ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಆಫ್ಘಾನಿಸ್ತಾನದ ಕಾಬೂಲ್’ನಿಂದ ನವದೆಹಲಿಗೆ ಆಗಮಿಸಿದ ವಿಮಾನವೊಂದರ ಲ್ಯಾಂಡಿಂಗ್ ಗೇರ್’ನಲ್ಲಿ ಕುಳಿತು 13 ವರ್ಷದ ಬಾಲಕನೊಬ್ಬ ಸುರಕ್ಷಿತವಾಗಿರುವ ಘಟನೆ ನಡೆದಿದೆ.
ಏನಿದು ಘಟನೆ?
ಭಾನುವಾರ ಬೆಳಗ್ಗೆ 11.10 ಕ್ಕೆ ಕಾಬೂಲ್’ನಿಂದ ನವದೆಹಲಿಯ ಇಂದಿರಾಗಾಂಧಿ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಲ್ಯಾಂಡಿಂಗ್ ಆದ ಕಾಮ್ ಏರ್’ಲೈನ್ಸ್’ನಲ್ಲಿ ಬಾಲಕ ಆಗಮಿಸಿದ್ದಾನೆ.
ವಿಮಾನ ಲ್ಯಾಂಡ್ ಆದ ಬಳಿಕ ಟ್ಯಾಕ್ಸಿ ವೇ ಬಳಿ ಬಾಲಕ ನಡೆದುಕೊಂಡು ಹೋಗುತ್ತಿರುವುದನ್ನು ಗಮನಿಸಿದ ಕೇಂದ್ರೀಯ ಕೈಗಾರಿಕಾ ಭದ್ರತಾ ಪಡೆ ಆತನನ್ನು ವಶಕ್ಕೆ ಪಡೆದು ಟರ್ಮಿನಲ್ -3 ರಲ್ಲಿ ವಿಚಾರಣೆ ನಡೆಸಿದೆ. ವಿಚಾರಣೆ ನಡೆಸಿದ ಬಳಿಕ ಕಾಬೂಲಿಗೆ ವಾಪಸ್ ಕಳುಹಿಸಿದ್ದಾರೆ ಎಂದು ವರದಿಯಾಗಿದೆ.
ಆ ಹುಡುಗನನ್ನು ಹಲವಾರು ಗಂಟೆಗಳ ಕಾಲ ವಿಚಾರಣೆಗೆ ಒಳಪಡಿಸಲಾಯಿತು ಮತ್ತು ಅದೇ ದಿನ ಸಂಜೆ 4 ಗಂಟೆ ಸುಮಾರಿಗೆ ಮತ್ತೊಂದು ವಿಮಾನದ ಮೂಲಕ ಕಾಬೂಲ್’ಗೆ ಕಳುಹಿಸಲಾಗಿದೆ.
ವಿಚಾರಣೆ ವೇಳೆ ನಾನು ಕಾಬೂಲ್ ವಿಮಾನ ನಿಲ್ದಾಣವನ್ನು ಪ್ರವೇಶಿಸಿದ್ದೆ . ನಂತರ ಕುತೂಹಲಕ್ಕಾಗಿ ವಿಮಾನದ ಹಿಂಭಾಗದ ಲ್ಯಾಂಡಿಂಗ್ ಗೇರ್ ವಿಭಾಗದೊಳಗೆ ಪ್ರವೇಶಿಸಿದ್ದೆ ಎಂದಿದ್ದಾನೆ. ವಿಮಾನದ ಲ್ಯಾಂಡಿಂಗ್ ಗೇರ್ ವಿಭಾಗವನ್ನು ತಪಾಸಣೆ ನಡೆಸಲಾಗಿದ್ದು, ವಿಮಾನ ಸುರಕ್ಷಿತವಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಆತ ಬದುಕಿದ್ದೆ ಪವಾಡ!
ಸಾಮಾನ್ಯವಾಗಿ ಭೂಮಿಯಿಂದ 30 ಸಾವಿರ ಅಡಿ ಎತ್ತರದಲ್ಲಿ ವಿಮಾನ ಹಾರುವ ಪ್ರದೇಶದಲ್ಲಿ ಅಂದಾಜು -50 ಡಿಗ್ರಿ ತಾಪಮಾನವಿರುತ್ತದೆ. ಇದರೊಟ್ಟಿಗೆ ಆಮ್ಲಜನಕದ ಕೊರತೆಯೂ ಸಹ ಕಾಡುತ್ತದೆ. ಘನೀಕರಿಸುವ ತಾಪಮಾನ ಮತ್ತು ಚಕ್ರಗಳಿಂದ ಪುಡಿಪುಡಿಯಾಗುವ ಅಪಾಯಗಳಿರುತ್ತವೆ. ಆದರೆ, ಈ ಬಾಲಕ ಬದುಕುಳಿದಿದ್ದು ಹೇಗೆ ಎಂಬ ಪ್ರಶ್ನೆ ಮೂಡಿದೆ.
94 ನಿಮಿಷಗಳ ಪ್ರಯಾಣದಿಂದಲ್ಲಿ ಆತ ಬದುಕುಳಿದ್ದೆ ಪವಾಡ ಎನ್ನಲಾಗುತ್ತಿದೆ. ವಿಮಾನ ಟೇಕಾಫ್ ಆದ ನಂತರ ವೀಲ್ ಬೇ ಬಾಗಿಲು ತೆರೆಯುತ್ತದೆ. ಆ ಚಕ್ರ ಒಳಗಡೆ ಹೋದಂತೆ ಆ ಬಾಗಿಲು ಮುಚ್ಚುತ್ತದೆ. ಈ ಜಾಗದಲ್ಲಿ ಆತ ಕುಳಿತು ಪ್ರಯಾಣ ನಡೆಸಿದ್ದಾನೆ. ವಿಮಾನ ಕಡಿಮೆ ಎತ್ತರದಲ್ಲಿ ಹಾರಾಡಿದ್ದರಿಂದ ಆತ ಪಾರಾಗಿರಬಹುದು ಎಂದು ಹೇಳಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post