1988
ಠಾಕೂರ್ ನಿಧನದ ಬಳಿಕ ರಿಯಲ್ ಎಸ್ಟೇಟ್ ವ್ಯವಹಾರವನ್ನು ಸಾವಿತ್ರಿದೇವಿ ಮುಂದುವರಿಸಿದ್ದರು. ಕಾರ್ಪೆಂಟರ್ ಕೆಲಸ ಮಾಡುತ್ತಿದ್ದ ಪಳನಿ ಎಂಬಾತ ಅವರಿಗೆ ಈ ಬಿಸಿನೆಸ್ನಲ್ಲಿ ನೆರವು ನೀಡುತ್ತ, ಆ ಕುಟುಂಬಕ್ಕೆ ಆತ್ಮೀಯನಾಗಿಬಿಟ್ಟಿದ್ದ. ಈ ನಡುವೆ ಸಾವಿತ್ರಿದೇವಿ ಅವರ ಸೊಸೆ ತಮ್ಮ ಬೆಡ್ರೂಮ್ಅನ್ನು ಹೊಸ ವಿನ್ಯಾಸದಿಂದ ಅಲಂಕರಿಸಲು ಮುಂದಾದರು. ಕೋಣೆಯ ಗೋಡೆಯ ಮೇಲೆ ಸೂರ್ಯಾಸ್ತದ ವರ್ಣರಂಜಿತ ಚಿತ್ರ ಬಿಡಿಸಲು ಬಯಸಿದರು. ಈ ಸಂಗತಿಯನ್ನು ಅವರು ಪಳನಿಗೆ ಹೇಳಿದಾಗ ಆತ, ರಾಜನ್ ಎಂಬ ಕಲಾವಿದನನ್ನು ಕರೆದುಕೊಂಡು ಬಂದ.
ರಾಜನ್ ತನ್ನ ಕೈಚಳಕದಿಂದ ಆ ಬೆಡ್ರೂಮ್ಅನ್ನು ಕಲಾಕೃತಿಗಳಿಂದ ಅದ್ಭುತವಾಗಿ ಶೃಂಗರಿಸಿದ. ಇದನ್ನು ಕಂಡು ಖುಷಿಗೊಂಡ ಠಾಕೂರ್ ಸೊಸೆ, ಕೇಳಿದಷ್ಟು ಹಣ ಕೊಟ್ಟು ಕಳಿಸಿದರು. ರಾಜನ್ ತನ್ನ ಹುಟ್ಟೂರು ಕೇರಳದ ಚಂಗನಶೇರಿಗೆ ತೆರಳಿದ ಸಂದರ್ಭದಲ್ಲಿ ಹಳೆಯ ಗೆಳೆಯರಾದ ಶಶಿ ಪಿಳ್ಳೈ, ಟಿ.ಒ. ರಾಜು, ಅನ್ಯಾದ್, ರಘು ಜತೆ ಒಂದು ರಾತ್ರಿ ಗುಂಡು ಹಾಕುತ್ತ, ಗಾಂಜಾ ಹೊಡೆಯುತ್ತ ಕಷ್ಟ-ಸುಖ ಮಾತನಾಡುತ್ತಿದ್ದ. ‘ಅಯ್ಯೋ ನಾವು ಅಲ್ಲಿ ಇಲ್ಲಿ ಕೆಲಸ ಮಾಡಿದ್ದು ಸಾಕು. ಬೆಂಗಳೂರಿನಲ್ಲಿ ಯಾವುದಾದರೂ ಶ್ರೀಮಂತರ ಮನೆ ಇದ್ದರೆ ಹೇಳು. ನಾವೆಲ್ಲ ಸೇರಿ ದರೋಡೆ ಮಾಡೋಣ. ಕೊಲೆ ನಡೆದರೂ ಸರಿ. ಕೋಟಿ ಕೋಟಿ ಹಣ ಲೂಟಿ ಮಾಡಿ ರಬ್ಬರ್ ತೋಟ ಖರೀದಿಸಿ ನೆಮ್ಮದಿಯಿಂದ ಇರೋಣ. ನಮ್ಮ ಲೈಫ್ ಸೆಟ್ಲ್ ಮಾಡಿಕೊಳ್ಳುವುದಕ್ಕಾಗಿ ಒಂದೇ ಒಂದು ಸಾರಿ ಅಡ್ಡ ಹಾದಿ ಹಿಡಿಯೋಣ.’ ಎಂದು ಶಶಿ ಹೇಳಿದ. ರಾಜನ್ಗೆ ಆತನ ಮಾತು ಸರಿ ಎನಿಸಿತು. ಆಗ ಆತನಿಗೆ ತಟ್ಟನೆ ಹೊಳೆದಿದ್ದು ‘ಸಾವಿತ್ರಿದೇವಿ ನಿವಾಸ.’
ಬೆಂಗಳೂರಿಗೆ ಹಿಂತಿರುಗಿದ ರಾಜನ್, ಪಳನಿಯನ್ನು ಭೇಟಿ ಮಾಡಿ ‘ಕೇರಳದ ರಬ್ಬರ್ ಎಸ್ಟೇಟ್ ಮಾಲೀಕರೊಬ್ಬರಿಗೆ ಸೈಟ್ ಬೇಕಾಗಿದೆ. ಸಾವಿತ್ರಿದೇವಿ ಅವರನ್ನು ಪರಿಚಯಿಸು’ ಎಂದ. ಪಳನಿ ಪರಿಚಯಿಸಿದ. ಮತ್ತೊಂದು ದಿನ ರಾತ್ರಿ ಏಳು ಗಂಟೆ ಹೊತ್ತಿಗೆ ಶಶಿ, ರಾಜನ್ ಮತ್ತು ಇತರ ಮೂವರು ಸೈಟ್ನ ಹಣ ಕೊಡುವ ನೆಪದಲ್ಲಿ ಸಾವಿತ್ರಿದೇವಿ ಮನೆಗೆ ಹೋದರು. 7.30 ರಿಂದ 8 ಗಂಟೆವರೆಗೆ ದಿಲ್ಲಿ ದೂರದರ್ಶನದಲ್ಲಿ ‘ಚಿತ್ರಹಾರ್’ ಎಂಬ ಹಿಂದಿ ಹಾಡುಗಳ ಕಾರ್ಯಕ್ರಮ ಪ್ರಸಾರವಾಗುತ್ತಿತ್ತು. ಆಗ ಖಾಸಗಿ ಮನರಂಜನಾ ಚಾನೆಲ್ಗಳ ಭರಾಟೆ ಇರಲಿಲ್ಲ. ‘ಚಿತ್ರಹಾರ್’ ಭಾರೀ ಜನಪ್ರಿಯವಾಗಿತ್ತು.
ಸಾವಿತ್ರಿದೇವಿ ಕೆಳ ಮಹಡಿಯಲ್ಲಿದ್ದರು. ಮೇಲಿನ ಎರಡು ಮನೆಗಳಲ್ಲಿ ಅವರ ಮಕ್ಕಳ ಕುಟುಂಬದವರು ‘ಚಿತ್ರಹಾರ್’ನಲ್ಲಿ ಮುಳುಗಿದ್ದರು. ಇದೇ ಸರಿಯಾದ ಸಂದರ್ಭ ಎಂದುಕೊಂಡ ರಾಜನ್, ಶಶಿ ತಂಡ ಟಿವಿ ವಾಲ್ಯೂಮ್ ಹೆಚ್ಚಿಸಿ ಸಾವಿತ್ರಿದೇವಿ ಅವರನ್ನು ಉಸಿರುಗಟ್ಟಿಸಿ ಕೊಂದರು. ಕೆಲಸದ ಹುಡುಗಿ ಭಾಗ್ಯ ಎಂಬಾಕೆಯ ಮೇಲೆ ಹಲ್ಲೆ ಮಾಡಿದರು. ಆಕೆ ಕುಸಿದು ಬಿದ್ದಳು. ಇನ್ನೇನು ಹಣ, ಚಿನ್ನಾಭರಣಗಳನ್ನು ಚೀಲಕ್ಕೆ ತುಂಬಿಸಬೇಕು ಎನ್ನುವಷ್ಟರಲ್ಲಿ ಕಾಲಿಂಗ್ ಬೆಲ್ ಸದ್ದು ಮಾಡಿತು. ಒಳಗೆ ಏನು ನಡೆಯುತ್ತಿದೆ ಎಂದರಿಯದ ಸುಮಾರು 16 ವರ್ಷದ ಮೊಮ್ಮಗ ಸುನೀಲ್ ಮಾರ್ಕೆಟ್ನಿಂದ ಬಂದವನೇ ಅಜ್ಜಿಯನ್ನು ಕಾಣಲು ಬಂದಿದ್ದ. ಮೆಲ್ಲಗೆ ಬಾಗಿಲು ತೆಗೆದ ಹಂತಕರು, ಆತ ಒಳ ಬರುತ್ತಲೇ ಬಾಗಿಲು ಹಾಕಿಕೊಂಡು ಆತನ ಮೇಲೆ ಮುಗಿಬಿದ್ದರು.
ಸುನಿಲ್ ಕರಾಟೆಪಟುವಾಗಿದ್ದ. ಆತ ಇವರೊಡನೆ ಸಾಕಷ್ಟು ಸೆಣಸಾಡಿದ. ಆದರೆ ಹಂತಕರ ಕೈಯೇ ಮೇಲಾಯಿತು. ಅಪ್ಪ ಆಗಷ್ಟೇ ಸುನಿಲ್ಗೆ ಸ್ಕೂಟರ್ ತೆಗೆಸಿಕೊಟ್ಟಿದ್ದರು. ಮಗ ಸುರಕ್ಷಿತವಾಗಿ ಬಂದು ಮುಟ್ಟಿದ್ದಾನೋ ನೋಡಲು ಅವರು ಮಾರ್ಕೆಟ್ನಿಂದ ಮನೆಗೆ ಫೋನ್ ಮಾಡಿದರು. ಅಮ್ಮ ಸಾವಿತ್ರಿದೇವಿ ಫೋನ್ ಎತ್ತಿಕೊಂಡಿಲ್ಲ ಎಂದುಕೊಂಡು ಸಹೋದರನ ಮನೆಗೆ ಫೋನ್ ಮಾಡಿ ವಿಚಾರಿಸಿದರು. ಸಹೋದರನ ಮಗ ಸಂಜಯ್ ಕೆಳಗಡೆ ಅಜ್ಜಿ ಇರುವ ಮನೆಗೆ ಹೋಗಿ ಕಾಲಿಂಗ್ ಬೆಲ್ ಒತ್ತಿದ. ಆತನನ್ನೂ ಒಳಗಡೆ ಎಳೆದುಕೊಂಡ ಹಂತಕರು ಕತ್ತು ಹಿಸುಕಿ ಕೆಡವಿದರು. ಹೀಗೆ ಆ ಮನೆಯಲ್ಲಿ ನಾಲ್ಕು ದೇಹಗಳು ಉರುಳಿದವು. ಹಣ-ಒಡವೆಗಳನ್ನು ತುಂಬಿಕೊಂಡ ದುಷ್ಕರ್ಮಿಗಳು ಜಾಗ ಖಾಲಿ ಮಾಡಿದರು. ಪಕ್ಕದಲ್ಲೇ ರೈಲು ಮಾರ್ಗ ಹಾದು ಹೋಗಿತ್ತು. ಹಳಿಗುಂಟ ನಡೆದುಕೊಂಡು ಬಂದು ಸಿಟಿ ರೈಲು ನಿಲ್ದಾಣ ತಲುಪಿ ರಾತ್ರಿ 9.30ಕ್ಕೆ ಹೊರಡುವ ‘ಹೈಲೆಂಡ್ ಎಕ್ಸ್ಪ್ರೆಸ್’ ರೈಲು ಏರಿದರು.
ಸ್ಥಳ ತಲುಪಿದ ನಾವು. ನಾಲ್ವರ ಕೊಲೆಯಾಗಿದೆ ಎಂದೇ ಭಾವಿಸಿದ್ದೆವು. ಮರುದಿನ ಕೆಲವು ಪತ್ರಿಕೆಗಳಲ್ಲಿ ನಾಲ್ವರ ಕೊಲೆ ಎಂದೇ ಪ್ರಕಟವಾಯಿತು. ಆದರೆ ಪ್ರಜ್ಞೆ ಕಳೆದುಕೊಂಡು ಬಿದ್ದಿದ್ದ ಭಾಗ್ಯ ಮತ್ತು ಸಂಜಯ್ ಉಸಿರಾಡುತ್ತಿದ್ದರು. ಅವರನ್ನು ತಕ್ಷಣ ಆಸ್ಪತ್ರೆಗೆ ಸೇರಿಸಿ ಬಚಾವ್ ಮಾಡಿದೆವು. ಆಭರಣಗಳ ಖಾಲಿ ಬಾಕ್ಸ್ಗಳನ್ನು ಆರೋಪಿಗಳು ರೈಲ್ವೆ ಟ್ರ್ಯಾಕ್ ಬಳಿ ಎಸೆದಿದ್ದರು. ಇದು ‘ಮರ್ಡರ್ ಫಾರ್ ಗೇಯ್ನ್’ ಎನ್ನುವುದು ಸ್ಪಷ್ಟವಾಯಿತು. ಆ ಮನೆಯಲ್ಲಿ ಪಾತಕಿಗಳು ಬಿಟುಹೋಗಿದ್ದ ಕೆಂಪು ಬಣ್ಣದ ತೆಳುವಾದ ಟವೆಲ್ ನಮಗೆ ಮುಖ್ಯ ಸುಳಿವಾಗಿತ್ತು. ನಾವು ಪಳನಿಯನ್ನು ಕರೆದು ವಿಚಾರಿಸಿದಾಗ ಆತ ರಾಜನ್ ಮೇಲೆ ಸಂಶಯ ವ್ಯಕ್ತಪಡಿಸಿದ. ರಾಜನ್ನ ಸಂಬಂಧಿ ವೇಣು ಎಂಬಾತನನ್ನು ಎಳೆದುಕೊಂಡು ಬಂದು ‘ಏರೋಪ್ಲೇನ್’ ಏರಿಸಿದಾಗ ಮಹತ್ವದ ಮಾಹಿತಿ ಲಭ್ಯವಾಯಿತು.
ಆರೋಪಿಗಳು ಹೊರಟಿದ್ದ ರೈಲು ಮರುದಿನ ಮಧ್ಯಾಹ್ನ 3.30ಕ್ಕೆ ತ್ರಿವೆಂಡ್ರಂ ತಲುಪುತಿತ್ತು. ಮಧ್ಯಾಹ್ನ 2.30ಕ್ಕೆ ಬೆಂಗಳೂರಿನಿಂದ ತ್ರಿವೆಂಡ್ರಂಗೆ ವಿಮಾನವೊಂದಿತ್ತು. ಅದು 3.15ಕ್ಕೆ ಅಲ್ಲಿ ಲ್ಯಾಂಡ್ ಆಗುತ್ತಿತ್ತು. ನಾವು ಆ ವಿಮಾನ ಏರಿದೆವು. ತ್ರಿವೆಂಡ್ರಂ ಏರ್ಪೋರ್ಟ್ನಲ್ಲಿ ಇಳಿದು 15 ನಿಮಿಷದೊಳಗೆ ರೈಲು ನಿಲ್ದಾಣ ತಲುಪಿ ಆರೋಪಿಗಳನ್ನು ಬಲೆಗೆ ಬೀಳಿಸುವುದು ನಮ್ಮ ಪ್ಲ್ಯಾನ್ ಆಗಿತ್ತು. ಆದರೆ ಆದದ್ದೇ ಬೇರೆ…
ಅದು ಪಾಕ್ನಿಂದ ವಲಸೆ ಬಂದ ಠಾಕೂರ್ ಫ್ಯಾಮಿಲಿ. ಅವರದು ಒಂಥರಾ ‘ಭಾಗ್ಮಿಲ್ಖಾ ಭಾಗ್’ ಕತೆ. ಬೆಂಗಳೂರಿನಲ್ಲಿ ಹೊಸ ನೆಲೆ ಕಂಡುಕೊಂಡು ಠಾಕುಠೀಕಾಗಿದ್ದ ಠಾಕೂರ್ ಕುಟುಂಬದಲ್ಲಿ ಡಬಲ್ ಮರ್ಡರ್ ನಡೆದು ಹೋಯಿತು…
Discussion about this post