ಭದ್ರಾವತಿ: ವೈನ್ಸ್ ಅಂಗಡಿಯ ಮುಂಭಾಗ ಜಗಳ ಬಿಡಿಸಲು ಹೋದ ಯುವಕನೊಬ್ಬ ಚಾಕು ಇರಿತದಿಂದ ಮೃತಪಟ್ಟ ಘಟನೆ ಭಾನುವಾರ ತಡರಾತ್ರಿ ನಡೆದಿದೆ.
ನಗರದ ಹೊರವಲಯ ಹಿರಿಯೂರು ಗ್ರಾಮದ ಅಪ್ಪಾಜಿ ಬಡಾವಣೆಯ ರಮೇಶ್ ಮೃತಪಟ್ಟಿದ್ದು, ಇಬ್ಬರಿಗೆ ಗಂಭೀರ ಸ್ವರೂಪದ ಗಾಯಗೊಂಡಿದ್ದಾರೆ. ಈ ಸಂಬಂಧ ಮೃತನ ಸಹೋದರ ರವಿ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ಘಟನೆಯ ವಿವರ:
ಬೊಮ್ಮನಕಟ್ಟೆಯ ವೈನ್ಸ್ ಸ್ಟೋರ್ ಮುಂಭಾಗ ರಮೇಶ್ ಮತ್ತು ಸ್ನೇಹಿತರಾದ ಸಂತೋಷ್ ಸುರೇಶ್ ಎಂಬುವವರು ನಿಂತಿದ್ದಾಗ ಮುಜಾಹಿದ್, ಮೌಲಾಲಿ ಹಾಗು ಫರೀದ್ ಎಂಬುವವರು ನಿಲ್ಲಿಸಿರುವ ಬೈಕನ್ನು ಬೀಳಿಸಿದ್ದರಿಂದ ಎಡಭಾಗದ ಇಂಡಿಕೇಟರ್ ಹಾಳಾಗಿರುತ್ತದೆ. ಈ ವಿಚಾರವನ್ನು ಸಂತೋಷ್ ಮತ್ತು ಸುರೇಶ್ ಕೇಳಲಾಗಿ ಇಬ್ಬರನ್ನು ಅವ್ಯಾಚ ಪದಗಳಿಂದ ಬೈದು ಹಲ್ಲೆಗೆ ಮುಂದಾಗಿದ್ದಾರೆ. ಹಲ್ಲೆಯನ್ನು ಬಿಡಿಸಲು ಮಧ್ಯೆ ಪ್ರವೇಶಿಸಿದ ರಮೇಶ್ನನ್ನು ಮುಜಾಹಿದ್ ಚಾಕುವಿನಿಂದ ಹಿರಿದ ಪರಿಣಾಮ ಸ್ಥಳದಲ್ಲಿ ಕುಸಿದಿದ್ದಾನೆ. ಅಲ್ಲದೆ ಸಂತೋಷ್ ಹಾಗು ಸುರೇಶ್ರನ್ನು ಗಾಯಪಡಿಸಿ ಅಲ್ಲಿಂದ ಪರಾರಿಯಾಗಿರುತ್ತಾರೆ ಎಂದು ದೂರಿನಲ್ಲಿ ಆರೋಪಿಸಲಾಗಿದೆ.
ರಮೇಶ್ ಎದೆಗೆ ಚಾಕುವಿನಿಂದ ತಿವಿದ ಗಾಯವಾಗಿ, ಮುಖಕ್ಕೆ ಪೆಟ್ಟು ಬಿದ್ದ ಹಿನ್ನಲೆಯಲ್ಲಿ ರಕ್ತದ ಮಡುವಿನಲ್ಲಿ ಬಿದ್ದಿದ್ದ ವಿಷಯ ತಿಳಿದ ಸಹೋದರ ರವಿ ಮತ್ತು ಅಕ್ಕನ ಮಗ ಸಂಜಯ್ ಸ್ಥಳಕ್ಕೆ ಧಾವಿಸಿ ಸಾರ್ವಜನಿಕ ಆಸ್ಪತ್ರೆಗೆ ಕರೆದೊಯ್ದಿದ್ದಾರೆ. ರಮೇಶ್ನನ್ನು ಪರೀಕ್ಷೆ ನಡೆಸಿದ ವೈದ್ಯರು ಸಾವನ್ನಪ್ಪಿರುವುದು ದೃಢಪಡಿಸಿದ್ದಾರೆ. ಗಾಯಗೊಂಡಿರುವ ಸುರೇಶ್ ಮತ್ತು ಸಂತೋಷ್ ರವರನ್ನು ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗ ಮೆಗ್ಗಾನ್ ಆಸ್ಪತ್ರೆಗೆ ಕರೆದ್ಯೊಯಲಾಗಿದೆ. ಈ ಸಂಬಂಧ ಪೇಪರ್ ಟೌನ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ತನಿಖೆ ಕೈಗೊಂಡಿದ್ದಾರೆ.
Discussion about this post