ಶಿವಮೊಗ್ಗ: 60 ವರ್ಷಗಳ ಕಾಲ ದೂರದೃಷ್ಠಿಯೇ ಇಲ್ಲದೇ ಆಡಳಿತ ನಡೆಸಿ, ಇಂಧನಕ್ಕಾಗಿ ಆಯಿಲ್ ಬಾಂಡ್ ಮಾಡಿ, 2 ಲಕ್ಷ ಕೋಟಿ ರೂ.ಗಳಷ್ಟು ಬೃಹತ್ ಮೊತ್ತದಷ್ಟು ಕಾಂಗ್ರೆಸ್ ಮಾಡಿದ್ದ ಸಾಲವನ್ನು ಬಿಜೆಪಿ ತೀರಿಸಿದ್ದಕ್ಕಾಗಿಯೇ ತೈಲ ಬೆಲೆ ಏರಿಕೆಯಾಗಿದೆ ಎಂದು ಬಿಜೆಪಿ ಜಿಲ್ಲಾಧ್ಯಕ್ಷ ಎಸ್. ರುದ್ರೇಗೌಡ ಹೇಳಿದ್ದಾರೆ.
ಈ ಕುರಿತಂತೆ ಪತ್ರಿಕಾಗೋಷ್ಠಿಯಲ್ಲಿಂದು ಮಾತನಾಡಿದ ಅವರು, ಕಾಂಗ್ರೆಸ್ ಮಾಡಿದ್ದ ಸಾಲವನ್ನು ಬಿಜೆಪಿ ತೀರಿಸಬೇಕಾಯಿತು. ಹೀಗಾಗಿಯೇ, ಇಂಧನ ಬೆಲೆ ಏರಿಕೆಯಾಗಿದೆ ಎಂದು ಕಾಂಗ್ರೆಸ್ ವಿರುದ್ಧ ಅವರು ಕಿಡಿ ಕಾರಿದರು.
ಇಂಧನ ಬೆಲೆ ಏರಿಕೆಯಿಂದ ಜನರಿಗೆ ಕಷ್ಟವಾಗಿರುವುದು, ಹೊರೆಯಾಗಿರುವುದು ನಿಜ ಎಂದು ನಾವು ಒಪ್ಪಿಕೊಳ್ಳುತ್ತೇವೆ. ಆದರೆ ಇದನ್ನೇ ನೆಪವಾಗಿಟ್ಟುಕೊಂಡು ಕಾಂಗ್ರೆಸ್ ಮತ್ತು ಜೆಡಿಎಸ್ ಪಕ್ಷಗಳು ರಾಜಕೀಯವಾಗಿ ಪಿತೂರಿ ಮಾಡಲು ಹೊರಟಿವೆ. ಪ್ರಧಾನಿ ನರೇಂದ್ರ ಮೋದಿಯವರಿಗೆ ಕೆಟ್ಟ ಹೆಸರು ತರಬೇಕೆಂಬ ಉದ್ಧೇಶದಿಂದಲೇ ಭಾರತ್ ಬಂದ್ಗೆ ಕರೆ ನೀಡಲಾಗಿದೆ ಎಂದು ಟೀಕಿಸಿದರು.
ಕಾಂಗ್ರೆಸ್ ಮುಳುಗುತ್ತಿರುವ ಹಡಗು. ಅಲ್ಲದೇ, ಲೋಕಸಭಾ ಚುನಾವಣೆ ಸನಿಹವಾಗುತ್ತಿದೆ. ಹೀಗಾಗಿ, ತನ್ನ ಅಸ್ಥಿತ್ವ ಉಳಿಸಿಕೊಳ್ಳಲು ಜನರನ್ನು ದಾರಿ ತಪ್ಪಿಸುತ್ತಿದೆ ಎಂದು ಕುಟುಕಿದರು.
ಬೆಲೆ ಏರಿಕೆಗೆ ರಾಜ್ಯ ಸರ್ಕಾರಗಳು ಕಾರಣವಾಗುತ್ತವೆ. ರಾಜ್ಯದಲ್ಲಿ ರೈತರ ಸಾಲ ಮನ್ನಾ ಮಾಡುವ ಉದ್ಧೇಶದಿಂದಲೇ ಸರ್ಕಾರ ಇಂಧನ ಬೆಲೆಗೆ ವಿಧಿಸಿದ್ದ ವ್ಯಾಟ್ನ್ನು ಇಳಿಸಲು ಆಗಲಿಲ್ಲ. ಬಿಜೆಪಿ ಅಧಿಕಾರದಲ್ಲಿರುವ ರಾಜ್ಯಗಳು ಈ ಕೆಲಸ ಮಾಡಿದ್ದಾರೆ. ಆದರೆ ಕರ್ನಾಟಕ ಸರ್ಕಾರ ಮಾಡಿಲ್ಲ. ರಾಜ್ಯ ಸರ್ಕಾರಗಳು ಕೂಡ ಇದೇ ಆದಾಯವನ್ನು ಮೆಚ್ಚಿಕೊಂಡಿವೆ. ಕೇಂದ್ರ ಸರ್ಕಾರದ ಮೇಲೆ ಇಲ್ಲದ ಗೂಬೆ ಕೂರಿಸುತ್ತವೆ ಎಂದು ದೂರಿದರು.
ಇಂಧನಕ್ಕೆ ಪರ್ಯಾಯ ವ್ಯವಸ್ಥೆ ಮಾಡುವತ್ತ ನಾವು ಯೋಚಿಸಬೇಕಾಗಿದೆ. ಕೇಂದ್ರ ಸರ್ಕಾರ ಕೂಡ ಇದಕ್ಕೆ ಒತ್ತು ಕೊಡುತ್ತಿದೆ. ಇದಲ್ಲದೇ ಜಿಎಸ್ಟಿ ವ್ಯಾಪ್ತಿಗೆ ಪೆಟ್ರೋಲಿಯಂ ಕ್ಷೇತ್ರವನ್ನು ತರಬೇಕು ಎಂಬುದು ಬಿಜೆಪಿಯ ಗುರಿಯಾಗಿದೆ. ಆದರೆ ವಿರೋಧ ಪಕ್ಷಗಳು ಇದಕ್ಕೆ ಸಹಕಾರ ಕೊಡುತ್ತಿಲ್ಲ ಎಂದು ಆರೋಪಿಸಿದ ಅವರು, ತೈಲದ ಮೇಲಿನ ತೆರಿಗೆ ಸಂಗ್ರಹಣಾ ಹಣವನ್ನು ಕೇಂದ್ರ ಸರ್ಕಾರ ರಾಷ್ಟ್ರಿಯ ಹೆದ್ದಾರಿ ಅಭಿವೃದ್ದಿ ಸೇರಿದಂತೆ ಅಭಿವೃದ್ದಿಗೆ ಬಳಸುತ್ತಿವೆ ಎಂದರು.
ಕಾಂಗ್ರೆಸ್ ಸರ್ಕಾರದ ವೈಫಲ್ಯದಿಂದಲೇ ಪೆಟ್ರೋಲ್ ಬೆಲೆ ಏರಿಕೆಯಾಗಲು ಕಾರಣವಾಗಿದೆ ಮತ್ತು ಅಂತರರಾಷ್ಟ್ರೀಯ ದಿಗ್ಬಂದನ ಇದರ ಜೊತೆಗೆ ಸೇರಿಕೊಳ್ಳುತ್ತವೆ. ಹಾಗಾಗಿ ಮೋದಿ ಸರ್ಕಾರ ಅನಿವಾರ್ಯವಾಗಿ ಇಂಧನ ಬೆಲೆ ಏರಿಸಿದೆ. ರಾಜ್ಯ ಸರ್ಕಾರಗಳು ಇಂತಹ ಸಂದರ್ಭದಲ್ಲಿ ಬಡವರ ಪರವಾಗಿ ಬರಬೇಕು. ಅದನ್ನು ಬಿಟ್ಟು ಬಂದ್ ಮಾಡಿಸುವುದು ಒಳ್ಳೆಯದಲ್ಲ. ಇದರಿಂದ ಆರ್ಥಿಕ ಹೊರೆಯಾಗುತ್ತದೆಯಷ್ಟೆ ಎಂದರು.
ವಿಧಾನಪರಿಷತ್ ಸದಸ್ಯ ಆಯನೂರು ಮಂಜುನಾಥ್ ಮಾತನಾಡಿ, ಭಾರತ್ ಬಂದ್ ಕಾಂಗ್ರೆಸ್ನ ರಾಜಕಾರಣ ಕುತಂತ್ರದ ಹುನ್ನಾರವಾಗಿದೆ. ಕರ್ನಾಟಕದಲ್ಲಂತೂ ಸರ್ಕಾರಿ ಕೃಪಾಪೋಷಿತ ಬಂದ್ ಇದಾಗಿದೆ. ಸರ್ಕಾರವೇ ಬಂದ್ ಆಚರಿಸಲು ಹೊರಟಿದೆ. ಅನೇಕ ಕಡೆ ಬಲವಂತವಾಗಿ ಅಂಗಡಿ ಮುಂಗಟ್ಟುಗಳನ್ನು ಮುಚ್ಚಿಸಲಾಗುತ್ತಿದೆ. ಇದು ಜನಸಾಮಾನ್ಯರ ಬಂದ್ ಅಲ್ಲ. ಸಾಲಮಾಡಿದ್ದು ಕಾಂಗ್ರೆಸ್, ತೀರಿಸುತ್ತಿರುವುದು ಬಿಜೆಪಿ ಎಂದು ವ್ಯಂಗ್ಯವಾಡಿದರು.
ಎಸ್.ಎನ್. ಚನ್ನಬಸಪ್ಪ, ಡಿ.ಎಸ್.ಅರುಣ್, ಮಧುಸೂದನ್, ಬಿಳಕಿ ಕೃಷ್ಣಮೂರ್ತಿ, ಹಿರಣ್ಣಯ್ಯ, ಅಣ್ಣಪ್ಪ, ರತ್ನಾಕರ ಶೆಣೈ ಇದ್ದರು.
Discussion about this post