ನವದೆಹಲಿ: ಸ್ವತಂತ್ರ ಸಂಗ್ರಾಮದಲ್ಲಿ ವಿಶೇಷ ಪಾತ್ರ ವಹಿಸಿದ ಸರ್ದಾರ್ ವಲ್ಲಭಾ ಭಾಯ್ ಪಟೇಲ್ ಹಾಗೂ ಬಿ.ಆರ್. ಅಂಬೇಡ್ಕರ್ ಅವರಿಗೆ ವಿಶೇಷ ಗೌರವಾಧರ ಸಲ್ಲಿಸಿದ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಇಂಡಿಯನ್ ನ್ಯಾಶನಲ್ ಆರ್ಮಿ(ಐಎನ್ಎ) ಸ್ಥಾಪಿಸಿದ ನೇತಾಜಿ ಸುಭಾಷ್ ಚಂದ್ರ ಬೋಸ್ ಅವರಿಗೆ ವಿಶೇಷ ಗೌರವ ಸಲ್ಲಿಸಲು ನಿರ್ಧರಿಸಿದೆ.
ಅಕ್ಟೋಬರ್ 21ರಂದು ಆಜಾದ್ ಹಿಂದ್ ಫೌಜ್ ವಾರ್ಷಿಕೋತ್ಸವದ ಹಿನ್ನೆಲೆಯಲ್ಲಿ ನವದೆಹಲಿಯಿಂದ ಅಂಡಮಾನ ನಿಕೋಬಾರ್ ವರೆಗೂ ಪ್ಲಾಟಿನಂ ಜ್ಯೂಬಿಲಿ ಆಚರಣೆ ಮಾಡಲು ನಿರ್ಣಯಿಸಲಾಗಿದೆ.
ಆಜಾದ್ ಹಿಂದ್ ಫೌಜ್ ಸ್ಥಾಪನೆಯ ವರ್ಷಾಚರಣೆಯ ಹಿನ್ನೆಲೆಯಲ್ಲಿ ಅಕ್ಟೋಬರ್ 21ರಂದು ಕೆಂಪು ಕೋಟೆಯ ಮೇಲೆ ಧ್ವಜಾರೋಹಣ ಮಾಡಿ, ಭಾರತೀಯ ಸಶಸ್ತ್ರ ಪಡೆಗಳು ಗೌರವ ಸಲ್ಲಿಸಲಿವೆ.
ಈ ಕುರಿತಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದಲ್ಲಿ ಸಭೆ ನಡೆಸಲಾಗಿದ್ದು, ಅಂದು ಕೆಂಪು ಕೋಟೆಯ ಮೇಲೆ ತ್ರಿವರ್ಣ ಧ್ವಜಾರೋಹಣ ಮಾಡಲು ಸ್ವತಃ ಪ್ರಧಾನಿಯವರೇ ಅನುಮೋದನೆ ನೀಡಿದ್ದಾರೆ.
ಇದೇ ವೇಳೆ ಅಂದು ನಡೆಯಲಿರುವ ಕಾರ್ಯಕ್ರಮದಲ್ಲಿ ಅಜಾದ್ ಹಿಂದ್ ಮ್ಯೂಸಿಯಂನ್ನೂ ಸಹ ಪ್ರಧಾನಿಯವರು ಲೋಕಾರ್ಪಣೆ ಮಾಡಲಿದ್ದಾರೆ.
ನೇತಾಜಿಯವರ ಸೋದರ ಅಳಿಯ ಪಶ್ಚಿಮ ಬಂಗಾಳ ಬಿಜೆಪಿ ರಾಜ್ಯ ಉಪಾಧ್ಯಕ್ಷ ಚಂದ್ರ ಕುಮಾರ್ ಬೋಸ್ ಅಂದಿನ ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.















