ರಿಚ್ಮಂಡ್ ಟೌನ್ನ ಜಾನ್ಸನ್ ಮಾರ್ಕೆಟ್ ಬಳಿ ದೊಡ್ಡದೊಂದು ಬಂಗ್ಲೆಯಲ್ಲಿ ಸುಮಾರು ೫೫ ವರ್ಷದ, ಆರೂವರೆ ಅಡಿ ಎತ್ತರದ, ಸ್ಪರದ್ರೂಪಿ ಅವಿವಾಹಿತ ಬ್ಯಾರಿಸ್ಟರ್ ಏಕಾಂಗಿಯಾಗಿ ಆ ಬಂಗ್ಲೆಯ ಸುತ್ತ ದೊಡ್ಡ ಕಾಂಪೌಂಡ್, ಅದರಾಚೆಗಿನ ರಸ್ತೆ ಪಕ್ಕದಲ್ಲಿ ಬೀದಿ ವೇಶ್ಯೆಯೊಬ್ಬಳು ಪುಟ್ಟ ಮಗ, ಮಗಳೊಂದಿಗೆ ವಾಸಿಸುತ್ತಿದ್ದಳು. ಒಂದು ರಾತ್ರಿ ಮಕ್ಕಳನ್ನು ಬಿಟ್ಟು ವಿಟಪುರುಷನೊಬ್ಬನ ಜತೆ ಪರಾರಿಯಾದಳು. ಆ ಪುಟಾಣಿಗಳಿಬ್ಬರು ಧೋಧೋ ಮಳೆಯಲ್ಲಿ ನೆನೆಯುತ್ತ ಆ ಬಂಗ್ಲೆಯ ಅಂಚಿನಲ್ಲಿ ನಡುಗುತ್ತ ಕೂತಿದ್ದರು. ಮರುದಿನ ಬೆಳಗ್ಗೆ ಅವರ ಸ್ಥಿತಿ ಕಂಡು ಮರುಗಿದ ಬ್ಯಾರಿಸ್ಟರ್, ತಮ್ಮ ಬಂಗ್ಲೆಯಲ್ಲೇ ಆಸರೆ ಕೊಟ್ಟರು. ಅವರಿಬ್ಬರನ್ನು ಉತ್ತಮ ಶಾಲೆ ಸೇರಿಸಿದರು. ಈ ಮಾನವೀಯತೆಯೇ ಅವರ ಮುಳುವಾಯಿತು.
ಚುರುಕಾಗಿದ್ದ ಆ ಹುಡುಗಿಯನ್ನು ಎಸ್ಎಸ್ಎಲ್ಸಿ ಬಳಿಕ ಸೇಂಟ್ ಜೋಸೆಫ್ ಸಂಜೆ ಕಾಲೇಜಿಗೆ ಸೇರಿಸಿದರು. ಆ ಹುಡುಗ ರಾಜ ಮಾತ್ರ ದಾರಿ ತಪ್ಪಿದ. ಒಂದಿನ ಆತ ಕಳವು ಮಾಡುವಾಗ ಸಾರ್ವಜನಿಕರ ಕೈಗೆ ಸಿಕ್ಕಿ ಬಿದ್ದ. ಆತನನ್ನು ಸ್ವತಃ ಬ್ಯಾರಿಸ್ಟರ್ ಅಶೋಕನಗರ ಠಾಣೆಗೆ ಒಪ್ಪಿಸಿದರು. ಮುಂದೆ ಆತನನ್ನು ಬಳ್ಳಾರಿಯ ರಿಮಾಂಡ್ ಹೋಮ್ಗೆ ಸೇರಿಸಲಾಯಿತು. ಈ ನಡುವೆ, ಕಳವು ಪ್ರಕರಣವೊಂದರನ್ನು ಈ ನಟರಾಜನೂ ಬಳ್ಳಾರಿ ಜೈಲು ಸೇರಿದ. ರಿಮಾಂಡ್ ಹೋಮ್ಗೆ ಜೈಲಿನಿಂದಲೇ ಸರಬರಾಜಾಗುತ್ತಿತ್ತು. ಅಲ್ಲಿ ರಾಜನಿಗೂ ನಟರಾಜನಿಗೂ ಸ್ನೇಹ ಬೆಳೆಯಿತು. ತಾನು ರಿಮಾಂಡ್ಹೋಮ್ ಸೇರಲು ಬ್ಯಾರಿಸ್ಟರ್ ಕಾರಣ ಎಂದು ರಾಜ ಕುದಿಯುತ್ತಿದ್ದ. ‘ಬ್ಯಾರಿಸ್ಟರ್ ಮನೆಯ ಬೆಡ್ರೂಂನಲ್ಲಿ ಒಂದು ದೊಡ್ಡ ಪಟ್ಟಿಗೆ ಇದ್ದು, ಅದರಲ್ಲಿ ಭಾರಿ ಹಣ ಮತ್ತು ಬೆಲೆ ಬಾಳುವ ಒಡವೆಗಳಿವೆ. ನೀನು ಆ ಮನೆಗೆ ಕನ್ನ ಹಾಕು’ ಎಂದು ನಟರಾಜನನ್ನು ಪ್ರೇರೇಪಿಸಿದ.
ಶಿಕ್ಷೆ ಮುಗಿದು ನಟರಾಜ ಬಳ್ಳಾರಿಯಿಂದ ಬೆಂಗಳೂರಿಗೆ ಬರುತ್ತಲೇ, ಬ್ಯಾರಿಸ್ಟರ್ ಬಂಗ್ಲೆಯ ದರ್ಶನ ಪಡೆದ. ಪ್ರತಿದಿನ ಸಂಜೆ ಬ್ಯಾರಿಸ್ಟರ್ ಹುಡುಗಿಯನ್ನು ಕಾರಿನಲ್ಲಿ ಕಾಲೇಜಿಗೆ ಬಿಡುತ್ತಿದ್ದರು. ಬಳಿಕ ಸ್ನೇಹಿತರ ಜತೆ ಹರಟೆ ಹೊಡೆಯುತ್ತ ಸಮಯ ಕಳೆದು, ಕಾಲೇಜು ಮುಗಿಯುತ್ತಿದ್ದಂತೆ ಕರೆತರುತ್ತಿದ್ದರು. ನಟರಾಜ ಆ ಮನೆಯ ಮುಖ್ಯದ್ವಾರದ ಕೀಲಿ ಡೂಪ್ಲಿಕೇಟ್ ಮಾಡಿಟ್ಟ. ಒಂದಿನ ಸಂಜೆ ಬ್ಯಾರಿಸ್ಟರ್ ಆ ಹುಡುಗಿಯೊಂದಿಗೆ ಕಾಲೇಜಿಗೆ ಹೊರಡುತ್ತಲೇ ಮನೆಯೊಳಗೆ ನುಸುಳಿದ. ಬೆಡ್ರೂಮ್ಗೆ ನುಗ್ಗಿ ಭಾರೀ ಪ್ರಯಾಸದಿಂದ ಪೆಟ್ಟಿಗೆಯ ಬೀಗ ಒಡೆದ. ಆದರೆ ಅದರಲ್ಲಿ ನಗ, ನಾಣ್ಯಗಳಿರಲಿಲ್ಲ. ಕೇವಲ ಕಾನೂನು ಪುಸ್ತಕಗಳಿದ್ದವು! ಅವತ್ತು ಏನೋ ಕಾರಣಕ್ಕೆ ಕಾಲೇಜು ಬೇಗ ಬ್ಯಾರಿಸ್ಟರ್ ಬೇಗನೆ ವಾಪಾಸಾಗಿಬಿಟ್ಟರು. ಒಳ ಬಂದು ನೋಡಿದರೆ ನಟರಾಜ ‘ಸಂಶೋಧನೆ’ ಯಲ್ಲಿ ಮುಳುಗಿದ್ದ. ಕಳ್ಳ ಕಳ್ಳ ಎಂದು ಬ್ಯಾರಿಸ್ಟರ್ ಕಿರುಚಿಕೊಂಡರು. ಗಾಬರಿ ಬಿದ್ದ ನಟರಾಜ ರಾಡ್ನಿಂದ ಅವರ ತಲೆಗೆ ಬೀಸಿದ. ಬ್ಯಾರಿಸ್ಟರ್ ಕುಸಿದು ಸ್ಥಳದಲ್ಲೇ ಸತ್ತರು. ಆ ಹುಡುಗಿ ದೊಡ್ಡ ಕಿಟಕಿ ಗಾಜನ್ನು ಕೋಲಿನಿಂದ ಪುಡಿಪುಡಿ ಮಾಡಿ ಸಹಾಯಕ್ಕಾಗಿ ಕಿರುಚಿಕೊಂಡಾಗ ನಟರಾಜ ಪರಾರಿಯಾದ.
ಅಂದಿನ ಪೊಲೀಸ್ ಆಯುಕ್ತ ಪಿ.ಜಿ. ಹರ್ಲಂಕರ್ ಅವರು ಆರೋಪಿಗಳ ಪತ್ತೆಗೆ ವಿಶೇಷ ತಂಡ ರಚಿಸಿದ್ದರು. ಕೋನದಿಂದ ತನಿಖೆ ಮಾಡಿದರೂ ಹಂತಕರ ಸುಳಿವು ಸಿಗಲಿಲ್ಲ. ಕೊನೆಗೆ ಪೊಲೀಸರು ಆ ಹುಡುಗಿಯ ಮೇಲೆಯೇ ಸಂಶಯಪಟ್ಟರು. ಪಾಪ ಆ ಹುಡುಗಿ ದೈಹಿಕ, ಮಾನಸಿಕ ಹಿಂಸೆ ಅನುಭವಿಸಬೇಕಾಯಿತು. ಕೊನೆಗೆ ಬ್ಯಾರಿಸ್ಟರ್ ಕುಟುಂಬದವರು ಆಕೆಯನ್ನು ಬಂಗಲೆಯಿಂದ ಹೊರ ಹಾಕಿದರು. ಕಾಲೇಜು ತೊರೆದ ಆಕೆ ಯಾರದೋ ಮನೆಗೆಲಸ ಮಾಡಿಕೊಂಡಿದ್ದಳು. ಹಂತಕ ಪತ್ತೆಯಾದ ಬಳಿಕ ನಾನು ಆಕೆಯನ್ನು ಗಾರ್ಮೆಂಟ್ಸ್ವೊಂದರಲ್ಲಿ ಕೆಲಸ ಕೊಡಿಸಿದೆ.
ಈ ಕೊಲೆ ತನಿಖೆಯಲ್ಲಿ ಬೆರಳಚ್ಚು ತಜ್ಞರು ಮಾಡಿದ ಸಣ್ಣ ಪ್ರಮಾದದಿಂದ ಕೊಲೆಗಾರ ಬಂಗ್ಲೆಗೆ ನುಗ್ಗಿದ ನಟರಾಜ ಬಲ್ಬ್ ತೆಗೆದು ಸ್ಟೇರ್ಕೇಸ್ ಕೆಳಗಿಟ್ಟಿದ್ದ. ಆದರೆ ಬಲ್ಬ್ ಮೇಲಿನ ಬೆರಳಚ್ಚು ದಾಖಲಿಸಲು ಮರೆತಿದ್ದರು. ದಾಖಲಿಸಿದ್ದರೆ, ‘ಹಿಸ್ಟರಿಶೀಟರ್’ ಆಗಿದ್ದ ನಟರಾಜ ಯಾವತ್ತೋ ಸಿಕ್ಕಿ ಬೀಳುತ್ತಿದ್ದ. ಮತ್ತೊಂದು ಕುತೂಹಲದ ಸಂಗತಿ ಎಂದರೆ, ಕ್ರೈಂ ಪೇದೆಯೊಬ್ಬ ನಟರಾಜನಿಂದ ನಿರಂತರವಾಗಿ ಹಫ್ತಾ ವಸೂಲಿ ಮಾಡುತ್ತಿದ್ದನಂತೆ. ಒಮ್ಮೆಯಂತೂ ಹೆಂಡತಿಯ ತಾಳಿ ಅಡವಿಟ್ಟು ಆತನಿಗೆ ಹಣ ಕೊಟ್ಟು ಬಚಾವಾಗಿದ್ದನಂತೆ.
Discussion about this post