ಭದ್ರಾವತಿ: ರಾಜ್ಯದಲ್ಲಿ ಅಧಿಕಾರ ನಡೆಸುತ್ತಿರುವ ಸಮಿಶ್ರ ಸರಕಾರ ತುಘಲಕ್ ದರ್ಬಾರ್ ನಡೆಸುತ್ತಿದೆ. ವಿಧಾನಸೌಧದಲ್ಲಿ ಸಚಿವರು ಕಾಣೆಯಾಗಿದ್ದಾರೆ. ಶಾಸಕರಿಗೆ ಉಸಿರುಗಟ್ಟಸುವ ವಾತಾವರಣ ಸೃಷ್ಟಿಯಾಗಿದೆ ಎಂದು ಮಾಜಿ ಮುಖ್ಯಮಂತ್ರಿ ಹಾಗು ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್. ಯಡಿಯೂರಪ್ಪ ಹೇಳಿದರು.
ಅವರು ಸಿದ್ದಾರೂಢನಗರದ ಶ್ರೀ ಬಸವೇಶ್ವರ ಸಭಾ ಭವನದಲ್ಲಿ ಭಾರತೀಯ ಜನತಾ ಪಕ್ಷ ತಾಲೂಕು ಘಟಕ ಹಮ್ಮಿಕೊಂಡಿದ್ದ ಕಾರ್ಯಕರ್ತರ ಸಭೆಯನ್ನು ಉದ್ಘಾಟಿಸಿ ಮಾತನಾಡಿದರು.
ರಾಜ್ಯ ಸಮಿಶ್ರ ಸರಕಾರ ಅಧಿಕಾರಕ್ಕೆ ಬಂದ ನಂತರ ರೈತರ ಸಾಲಮನ್ನಾ ಮಾಡುವ ಭರವಸೆ ನೀಡಿತ್ತು. ಆದರೆ ಸಾಲವು ಮನ್ನವಾಗದೇ, ಜಮಾಮಾಡಿರುವುದಾಗಿ ಹೇಳಿರುವ ವಿಚಾರ ಅತ್ತ ರೈತರಿಗೆ ಸೇರದೆ ಕಂಗಾಲಾಗಿ ಸುಮಾರು 150 ಕ್ಕು ಹೆಚ್ಚು ರೈತರು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಸಚಿವರುಗಳು ಹೋಟೆಲ್ಗಳಲ್ಲಿ ತಂಗಿದ್ದು ರಾಜ್ಯದ ಎಲ್ಲಾ ಕ್ಷೇತ್ರಗಳಲ್ಲಿ ಅಭಿವೃದ್ದಿ ಕಾರ್ಯಗಳು ಮರಿಚಿಕೆಯಾಗಿವೆ. ಮೈಸೂರಿನಲ್ಲಿ ನಡೆಯುತ್ತಿರುವ ದಸರಾ ಉತ್ಸವ ಕಾರ್ಯಕ್ರಮಕ್ಕೆ ಕೈ ನಾಯಕರು ಗೈರು ಹಾಜರಾಗಿರುವುದನ್ನು ಕಂಡರೆ ಉಭಯರಲ್ಲೂ ಅಸಮಾದಾನದ ಹೊಗೆಯಾಡುತ್ತಿರುವುದು ಗೋಚರಿಸುತ್ತಿದೆ ಎಂದರು.
ಶಿವಮೊಗ್ಗ, ಮಂಡ್ಯ ಹಾಗು ಬಳ್ಳಾರಿ ಜಿಲ್ಲೆಗಳಲ್ಲಿ ಅವಳಿ ಪಕ್ಷದ ನಾಯಕರು ಅಭ್ಯರ್ಥಿಗಳ ಹುಡುಕಾಟದಲ್ಲಿದ್ದಾರೆ. ಈಗಾಗಲೇ ಪಕ್ಷದ ಅಭ್ಯರ್ಥಿಗಳನ್ನು ಘೋಷಿಸಿದ್ದು ಮೂರು ಕ್ಷೇತ್ರದಲ್ಲಿ ಗೆಲ್ಲುವ ವಿಶ್ವಾಸವಿದೆ. ಸರ್.ಎಂ.ವಿಶ್ವೇಶ್ವರಾಯ ಸ್ಥಾಪಿಸಿದ ವಿಐಎಸ್ಎಲ್ ಕಾರ್ಖಾನೆ ಉಳಿವಿಗೆ ಸಾಕಷ್ಟು ಪ್ರಯತ್ನಿಸಲಾಗಿದೆ. ಕಾರ್ಖಾನೆ ವ್ಯಾಪ್ತಿಯ ಮನೆಗಳಲ್ಲಿ ವಾಸಿಸುತ್ತಿರುವ ಕಾರ್ಮಿಕರು ಆತಂಕ ಪಡುವ ಅಗತ್ಯತೆ ಇಲ್ಲ. ಮನೆಗಳನ್ನು ಉಳಿಸುವ ಪ್ರಯತ್ನ ಮಾಡುವುದಾಗಿ ತಿಳಿಸಿದ ಅವರು ರೈಲ್ವೇ ನಿಲ್ದಾಣಕ್ಕೆ ಸರ್.ಎಂ.ವಿಶ್ವೇಶ್ವರಾಯ ಹೆಸರು ನಮೂದಿಸಲು ಮುಖ್ಯಮಂತ್ರಿಗಳಿಗೆ ಪತ್ರ ಬರೆಯಲಾಗುವುದು. ಕೇಂದ್ರ ರೈಲ್ವೇ ಮಂತ್ರಿಗಳ ಸಹಕಾರದಿಂದ ಜಿಲ್ಲೆಗೆ ಹೆಚ್ಚಿನ ರೈಲು ಸಂಚಾರ ಅನುಕೂಲ ಕಲ್ಪಿಸಲಾಗಿದೆ ಎಂದರು.
ಮಾಜಿ ಉಪ ಮುಖ್ಯಮಂತ್ರಿ ಹಾಗು ಶಿವಮೊಗ್ಗ ಶಾಸಕ ಕೆ.ಎಸ್.ಈಶ್ವರಪ್ಪ ಮಾತನಾಡಿ ಸಮಿಶ್ರ ಸರಕಾರ ಬಡಿದಾಟದಿಂದ ಲೋಕಸಭೆಯ ಉಪ ಚುನಾವಣೆಗಳು ಬಂದೊದಗಿವೆ. ರಾಮನಗರ ಉಪಚುನಾಣೆಗೆ ಮುಖ್ಯಮಂತ್ರಿ ರವರ ಪತ್ನಿ ಅನಿತ ಕುಮಾರಸ್ವಾಮಿ ರವರನ್ನು ಅಭ್ಯರ್ಥಿಯನ್ನಾಗಿ ಘೋಷಿಸಿರುವುದರಿಂದ ಕೈ ನಾಯಕರು ಅನಿತಾ ಕುಮಾರಸ್ವಾಮಿ ರವರ ಪರ ಪ್ರಚಾರ ನಡೆಸುವುದಿಲ್ಲ ಎಂದು ಅಸಮದಾನ ವ್ಯಕ್ತ ಪಡಿಸಿದ್ದಾರೆ. ಶಿವಮೊಗ್ಗ ಲೋಕಸಭೆ ಉಪ ಚುನಾವಣೆಗೆ ಉಭಯ ಪಕ್ಷಗಳ ಅಭ್ಯರ್ಥಿಗಳನ್ನು ಘೋಷಿಸದೆ ಅಭ್ಯರ್ಥಿಗಳ ಹುಡುಕಾಟದಲ್ಲಿರುವುದು ವಿಪರ್ಯಾಸ. ಕಾಂಗ್ರೆಸ್ ಶಾಸಕರು ಕೇವಲ ಒಂದು ದಿನ ಮಂತ್ರಿಗಿರಿಗಾಗಿ ಹೋರಾಟ ನಡೆಸುತ್ತಿರುವುದು ದುರಂತವೆ ಸರಿ ಎಂದು ವ್ಯಂಗ್ಯವಾಡಿದರು.
ಮಾಜಿ ಸಂಸದ ಹಾಗು ಪಕ್ಷದ ಅಭ್ಯರ್ಥಿ ಬಿ.ವೈ.ರಾಘವೇಂದ್ರ ಮಾತನಾಡಿ ಆಯನೂರು ಮಂಜುನಾಥ್ ಹಾಗು ತಾವು ವಿಐಎಸ್ಎಲ್ ಕಾರ್ಖಾನೆ ವಿಚಾರದಲ್ಲಿ ಸಾಕಷ್ಟು ಪ್ರಯತ್ನ ಮಾಡಲಾಗಿತ್ತು. ನಂತರ ಬಿ.ಎಸ್.ಯಡಿಯೂರಪ್ಪ ರವರ ಅವಧಿಯಲ್ಲಿ ಕೇಂದ್ರ ಸಚಿವರುಗಳನ್ನು ಕಾರ್ಖಾನೆಗೆ ಕರೆತಂದು ಸ್ಥಿತಿಗತಿಗಳನ್ನು ವಿವರಿಸಲಾಗಿ 6 ಸಾವಿರ ಕೋಟಿ ಬಂಡವಾಳ ತೊಡಗಿಸುವುದಾಗಿ ಭರವಸೆ ಪಡೆಯಲಾಗಿತ್ತು. ಪ್ರಸ್ತುತ ಸಾಲಿನಲ್ಲಿ ನೂರಾರು ಕಾರ್ಮಿಕರು ನೆಮ್ಮದಿಯಿಂದ ಇರಲು 200 ಕೋಟಿ ಬಂಡವಾಳ ತೊಡಗಿಸಿ ಕಾರ್ಖಾನೆ ಬ್ಲಾಸ್ಟ್ ಫರ್ನೆಸ್ ಘಟಕ ಆರಂಭಿಸುವ ಕುರಿತು ಚಿಂತನೆ ಮಾಡಲಾಗುವುದು. ಗುತ್ತಿಗೆದಾರರು ಗುತ್ತಿಗೆಗಳನ್ನು ನವೀಕರಣ ಮಾಡದೆ ಗುತ್ತಿಗೆ ಕಾರ್ಮಿಕರು ಬೀದಿ ಪಾಲಾಗುವಂತಾಗಿದ್ದ ಸಂದರ್ಭದಲ್ಲಿ ಪ್ರಯತ್ನಿಸಲಾಗಿದೆ. ಮುಂಬರುವ ದಿನಗಳಲ್ಲಿ ಕಾರ್ಖಾನೆಯು ಪುನಃ ವೈಭವೀಕರಣ ಕಾಣುವುದು ಶತಸಿದ್ದ. ಲೋಕಸಭೆ ಉಪ ಚುನಾವಣೆಗೆ ನ: 15 ರಂದು ಸೋಮವಾರ ನಾಮಪತ್ರ ಸಲ್ಲಿಸಲಾಗುವುದು. ಚುನಾವಣೆಯಲ್ಲಿ ಭೂತ್ ಮಟ್ಟದ ಕಾರ್ಯಕರ್ತರನ್ನು ಗುರುತಿಸಿ ಜವಾಬ್ದಾರಿ ನೀಡುವಂತೆ ಸ್ಥಳೀಯ ಮುಖಂಡರು ಕಾರ್ಯನಿರ್ವಹಿಸಬೇಕೆಂದು ಕರೆ ನೀಡಿದರು.
ಮಾಜಿ ಸಭಾಪತಿ ಡಿ.ಎಚ್.ಶಂಕರಮೂರ್ತಿ, ವಿಧಾನ ಪರಿಷತ್ ಸದಸ್ಯರಾದ ಆಯನೂರು ಮಂಜುನಾಥ್, ರುದ್ರೇಗೌಡ, ಪಕ್ಷದ ರಾಜ್ಯ ಕಾರ್ಯಕಾರಣಿ ಸದಸ್ಯ ದತ್ತಾತ್ರಿ ಮಾತನಾಡಿದರು. ಪಕ್ಷದ ತಾಲೂಕು ಅಧ್ಯಕ್ಷ ಜಿ.ಆನಂದಕುಮಾರ್ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗ್ರಾಮಾಂತರ ಅಧ್ಯಕ್ಷ ಮಂಗೋಟೆ ರುದ್ರೇಶ್ ಪ್ರಾಸ್ತಾವಿಕ ನುಡಿಗಳನ್ನಾಡಿದರು. ಚಿದಾನಂದ ಪ್ರಾರ್ಥಿಸಿ, ಕೆ.ಮಂಜುನಾಥ್ ಸ್ವಾಗತಿಸಿದರೆ, ರಾಮಣ್ಣ ನಿರೂಪಿಸಿದರು.
ವೇದಿಕೆಯಲ್ಲಿ ಪಕ್ಷದ ಮುಖಂಡರಾದ ಡಿ.ಎಸ್.ಅರುಣ್, ವಿ.ಕದಿರೇಶ್, ಕೆ.ಎನ್.ಭೈರಪ್ಪಗೌಡ, ಜಿ.ಆರ್.ಪ್ರವೀಣ್ ಪಟೇಲ್, ಎನ್.ವಿಶ್ವನಾಥರಾವ್, ಜಿ.ಧರ್ಮಪ್ರಸಾದ್, ಬಿ.ಕೆ.ಶ್ರೀನಾಥ್, ಹೇಮಾವತಿ, ಅನ್ನಪೂರ್ಣ, ಮಂಜುನಾಥ್, ರವಿಚಂದ್ರನ್, ತೋಪೇಗೌಡ ಮುಂತಾದವರು ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ವಿವಿಧ ಪಕ್ಷಗಳ ಮುಖಂಡರಾದ ಡಾ.ಜಿ.ಆರ್.ಹೆಬ್ಬೂರು, ಮಣಿ, ಎಸ್.ಕೆ.ಪದ್ಮನಾರಾಯಣ ಸೇರಿದಂತೆ ಹಲವರು ಬಿ.ಎಸ್.ಯಡಿಯೂರಪ್ಪ ಸಮ್ಮುಖದಲ್ಲಿ ಪಕ್ಷಕ್ಕೆ ಸೇರ್ಪಡೆಗೊಂಡರು.
ವರದಿ: ಆರ್.ವಿ. ಕೃಷ್ಣ, ಭದ್ರಾವತಿ
Discussion about this post