ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ಜಿಲ್ಲೆಯಾದ್ಯಂತ ಅಕ್ಟೋಬರ್ 22ರಂದು ಮತ್ತೊಂದು ಸುತ್ತಿನ ಕೋವಿಡ್-19 ಲಸಿಕಾಕರಣದ ವಿಶೇಷ ಮೇಳ ನಡೆಯಿತು.
ಸಾರ್ವಜನಿಕರಿಂದ ವಿಶೇಷ ಮೇಳಕ್ಕೆ ಉತ್ತಮ ಪ್ರತಿಕ್ರಿಯೆ ಸಿಕ್ಕಿದ್ದು, ಅಕ್ಟೋಬರ್ 22ರಂದು ಮೊದಲನೇ ಮತ್ತು ಎರಡನೇ ಡೋಸ್ ಸೇರಿ ಸಂಜೆ 7 ಗಂಟೆವರೆಗೆ ನೂರಾರು ಸಂಖ್ಯೆಯಲ್ಲಿದ್ದ ಲಸಿಕಾ ಕೇಂದ್ರಗಳಲ್ಲಿ ಮತ್ತು ಮನೆಮನೆಗೆ ತೆರಳಿ ಅಂದಾಜು 26 ಸಾವಿರಕ್ಕೂ ಹೆಚ್ಚು ಕೋವಿಡ್ ಲಸಿಕೆಯ ಡೋಸ್ ನೀಡಲಾಯಿತು.
ಜಿಲ್ಲಾಧಿಕಾರಿ ಆರ್. ರಾಮಚಂದ್ರನ್ ಅವರು ಅಕ್ಟೋಬರ್ 22ರ ಬೆಳಗ್ಗೆ ಅಂಬೇಡ್ಕರ ವೃತ್ತದ ಹತ್ತಿರದಲ್ಲಿನ ಕೋವಿಡ್ ಲಸಿಕಾ ಕೇಂದ್ರವೊಂದಕ್ಕೆ ತೆರಳಿ ಪರಿಶೀಲನೆ ನಡೆಸಿದರು. ತೋಟಗಾರಿಕಾ ಇಲಾಖೆಯ ಆವರಣದ ಮುಂದಿನ ಪಾದಾಚಾರಿ ಸ್ಥಳದಲ್ಲಿ ಹಾಕಿದ್ದ ಲಸಿಕಾ ಕೇಂದ್ರದಲ್ಲಿ ಗಂಟೆಗೂ ಹೆಚ್ಚು ಸಮಯ ಇದ್ದ ಜಿಲ್ಲಾಧಿಕಾರಿಗಳು, ಅಲ್ಲಿ ಸಂಚರಿಸುತ್ತಿದ್ದವರ ಮನವೊಲಿಸಿ ಲಸಿಕೆಯನ್ನು ಕೊಡಿಸಿದರು. ಒಂದನೇ ಡೋಸ್ ಪಡೆದು ಎರಡನೇ ಡೋಸ್ ಪಡೆಯಲು ಹಿಂದೇಟು ಹಾಕುತ್ತಿದ್ದವರಿಗೆ ಮನವೊಲಿಸಿ ಜಿಲ್ಲಾಧಿಕಾರಿಗಳು ತಮ್ಮ ಸಮ್ಮುಖದಲ್ಲಿ ಲಸಿಕೆಯನ್ನು ಕೊಡಿಸಿದ್ದು ವಿಶೇಷವಾಗಿತ್ತು.
ಜಿಲ್ಲಾಧಿಕಾರಿಗಳ ಸೂಚನೆಯಂತೆ ಆಯಾ ತಾಲೂಕುಗಳ ಆಸ್ಪತ್ರೆಗಳಿಂದ ಪಟ್ಟಣ ಪ್ರದೇಶದ ನಾನಾ ವಾರ್ಡಗಳಲ್ಲಿ ಅಧಿಕಾರಿ ಮತ್ತು ಸಿಬ್ಬಂದಿಯ ತಂಡಗಳ ಮೂಲಕ ಬೆಳಗ್ಗೆಯಿಂದ ಸಂಜೆವರೆಗೂ ಲಸಿಕಾರಣ ನಡೆಯಿತು. ಕೈಗಾರಿಕಾ ಇಲಾಖೆ, ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆ ಸೇರಿದಂತೆ ಕೆಲವು ಪ್ರಮುಖ ಇಲಾಖೆಗಳ ಅಧಿಕಾರಿಗಳು ತಮ್ಮ ಸಿಬ್ಬಂದಿಯೊಂದಿಗೆ ಲಸೀಕಾಕರಣ ನಡೆಸಿದರು. ಕೈಗಾರಿಕಾ ಇಲಾಖೆಯಿಂದ 114 ಜನರಿಗೆ ಕೋವಿಡ್ ಲಸಿಕೆಯ ಡೋಸ್ ನೀಡಲಾಗಿದೆ.
4 ಗಂಟೆವರೆಗಿನ ಮಾಹಿತಿ:
ಅಕ್ಟೋಬರ್ 22ರಂದು ನಡೆದ ವಿಶೇಷ ಮೇಳದಲ್ಲಿ ಸಂಜೆ 4 ಗಂಟೆವರೆಗೆ ಬೀದರ ತಾಲೂಕಿನಲ್ಲಿ 4816, ಭಾಲ್ಕಿ ತಾಲೂಕಿನಲ್ಲಿ 4262, ಬಸವಕಲ್ಯಾಣ ತಾಲೂಕಿನಲ್ಲಿ 2826, ಹುಮನಾಬಾದ್ ತಾಲೂಕಿನಲ್ಲಿ 2272, ಚಿಟಗುಪ್ಪದಲ್ಲಿ 2636, ಕಮಲನಗರದಲ್ಲಿ 1584, ಔರಾದ್ನಲ್ಲಿ 1104 ಮತ್ತು ಹುಲಸೂರದಲ್ಲಿ 611ರಷ್ಟು ಜನರಿಗೆ ಕೋವಿಡ್ ಡೋಸ್ ನೀಡಲಾಯಿತು.
ಸಂಜೆವರೆಗೂ ಲಸಿಕಾಕರಣ:
ಹುಮನಾಬಾದ್ನಲ್ಲಿ ಸಂಜೆ 5 ಗಂಟೆವರೆಗೆ 991 ಜನರಿಗೆ, ಔರಾದ್ ತಾಲೂಕಿನಲ್ಲಿ ಸಂಜೆ 6 ಗಂಟೆವರೆಗೆ 2347 ಜನರಿಗೆ, ಬ್ರಿಮ್ಸ್ ಕಾಲೇಜಿನ ಆವರಣದ ಲಸಿಕಾ ಕೇಂದ್ರಗಳಲ್ಲಿ ಸಂಜೆ 7 ಗಂಟೆವರೆಗೆ ಒಟ್ಟು 371 ಜನರಿಗೆ ಲಸಿಕೆ ನೀಡಲಾಯಿತು.
ಉತ್ತಮ ಪ್ರತಿಕ್ರಿಯೆ:
ಬೀದರ ಜಿಲ್ಲೆಯಾದ್ಯಂತ ಅಕ್ಟೋಬರ್ 22ರಂದು ನಡೆದ ಮತ್ತೊಂದು ಸುತ್ತಿನ ವಿಶೇಷ ಮೇಳಕ್ಕೆ ಸಾರ್ವಜನಿಕರಿಂದ ಉತ್ತಮ ಪ್ರತಿಕ್ರಿಯೆ ಸಿಕ್ಕಿದೆ. ಪ್ರತಿಯೊಂದು ಇಲಾಖೆಯ ಅಧಿಕಾರಿಗಳು ಮತ್ತು ಸಿಬ್ಬಂದಿ ಕಾರ್ಯಾಚರಣೆಯಲ್ಲಿ ಸರಿಯಾಗಿ ಭಾಗಿಯಾಗಿ ಸ್ಪಂದನೆ ನೀಡಿದ್ದಾರೆ. ಮನೆಮನೆಗೆ ತೆರಳಿ ಲಸಿಕಾಕರಣ ನಡೆಸಿದ್ದಾರೆ. ಅಕ್ಟೋಬರ್ 22ರವರೆಗೆ ಬೀದರ ಜಿಲ್ಲೆಯಲ್ಲಿ 9,14,482 ಜನರು ಮೊದಲನೇ ಡೋಸನ್ನು ಮತ್ತು 4,80,594 ಜನರು ಎರಡನೇ ಡೋಸ್ನ್ನು ಪಡೆದುಕೊಂಡಿದ್ದಾರೆ ಎಂದು ಜಿಲ್ಲಾಧಿಕಾರಿಗಳಾದ ರಾಮಚಂದ್ರನ್ ಆರ್ ಅವರು ತಿಳಿಸಿದ್ದಾರೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post