ನವದೆಹಲಿ: ಕಣಿವೆ ರಾಜ್ಯಕ್ಕೆ ವಿಶೇಷ ಸ್ಥಾನಮಾನ ನೀಡಿದ್ದ ಸಂವಿಧಾನ ವಿಧಿ 370ರನ್ನು ಪ್ರಧಾನಿ ನರೇಂದ್ರ ಮೋದಿ ನೇತೃತ್ವ ಎನ್’ಡಿಎ ಸರ್ಕಾರ ರದ್ದು ಪಡಿಸುವ ಮೂಲಕ ಐತಿಹಾಸಿಕ ನಿರ್ಧಾರವನ್ನು ತೆಗೆದುಕೊಂಡಿದೆ.
ರಾಜ್ಯಸಭಾ ಕಲಾಪದಲ್ಲಿಂದು ಮಾತನಾಡಿದ ಗೃಹ ಸಚಿವ ಅಮಿತ್ ಶಾ, ಜಮ್ಮು ಕಾಶ್ಮೀರಕ್ಕೆ ಸಂಬಂಧಿಸಿದಂತೆ ಸಂವಿಧಾನದ ವಿಧಿ 370 ಹಾಗೂ 35ಎ ಅನ್ನು ರದ್ದು ಮಾಡಿ, ಆ ರಾಜ್ಯಕ್ಕೆ ನೀಡಲಾಗಿದ್ದ ವಿಶೇಷ ಸ್ಥಾನಮಾನ ಹಾಗೂ ವಿಶೇಷಾಧಿಕಾರವನ್ನು ಹಿಂದಕ್ಕೆ ಪಡೆಯಲಾಗಿದೆ ಎಂದು ಘೋಷಣೆ ಮಾಡಿದರು.
ಅಮಿತ್ ಶಾ ಅವರು ಈ ಘೋಷಣೆ ಮಾಡುತ್ತಿದ್ದಂತೆಯೇ ಭಾರೀ ಪ್ರಮಾಣದಲ್ಲಿ ಗದ್ದಲವೇರ್ಪಡಿಸಿದ ಪ್ರತಿಪಕ್ಷಗಳು ಸರ್ಕಾರದ ಈ ನಿರ್ಧಾರಕ್ಕೆ ತೀವ್ರ ವಿರೋಧ ವ್ಯಕ್ತಪಡಿಸಿವೆ.
ರಾಜ್ಯಸಭೆಯಲ್ಲಿ ಸಚಿವ ಅಮಿತ್ ಷಾ ಹೇಳಿಕೆ ನೀಡಲು ಮುಂದಾಗುತ್ತಿದ್ದಂತೆ ಕಾಂಗ್ರೆಸ್ ಪಕ್ಷದ ನಾಯಕ ಗುಲಾಂ ನಬಿ ಆಜಾದ್ ಕಣಿವೆ ರಾಜ್ಯದ ಮೂರಕ್ಕೂ ಹೆಚ್ಚು ಮಾಜಿ ಸಿಎಂಗಳನ್ನು ಗೃಹ ಬಂಧನದಲ್ಲಿರಿಸಿರುವ ಕೇಂದ್ರ ಸರ್ಕಾರದ ಕ್ರಮವನ್ನು ಖಂಡಿಸಿದರು. ಇದಕ್ಕೆ ಪ್ರತಿಪಕ್ಷಗಳ ಇತರೆ ನಾಯಕರು ಕೂಡ ಧ್ವನಿಗೂಡಿಸಿದ್ದರಿಂದ, ಕೆಲಕಾಲ ಗದ್ದಲದ ವಾತಾವರಣ ನಿರ್ಮಾಣವಾಗಿತ್ತು. ಇದರ ನಡುವೆಯೇ ಅಮಿತ್ ಷಾ ಪ್ರಸ್ತಾಪಗಳನ್ನು ಮಂಡಿಸಿದರು.
ಪ್ರಸ್ತಾಪ ಮಂಡಿಸಿದ ನಂತರದಲ್ಲಿ ಆಕ್ರೋಶ ವ್ಯಕ್ತಪಡಿಸಿದ ಪ್ರತಿಪಕ್ಷಗಳ ನಾಯಕರು ಭಾರಿ ಗದ್ದಲ ಎಬ್ಬಿಸಿದರು. ಈ ಹಿನ್ನೆಲೆಯಲ್ಲಿ ಸಭಾಪತಿ ವೆಂಕಯ್ಯ ನಾಯ್ಡು ಸದನವನ್ನು ಮುಂದೂಡಿದರು.
Discussion about this post