ಕಲ್ಪ ಮೀಡಿಯಾ ಹೌಸ್ | ಬೀದರ್ |
ರೈತರ ಪರಿಸ್ಥಿತಿ ನೋಡಿದ್ರೆ ನಮಗೆ ಕಣ್ಣೀರು ಬರುತ್ತೆ. ರೈತರು ಕಷ್ಟಪಟ್ಟು ಬೆಳೆದ ಉದ್ದು, ಹೆಸರು, ತೊಗರಿ, ಸೋಯಾ ಸೇರಿದಂತೆ ಬಹುತೇಕ ಬೆಳೆಗಳು ಸಂಪೂರ್ಣ ನಾಶವಾಗಿವೆ ಎಂದು ಮಾಜಿ ಸಚಿವರು, ಜೆಡಿಎಸ್ ಪಕ್ಷದ ಹಿರಿಯ ನಾಯಕರಾಗಿರುವ ಬಂಡೆಪ್ಪ ಖಾಶೆಂಪುರ್ #Bandeppa Khashempur ಹೇಳಿದರು.
ಬೀದರ್ ನಗರದ ಪತ್ರಿಕಾ ಭವನದಲ್ಲಿ ನಡೆದ ಮಾಧ್ಯಮಗೋಷ್ಠಿಯಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ಹೆಚ್ಚಿನ ಮಳೆಯಿಂದಾಗಿ ಬೀದರ್ ಜಿಲ್ಲೆಯಲ್ಲಿ 79 ರಿಂದ 80 ಸಾವಿರ ಹೆಕ್ಟೇರ್ ಗಿಂತಲೂ ಹೆಚ್ಚಿನ ಹಾನಿ ಸಂಭವಿಸಿದೆ ಎಂಬ ಮಾಹಿತಿ ಇದೆ ಎಂದರು.
ರೈತರು #Farmers ದೇಶದ ಬೆನ್ನೆಲುಬು, ನಮ್ಮ ಜೀವನಾಡಿ, ಅವರು ಅನ್ನದಾತರು, ಅನ್ನದಾತರಿಗೆ ನೀವು (ರಾಜ್ಯ ಸರ್ಕಾರದವರು) ಯಾವ ಗ್ಯಾರಂಟಿ ನೀಡಿದ್ದಿರಿ ಎಂಬುದನ್ನು ತಿಳಿಸಬೇಕು. ನಾನು ಎರಡು ಬಾರಿ ಸಚಿವನಾಗಿದ್ದಾಗ ರೈತರ ಒಳಿತಿಗಾಗಿ ಉತ್ತಮ ನಿರ್ಧಾರ ತೆಗೆದುಕೊಂಡಿದ್ದೇವೆ.
ಈಗಾಗಲೇ ಬಂದಿರುವ ಎನ್.ಡಿ.ಆರ್.ಎಫ್ ಹಣವನ್ನಾದರು ರೈತರಿಗೆ ಪರಿಹಾರವಾಗಿ ಕೊಡಬಹುದಾಗಿತ್ತು. ಆದರೆ ಈ ರಾಜ್ಯ ಸರ್ಕಾರ ಅದನ್ನು ಕೂಡ ಮಾಡಿಲ್ಲ. ರೈತರಿಗೆ ಪ್ರತಿ ಎಕರೆಗೆ ಕನಿಷ್ಠ 25 ಸಾವಿರ ರೂ. ಪರಿಹಾರ ಕೊಡಬೇಕು ಎಂದು ನಾನು ಮನವಿ ಮಾಡುತ್ತೇನೆ.
ನಿಮಗೆ (ರಾಜ್ಯ ಸರ್ಕಾರದವರಿಗೆ) ಸಾಲ ಮನ್ನಾ ಮಾಡುವ ತಾಕ್ಕತ್ತು ಇಲ್ಲ. ರೈತರಿಗೆ ಎಕರೆಗೆ ಕನಿಷ್ಠ 25 ಸಾವಿರ ಪರಿಹಾರವನ್ನಾದರು ಕೊಡಬೇಕು. ಬ್ಯಾಂಕ್ ಸಾಲ ವಸೂಲಿಯನ್ನು ಮೂರು ವರ್ಷಗಳವರೆಗೂ ವಸೂಲಿ ಮಾಡಬಾರದು. ರೈತರ ಸಾಲದ ಬಡ್ಡಿಯನ್ನು ಸರ್ಕಾರವೇ ಬರಿಸಬೇಕು.
ಮುಖ್ಯಮಂತ್ರಿಗಳು ರಾಜ್ಯದ ರೈತರ ಬಗ್ಗೆ ಕಾಳಜಿವಹಿಸಿ ಸರ್ಕಾರ ಜೀವಂತ ಇದೆ ಅಂತ ನಾಳೆ ಸಂಜೆಯವರೆಗೂ ತೋರಿಸಬೇಕು. ನಾವು ಕೇಂದ್ರ ಸರ್ಕಾರದಿಂದ ಪರಿಹಾರ ತರಲು ಪ್ರಯತ್ನಿಸ್ತೇವೆ. ನಮ್ಮ ರೈತರ ಪರವಾಗಿ ನಾವು ಕೆಲಸ ಮಾಡ್ತೇವೆ. ದೇವೇಗೌಡರೊಂದಿಗೆ ಕೇಂದ್ರ ಸರ್ಕಾರದ ಬಳಿಗೆ ನಿಯೋಗ ತೆಗೆದುಕೊಂಡು ಹೋಗ್ತೇವೆ ಎಂದು ಮಾಜಿ ಸಚಿವ ಬಂಡೆಪ್ಪ ಖಾಶೆಂಪುರ್ ತಿಳಿಸಿದರು.
ಸರ್ಕಾರ ಬೆಳೆ ಹಾನಿ ಪರಿಶೀಲನೆ ಮಾಡ್ತಿದ್ದಿವಿ ಅಂತಾನೇ ಹೇಳ್ತಿದೆ. ಇನ್ನೂವರೆಗೂ ಯಾವುದೇ ಪರಿಹಾರ ಸಿಕ್ಕಿಲ್ಲ. ಪರಿಹಾರ ಒದಗಿಸಿಕೊಡುವ ಕೆಲಸವನ್ನು ಸರ್ಕಾರ ಮಾಡಬೇಕು. ಪರಿಶೀಲನೆ ಹೆಸರಿನಲ್ಲಿ ಕಾಲಹರಣ ಮಾಡಬಾರದು ಎಂದು ಜೆಡಿಎಸ್ ಮುಖಂಡರಾದ ಸೂರ್ಯಕಾಂತ್ ನಾಗಮಾರಪಳ್ಳಿರವರು ಇದೇ ವೇಳೆ ಒತ್ತಾಯಿಸಿದರು.
ಈ ಸಂದರ್ಭದಲ್ಲಿ ಜೆಡಿಎಸ್ ಪಕ್ಷದ ಯುವ ಜನತಾದಳದ ರಾಜ್ಯಾಧ್ಯಕ್ಷರಾಗಿರುವ ನಿಖಿಲ್ ಕುಮಾರಸ್ವಾಮಿ, ಜೆಡಿಎಸ್ ಜಿಲ್ಲಾಧ್ಯಕ್ಷರಾದ ರಮೇಶ್ ಪಾಟೀಲ್ ಸೋಲಪೂರ್, ಪ್ರಮುಖರಾದ ಸೂರ್ಯಕಾಂತ್ ನಾಗಮಾರಪಳ್ಳಿ, ಬಸವರಾಜ್ ಪಾಟೀಲ್ ಹಾರೂರಗೇರಿ, ದೇವೇಂದ್ರ ಸೋನಿ, ಅಶೋಕ್ ಕೊಡಗೆ, ಶಾಂತಲಿಂಗ ಸಾವಳಗಿ, ರಾಜಶೇಖರ ಜವಳೆ, ತರುಣ್ ನಾಗಮಾರಪಳ್ಳಿ, ಅಭಿ ಕಾಳೆ, ಸುದರ್ಶನ್ ಸುಂದರರಾಜ್, ಶಿವಪುತ್ರ ಮಾಳಗೆ ಸೇರಿದಂತೆ ಅನೇಕರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















