1986
‘ನಮ್ಮ ಲಾಕಪ್ನಲ್ಲಿ ನಿನಗಿಂದು ಕೊನೆಯ ದಿನ. ನಾಳೆ ಸೆಂಟ್ರಲ್ ಜೈಲ್ಗೆ ಏನು ಊಟ ಬೇಕು ಹೇಳೋ, ತರಿಸಿ ಕೊಡ್ತೀನಿ.’ ಎಂದೆ. ಆತ ಪ್ರಚಂಡ ಕಳ್ಳ. ಬೆಂಗಳೂರಿನ ನಾನಾ ಭಾಗಗಳ ಮನೆಗಳಿಗೆ ಕನ್ನ ಹಾಕುತ್ತ ಬದುಕುತ್ತಿದ್ದವನು. ‘ಸಾರ್ ಚಿಕನ್ ಬಿರಿಯಾನಿ, ಅರ್ಧ ಬಾಟಲ್ ತ್ರಿಬಲ್ ಎಕ್ಸ್ ರಮ್,’ ಎಂದ ಆತ. ಸಂಕೋಚವಿಲ್ಲದೆ! ಆಯ್ತಪ್ಪ ಮಜಾ ಮಾಡು. ನಾಳೆಯಿಂದ ಜೈಲಲ್ಲಿ ರೊಟ್ಟಿ ಮುರಿಯೋದು ಇದ್ದೇ ಇದೆ.’ ಎಂದ ನಾನು, ಕಾನ್ಸ್ಟೇಬಲ್ ಚಾಮಯ್ಯನಿಗೆ ಹಣ ಕೊಟ್ಟು ಆತ ಹೇಳಿದ್ದನ್ನು ತಂದು ಕೊಡಲು ಹೇಳಿ ಮನೆಗೆ ರಾತ್ರಿ 11 ಗಂಟೆ ಸುಮಾರಿಗೆ ಮತ್ತೆ ಠಾಣೆಗೆ ಬಂದು ಕೂತಿದ್ದೆ. ಯಾಕೋ ನನ್ನ ದೃಷ್ಟಿ ಎದುರಿಗಿದ್ದ ಲಾಕಪ್ನತ್ತ ಹೊರಳಿತು. ಕಳ್ಳ ಕಾಲು ಚಾಚಿ ಕೂತಿದ್ದ. ನಾನು ಆತನತ್ತ ನೋಡುತ್ತಲೇ, ಇತ್ತ ಬರುವಂತೆ ಕೈಸನ್ನೆ ಮಾಡಿದ. ‘ಪಾಪ ಅಂತ ಬಿರಿಯಾನಿ, ರಮ್ ತರಿಸಿಕೊಟ್ಟು ಸಲಿಗೆ ತೋರಿಸಿದ್ದಕ್ಕೆ ಈಗ ಮತ್ತೇನೋ ಕೇಳಲು ಸ್ಕೆಚ್ ಹಾಕುತ್ತಿದ್ದಾನೆ ನನ್ಮಗಾ.’ ಎಂದುಕೊಳ್ಳುತ್ತ ಆತನತ್ತ ಹೋದೆ.
‘ಸಾರ್ ನಾನು ನಿಮಗೆ ಇಷ್ಟು ದಿನ ಕಳ್ಳತನದ ಬಗ್ಗೆ ಹೇಳಿದ್ದು, ಹಣ-ಚಿನ್ನಾಭರಣ ತೋರಿಸಿದ್ದು ಯಾವ ಪುಟುಗೋಸಿ ಕೇಸುಗಳು ಸಾರ್? ನಾನೊಂದು ದೊಡ್ಡ ತಪ್ಪು ಮಾಡಿಬಿಟ್ಟಿದ್ದೀನಿ ಸಾರ್. ನನ್ನ 10 ವರ್ಷಗಳ ‘ಸರ್ವೀಸ್’ನಲ್ಲಿ ಎಷ್ಟೊಂದು ಪೊಲೀಸ್ ಸ್ಟೇಷನ್ಗಳಿಗೆ ಎಳೆದುಕೊಂಡು ಹೋಗಿ ಏರೋಪ್ಲೇನ್ ಏರಿಸಿದ್ದರೂ ಈ ವಿಷಯ ಬಾಯಿ ಬಿಟ್ಟಿಲ್ಲ. ಈಗಲೂ ಸುಮ್ಮನಿದ್ದು ಬಿಟ್ಟರೆ ಯಾರಿಗೂ ಗೊತ್ತಾಗುವುದಿಲ್ಲ. ಆದರೆ ನೀವು ಇಷ್ಟು ದಿನ ಲಾಕಪ್ನಲ್ಲಿ ನನ್ನನ್ನು ಆತ್ಮೀಯತೆಯಿಂದ ನೋಡಿಕೊಂಡಿದ್ದೀರಿ. ನಿಮ್ಮ ಹತ್ತಿರ ಈ ರಹಸ್ಯ ಹೇಳಿ ಪಶ್ಚಾತ್ತಾಪ ಮಾಡಿಕೊಳ್ಳಬೇಕು ಅನಿಸುತ್ತಿದೆ. ಸಾರ್… ಆ ಕೊಲೆ ಆಯ್ತಲ್ಲ? ಅದನ್ನು ನಾನೇ ಮಾಡಿದ್ದು.’ ಎಂದು ಬಿಟ್ಟ! ನಾನು ಸುಸ್ತು ಹೊಡೆದು ಹೋದೆ.
ಬೆಂಗಳೂರಿನಲ್ಲಿ 1985ರ ಆ.14ರಂದು ನಡೆದಿದ್ದು ಬ್ಯಾರಿಸ್ಟರ್ ಮರ್ಡರ್ ಕೇಸ್ ಅಂತಾರಾಷ್ಟ್ರೀಯ ಮಟ್ಟದಲ್ಲಿ ಸುದ್ದಿಯಾಗಿತ್ತು. ಏಕೆಂದರೆ ಅವರು ಮೈಸೂರು ದಿವಾನರಾಗಿದ್ದ ಸರ್ ಮಿರ್ಜಾ ಇಸ್ಮಾಯಿಲ್ ಅವರ ಹತ್ತಿರದ ಸಂಬಂಧಿ. ಸ್ವಾಮಿ ಶ್ರದ್ಧಾನಂದನಿಂದ ಭೀಕರವಾಗಿ ಕೊಲೆಯಾದ ಶ್ರೀಮಂತ ಮಹಿಳೆ ಶಾಕೀರಾ ಕೂಡ ಇವರ ಸಮೀಪದ ಬಂಧು. ಇಂಗ್ಲೆಂಡ್ನಲ್ಲಿ ಅವರು ಲಾನಲ್ಲಿ ಮಾಸ್ಟರ್ ಡಿಗ್ರಿ ಪಡೆದು ‘ಬ್ಯಾರಿಸ್ಟರ್’ ಜನಪ್ರಿಯರಾಗಿದ್ದರು. ಅವರ ಸಹೋದಿರಯೊಬ್ಬರು ಪಾಕಿಸ್ಥಾನದ ರಾಜತಾಂತ್ರಿಕ ಅಧಿಕಾರಿಯನ್ನು ವಿವಾಹವಾಗಿದ್ದರು. ಸಂಬಂಧಿಗಳೆಲ್ಲ ರಾಜಕೀಯ, ರಾಜತಾಂತ್ರಿಕ, ಉದ್ಯಮ ಹೀಗೆ ನಾನಾ ರಂಗಗಳಲ್ಲಿ ಉನ್ನತ ಸ್ಥಾನದಲ್ಲಿದ್ದರು. ಹಾಗಾಗಿ ಕೊಲೆ ಆರೋಪಿಗಳನ್ನು ಆದಷ್ಟು ಬೇಗ ಬಂಧಿಸುವಂತೆ ಪೊಲೀಸರ ಮೇಲೆ ವಿಪರೀತ ಒತ್ತಡವಿತ್ತು. ಹತ್ತಾರು ಪೊಲೀಸ್ ಅಧಿಕಾರಿಗಳ ತಂಡ ವರ್ಷಗಟ್ಟಲೆ ಪ್ರಯತ್ನಪಟ್ಟರೂ ಕೊಲೆ ರಹಸ್ಯ ಬಗೆಹರಿದಿರಲಿಲ್ಲ. ಹೀಗಿರುವಾಗ ಪ್ರಯತ್ನವನ್ನೇ ಮಾಡದೆ ನನ್ನ ಎದುರು ಆ ಸೆನ್ಯೇಷನಲ್ ಮರ್ಡರ್ ಕೇಸ್ನ ಹಿಂದಿನ ಹೂರಣ ಬಿಚ್ಚಿಕೊಂಡಿತ್ತು!
ನಮ್ಮ ಲಾಕಪ್ನಲ್ಲಿರುವ ಉಪವಾಸ ಕೆಡವಬಾರದು ಎಂಬುದು, ದಕ್ಷ-ಪ್ರಾಮಾಣಿಕ ಪೊಲೀಸ್ ಅಧಿಕಾರಿಯಾಗಿ ಖ್ಯಾತಿ ಗಳಿಸಿದ್ದ ಎಂ.ಕೆ. ಗಣಪತಿ ಅವರಿಂದ ನಾನು ಕಲಿತ ಪಾಠ. ‘ಅಪರಾಧಿಗಳ ಬಗ್ಗೆ ಬಾಯಿ ಬಿಡಿಸಲು ಆರೋಪಿಗಳ ಮೇಲೆ ದಂಡ ಪ್ರಯೋಗ ಅನಿವಾರ್ಯ, ಆದರೆ ಅವರು ಉಪವಾಸದಿಂದ ಬಳಲಬಾರದು. ನಾವು ಮನೆಗೆ ಹೋಗಿ ಬಿಸಿಬಿಸಿ ಊಟ ಮಾಡಿ ಮಲಗುತ್ತೇವೆ. ಅತ್ತ ನಮ್ಮ ಲಾಕಪ್ನಲ್ಲಿರುವ ವ್ಯಕ್ತಿಯನ್ನು ಅನ್ನ-ನೀರು ಕೊಡದೆ ಬಳಲಿಸುವುದು ಯಾವ ನ್ಯಾಯ? ಅವರ ಯೋಗಕ್ಷೇಮ ವಿಚಾರಿಸಿಯೇ ಮನೆಗೆ ಹೋಗಬೇಕು’ ಎಂದು ಅವರು ನಾನು ಪ್ರೊಬೆಷನರಿಯಲ್ಲಿರುವಾಗ ಹೇಳಿದ ಮಾತನ್ನು ಸೇವೆಯುದ್ದಕ್ಕೂ ಪಾಲಿಸುತ್ತ ಬಂದಿದ್ದೆ.
ಹಾಗೆ ನೋಡಿದರೆ ಆ ಕಳ್ಳ ನನ್ನ ಕೈಗೆ ಸಿಕ್ಕಿ ಬಿದ್ದಿದ್ದೇ ಆಕಸ್ಮಿಕ. ನಾನಾಗ ವೈಯಾಲಿಕಾವಲ್ ಠಾಣೆಯಲ್ಲಿ ಎಸ್ಐ. ಅವತ್ತು ಸಂಜೆ ಚಾಮಯ್ಯ ಎಂಬ ಕಾನ್ಸ್ಟೇಬಲ್ನನ್ನು ಕೂರಿಸಿಕೊಂಡು ನನ್ನ ಬುಲೆಟ್ ಮೋಟಾರ್ಬೈಕ್ನಲ್ಲಿ ಗಸ್ತು ತಿರುಗುತ್ತಿದ್ದೆ. ಸ್ಯಾಂಕಿ ರಸ್ತೆಯಲ್ಲಿರುವ ಕಾವೇರಿ ಟಾಕೀಸ್ ಜಂಕ್ಷನ್ನಲ್ಲಿ ನಿಂತೆ. ಸಂಜೆ 7.30ರ ಸಮಯ. ಅಷ್ಟು ಹೊತ್ತಿನಲ್ಲಿ ಟ್ರಾಫಿಕ್ಜಾಮ್. ಆದರೆ ಆ ದಿನಗಳಲ್ಲಿ ರಸ್ತೆಗಳೆಲ್ಲ ಬಿಕೋ ಆಗ ಬೆಂಗಳೂರಿನ ಯಾವ ರಸ್ತೆಯೂ ಒನ್ವೇ ಆಗಿರಲಿಲ್ಲ. ಮುಂಬಯಿ, ಹೈದರಾಬಾದ್ ಕಡೆಯಿಂದ ಬರುವ ಲಾರಿಗಳು ಬೆಂಗಳೂರಿನ ಹೃದಯಭಾಗದ ರಾಜಭವನ ರಸ್ತೆ ಮೂಲಕ ಮದ್ರಾಸ್ಗೆ ಹೋಗುತ್ತಿದ್ದವು! ಫುಟ್ಪಾತ್ ಪಕ್ಕ ವ್ಯಕ್ತಿಯೊಬ್ಬ ಸೈಕಲ್ ಮೇಲೆ ಟೀ, ಬನ್ ಮಾರುತ್ತಿದ್ದ. ವ್ಯಕ್ತಿಯೊಬ್ಬ ಸೈಕಲ್ ನಿಲ್ಲಿಸಿ ಟೀ ಕುಡಿಯುತ್ತಿದ್ದ. ಸೈಕಲ್ ಹಿಂದೆ ಗೋಣಿಚೀಲದಲ್ಲಿ ಯಾವುದೋ ವಸ್ತು ಅಡಗಿಸಿಟ್ಟಂತೆ ಕಂಡಿತು. ಅದು ವಿಗ್ರಹ ಇರಬಹುದೇ ಎಂಬ ಅನುಮಾನ ಕಾಡಿತು. ಚೆಕ್ ಮಾಡಿ ಬಾ ಎಂದು ಮಪ್ತಿಯಲ್ಲಿದ್ದ ಕಳಿಸಿದೆ.
ಆತ ಗೋಣಿಚೀಲ ಮುಟ್ಟುತ್ತಿದ್ದಂತೆ ಆ ವ್ಯಕ್ತಿ ಗಡಿಬಿಡಿಯಿಂದ ಹೊರಡಲು ಮುಂದಾದ. ತತಕ್ಷಣ ನಾನು ಅಲ್ಲಿಗೆ ಧಾವಿಸಿ ವ್ಯಕ್ತಿ ಗಡಿಬಿಡಿಯಿಂದ ಹೊರಡಲು ಮುಂದಾದ. ತಕ್ಷಣ ನಾನು ಅಲ್ಲಿಗೆ ಧಾವಿಸಿ ಹಿಡಿದುಕೊಂಡೆ. ಗೋಣಿಚೀಲ ಬಿಚ್ಚಿ ನೋಡಿದಾಗ ಅದರಲ್ಲಿ ಟೇಬಲ್ಫ್ಯಾನ್, ಟ್ರಾನ್ಸಿಸ್ಟರ್, ಗೋಡೆ ಗಡಿಯಾರ ಹಾಗೂ ಕೆಲವು ಶೋಪೀಸ್ಗಳಿದ್ದವು. ಠಾಣೆಗೆ ತಂದು ವಿಚಾರಿಸಿದಾಗ, ಆತ ನಟರಾಜ ಎಂಬ ನಟೋರಿಯಸ್ ಕಳ್ಳ ಎನ್ನುವುದು ಬೆಳಕಿಗೆ ಬಂತು. ಅಶೋಕನಗರ ಠಾಣೆ ವ್ಯಾಪ್ತಿಯಲ್ಲೇ ಆತ ೧೫ಕ್ಕೂ ಮನೆಗಳಿಗೆ ಕನ್ನ ಹಾಕಿದ್ದ. ಐದು ದಿನ ಆತನನ್ನು ಕಸ್ಟಡಿಗೆ ತೆಗೆದುಕೊಂಡು ೫ ಲಕ್ಷ ರೂ.ಗೂ ಹೆಚ್ಚಿನ ಮೌಲ್ಯದ ವಸ್ತು ವಶಪಡಿಸಿಕೊಂಡೆ. ಕಸ್ಟಡಿ ಅವಧಿ ಮುಗಿದು ಸೆಂಟ್ರಲ್ ಜೈಲ್ಗೆ ಕಳಿಸಬೇಕು ಎನ್ನುವಷ್ಟರಲ್ಲಿ ಆತ ಕೊಲೆ ರಹಸ್ಯ ಬಯಲು ಮಾಡಿದ್ದ.
(ಮುಂದುವರೆಯುವುದು)
Discussion about this post