂಟದ ವಿವಿಧ ಸ್ಪರ್ಧೆಗಳಲ್ಲಿ ಭಾಗವಹಿಸಿದ್ದರು. ಉಪಾಧ್ಯಕ್ಷ ಶ್ರೀನಿವಾಸ್ ಸೇರಿದಂತೆ ಸದಸ್ಯರುಗಳು ಭಾಗವಹಿಸಿ ಸಂಭ್ರಮಿಸಿದರು.
ಕಾರ್ಯಕ್ರಮಕ್ಕೂ ಮುನ್ನ ಕಾರ್ಮಿಕರು ರೈಲ್ವೆ ನಿಲ್ದಾಣದ ಮುಂಭಾಗದ ಭಾರತರತ್ನ ಸರ್.ಎಂ. ವಿಶ್ವೇಶ್ವರಯ್ಯನವರ ಪುತ್ಥಳಿಗೆ ಮಾಲಾರ್ಪಣೆ ಮಾಡುವ ಮೂಲಕ ಮೆರವಣಿಗೆಗೆ ಚಾಲನೆ ನೀಡಿದರು. ಮೆರವಣಿಗೆಯು ಡಾ.ರಾಜ್ಕುಮಾರ್ ರಸ್ತೆ, ಮಾಧವಾಚಾರ್ ವೃತ್ತ, ಚನ್ನಗಿರಿ ರಸ್ತೆ, ರಂಗಪ್ಪ ವೃತ್ತ, ಕೋರ್ಟ್ ರಸ್ತೆ ಮೂಲಕ ಸಾಗಿ ಕನಕ ಮಂಟಪ ಮೈದಾನದಲ್ಲಿ ಜಮಾಯಿಸಿದರು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post