ಕಲ್ಪ ಮೀಡಿಯಾ ಹೌಸ್ | ಬೀದರ್ |
ಬೀದರ್ ಜಿಲ್ಲೆಯಲ್ಲಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ನಿರ್ಮಾಣವಾಗುತ್ತಿರುವುದು ಸಂತಸದ ವಿಷಯವಾಗಿದೆ. ಪ್ರಾದೇಶಿಕ ಕೇಂದ್ರ ನಿರ್ಮಾಣದಿಂದ ಈ ಭಾಗದ ಹೆಣ್ಣು ಮಕ್ಕಳ ಶಿಕ್ಷಣಕ್ಕೆ ಅನುಕೂಲವಾಗುತ್ತದೆ. ಈ ಪ್ರಾದೇಶಿಕ ಕೇಂದ್ರ ಒಳ್ಳೆಯ ಉತ್ತಮ ಕೇಂದ್ರವಾಗಲಿದೆ ಎಂದು ಕೇಂದ್ರ ಸಚಿವ ಭಗವಂತ ಖೂಬಾ Central Minister Bhagawantha Kooba ಹೇಳಿದರು.
ಬೀದರ್ ದಕ್ಷಿಣ ವಿಧಾನಸಭಾ ಕ್ಷೇತ್ರದ ಆಣದೂರು ಗ್ರಾಮದ ಹೊರವಲಯದಲ್ಲಿ ನಿರ್ಮಾಣವಾಗಲಿರುವ ಕರ್ನಾಟಕ ರಾಜ್ಯ ಅಕ್ಕಮಹಾದೇವಿ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರದ ಭೂಮಿ ಪೂಜಾ ಕಾರ್ಯಕ್ರಮ ನೆರವೇರಿಸಿ ಅವರು ಮಾತನಾಡಿದರು.
ಪ್ರಾದೇಶಿಕ ಕೇಂದ್ರ ನಿರ್ಮಾಣಕ್ಕೆ ಕೇಂದ್ರ ಸರ್ಕಾರದಿಂದ ಮತ್ತು ಸಂಸದರ ನಿಧಿಯಿಂದ ಸಾಧ್ಯವಾದಷ್ಟು ಅನುದಾನ ಒದಗಿಸಿಕೊಡುವ ಪ್ರಾಮಾಣಿಕ ಪ್ರಯತ್ನವನ್ನು ನಾನು ಮಾಡುತ್ತೇನೆ. ನಾವೆಲ್ಲರೂ ಸೇರಿ ಬೀದರ್ ಜಿಲ್ಲೆಯಲ್ಲಿ ಸ್ಥಾಪನೆಯಾಗುತ್ತಿರುವ ಪ್ರಾದೇಶಿಕ ಕೇಂದ್ರವನ್ನು ಮಾದರಿ ಕೇಂದ್ರವನ್ನಾಗಿಸುವ ಕೆಲಸ ಮಾಡಬೇಕಾಗಿದೆ ಎಂದರು.
Also read: ಪಾಳುಬಾವಿಗೆ ಬಿದ್ದ ಎಮ್ಮೆ: ಅಗ್ನಿಶಾಮಕ ದಳದಿಂದ ರಕ್ಷಣೆ
ಶಾಸಕ ಬಂಡೆಪ್ಪ ಖಾಶೆಂಪುರ್ ಮಾತನಾಡಿ, ಶಿಕ್ಷಣದಲ್ಲಿ ಆಧುನಿಕ ತಂತ್ರಜ್ಞಾನ ಬಳಕೆ ಮಾಡಬೇಕು. ಆ ನಿಟ್ಟಿನಲ್ಲಿ ಇದು ರಾಜ್ಯಕ್ಕೆ ಮಾದರಿಯಾಗಬೇಕು. ಬೀದರ್ ಜಿಲ್ಲೆಗೆ ಮಹಿಳಾ ವಿಶ್ವವಿದ್ಯಾಲಯದ ಪ್ರಾದೇಶಿಕ ಕೇಂದ್ರ ತರುವ ನಿಟ್ಟಿನಲ್ಲಿ ಬಹಳಷ್ಟು ಶ್ರಮಿಸಲಾಗಿದೆ. ಜಿಲ್ಲಾಡಳಿತ ಮತ್ತು ಕಂದಾಯ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಸಹಕಾರದಿಂದ ಪ್ರಾದೇಶಿಕ ಕೇಂದ್ರಕ್ಕೆ ಭೂಮಿ ಲಭ್ಯವಾಗಿದೆ ಎಂದರು.
ಪ್ರಾದೇಶಿಕ ಕೇಂದ್ರ ಕೇವಲ ಪ್ರಾದೇಶಿಕ ಅಧ್ಯಯನ ಕೇಂದ್ರವಾಗಿರಬಾರದು. ದಿನದಿಂದ ದಿನಕ್ಕೆ ಬದಲಾವಣೆಗಳೊಂದಿಗೆ ವಿನೂತನ ತಂತ್ರಜ್ಞಾನದ ಸದ್ಬಳಕೆ ಮಾಡಿಕೊಂಡು ಸಾಗಬೇಕು. ಆ ಮೂಲಕ ಈ ಭಾಗದ ಹೆಣ್ಣು ಮಕ್ಕಳು ರಾಜ್ಯಕ್ಕೆ ಮಾದರಿಯಾಗಬೇಕು. ವಿಶ್ವವಿದ್ಯಾಲಯದ ಬೆಳವಣಿಗೆಗೆ ಸಹಕಾರಿಯಾಗಬೇಕೆಂದು ಶಾಸಕ ಬಂಡೆಪ್ಪ ಖಾಶೆಂಪುರ್ ತಿಳಿಸಿದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ. ಬಿ.ಕೆ. ತುಳಸಿಮಾಲ ಮಾತನಾಡಿ, ಮಹಿಳಾ ವಿವಿಯ ಹತ್ತೊಂಬತ್ತನೇ ವರ್ಷದ ಇತಿಹಾಸದಲ್ಲಿ ಇದೊಂದು ಐತಿಹಾಸಿಕ ಮೈಲಿಗಲ್ಲಾಗಿದೆ. ಈ ಭಾಗದ ಹೆಣ್ಣುಮಕ್ಕಳಿಗೆ ಶಿಕ್ಷಣ ಒದಗಿಸಿಕೊಡಬೇಕು ಎಂಬ ನಿಟ್ಟಿನಲ್ಲಿ ನಾವು ಕಾರ್ಯ ಪ್ರವೃತರಾಗಿದ್ದೇವೆ. ಶಾಸಕರು ನಮಗೆ ಅಭೂತಪೂರ್ವ ಬೆಂಬಲ ನೀಡಿದ್ದಾರೆ. ಶಾಸಕರ ಪ್ರೋತಾಹ ಸದಾಕಾಲವೂ ಇದ್ದೆ ಇದೆ. ಅವರು ಶಿಕ್ಷಣಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡುತ್ತಿದ್ದಾರೆ ಎಂದರು.
ಈ ಸಂದರ್ಭದಲ್ಲಿ ವಿವಿಯ ಶೈಕ್ಷಣಿಕ ಸಲಹಾ ಸಮಿತಿ ಸದಸ್ಯೆ ಗುರಮ್ಮ ಸಿದ್ದಾರೆಡ್ಡಿ, ಸಿಂಡಿಕೇಟ್ ಸದಸ್ಯ ಡಿ.ಬಿ. ಕಂಬಾರ್, ಪ್ರೊ. ಡಿ.ಎಮ್. ಜ್ಯೋತಿ, ಡಾ. ಆರ್.ವಿ. ಗಂಗಾಶೆಟ್ಟಿ, ಡಾ. ಬಸವರಾಜ ಪಾಟೀಲ್, ವೆಂಕಟೇಶ ಬಡಿಗೇರ, ಪ್ರಕಾಶ ಬಡಿಗೇರ, ಪ್ರೊ. ಕಾಮಶೆಟ್ಟಿ, ಧನಶೆಟ್ಟಿ, ರಾಜಕುಮಾರ, ಧರ್ಮಣ್ಣ ಬಡಿಗೇರ, ಪಿಎಸ್ಐ ಶಿವರಾಜ್ ಪಾಟೀಲ್, ವಿವಿಧ ನಿಕಾಯದ ಡಿನರು, ಪ್ರಾಧ್ಯಾಪಕರು ಸೇರಿದಂತೆ ಅನೇಕರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post