ಬೆಂಗಳೂರು: ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯು ಕಳೆದ 20 ವರುಷಗಳಿಂದ ಸುಮಾರು 5500 ಕ್ಕೂ ಹೆಚ್ಚು ಯುವಕ-ಯುವತಿಯರಿಗೆ ಉಚಿತವಾಗಿ ಕಂಪ್ಯೂಟರ್ ಶಿಕ್ಷಣವನ್ನು ನೀಡಿದೆ. ಇಲ್ಲಿ ತರಬೇತಿ ಪಡೆದ ಸುಮಾರು ಶೇ. 90 ರಷ್ಟು ಯುವಕ-ಯುವತಿಯರು ಲಾಭದಾಯಕ ಹುದ್ದೆಯಲ್ಲಿದ್ದು, ಅವರಲ್ಲಿ ಅನೇಕರು ಸ್ವಂತ ಉದ್ಯೋಗವನ್ನು ಸ್ಥಾಪಿಸಿ, ಪ್ರಬುದ್ಧಮಾನಕ್ಕೆ ಬಂದಿದ್ದಾರೆ ಎಂದು ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಯ ನಿರ್ದೇಶಕ ವೆಂಕಟೇಶ್ ಶೇಷಾದ್ರಿ ಹೇಳಿದ್ದಾರೆ.
ಯುವಕರ ಸಬಲೀಕರಣ ಕ್ಷೇತ್ರದಲ್ಲಿ ಮಹತ್ತರ ಸಾಧನೆ ಮಾಡಿರುವ ಬೆಂಗಳೂರಿನ ಮಲ್ಲೇಶ್ವರಂ ನಲ್ಲಿರುವ ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ತರಬೇತಿ ಸಂಸ್ಥೆಗೆ 2018 ನೆಯ ಬಾರಿಯ ಹಂಸ ವಿವೇಕ ರತ್ನ ಪ್ರಶಸ್ತಿ ಲಭಿಸಿದೆ. ಶೇಷಾದ್ರಿಪುರಂ ಕಾಲೇಜು ಸಭಾಂಗಣದಲ್ಲಿ ನಡೆದ ಸಮಾರಂಭದಲ್ಲಿ ಅವರು ಮಾತನಾಡಿದರು.
ಕೆನರಾ ಬ್ಯಾಂಕ್ ಮಾಹಿತಿ ತಂತ್ರಜ್ಞಾನ ಸಂಸ್ಥೆಯು ಕಂಪ್ಯೂಟರ್ ಆಫೀಸ್ ಅಡ್ಮಿನಿಸ್ಟ್ರೇಶನ್ (ಟ್ಯಾಲಿ) ಅಥವಾ ಡಿಟಿಪಿ ಮತ್ತು ಹಾಡರ್ ವಡರ್ ಮತ್ತು ನೆಟ್ ವಕರ್ ಅದ್ಮಿನಿಸ್ಟ್ರೇಶನ್ ವಿಭಾಗದಲ್ಲಿ ಉಚಿತ ತರಬೇತಿಯನ್ನು ನೀಡುತ್ತದೆ. ಈ ತರಬೇತಿಯ ಅವಧಿ 3 ತಿಂಗಳಾಗಿದ್ದು, ತರಬೇತಿಯು ವಿತ್ತೀಯ ತ್ರೈಮಾಸಿಕ ದ ಮೊದಲನೆಯ ದಿನದಂದು ಅಂದರೆ ಪ್ರತಿ ವರುಷ ಜನವರಿ, ಏಪ್ರಿಲ್, ಜುಲೈ ಹಾಗೂ ಅಕ್ಟೋಬರ್ ಒಂದರಂದು ಪ್ರಾರಂಭವಾಗುತ್ತದೆ.
ಶಿಕ್ಷಣಾರ್ಥಿಗಳಿಗೆ ನುರಿತ ಶಿಕ್ಷಕರಿಂದ ಉಚಿತ ಕಂಪ್ಯೂಟರ್ ಶಿಕ್ಷಣವನ್ನು ನೀಡುವುದರ ಜೊತೆಗೆ ಮಧ್ಯಾಹ್ನದ ಊಟದ ವ್ಯವಸ್ಥೆಯನ್ನು ಮಾಡಲಾಗಿದೆ. ಕಂಪ್ಯೂಟರ್ ಶಿಕ್ಷಣಕ್ಕೆ ಸಂಬಂದಿಸಿದ ಉಪಯುಕ್ತ ಪುಸ್ತಕಗಳ ಗ್ರಂಥಾಲಯವೂ ಇದೆ. ಇಂಗ್ಲೀಷ್ ಕಲಿಕೆ, ಯೋಗ ಹಾಗೂ ವ್ಯಕ್ತಿತ್ವ ವಿಕಸನದ ಬಗ್ಗೆ ವಿಶೇಷ ಉಪನ್ಯಾಸವನ್ನೂ ಏರ್ಪಡಿಸಲಾಗುವುದು.
ವಿದ್ಯಾರ್ಹತೆ ಎಸ್ ಎಸ್ ಎಲ್ ಸಿ ಪಾಸಾಗಿರಬೇಕು. ಪಿಯುಸಿ, ಡಿಗ್ರಿ, ಡಿಪ್ಲೊಮಾ ಮತ್ತು ಐಟಿಐ ಮಾಡಿದವರಿಗೆ ಆದ್ಯತೆಯನ್ನು ನೀಡಲಾಗುವುದು. ವಯೋಮಿತಿ 18 ರಿಂದ 27 ವರುಷದವರಾಗಿರಬೇಕು. ಪರಿಶಿಷ್ಠ ಜಾತಿ/ವರ್ಗದವರಿಗೆ ವಯಸ್ಸಿನ ಗರಿಷ್ಠ ಮಿತಿ 30 ಆಗಿರುತ್ತದೆ. ಬಿಪಿಎಲ್ ರೇಷನ್ ಕಾಡರ್ ಹೊಂದಿರಬೇಕು. ಲಿಖಿತ ಪರೀಕ್ಷೆ ಹಾಗೂ ಸಂದರ್ಶನಕ್ಕೆ ತಮ್ಮ ಸ್ವಂತ ವೆಚ್ಚದಲ್ಲಿ ಅಭ್ಯರ್ಥಿಗಳು ಪೋಷಕರೊಡನೆ ಹಾಜರಾಗಬೇಕು.
ಇದರ ಜೊತೆಗೆ ಸಂಸ್ಥೆಯು ಭಾರತ ಸರ್ಕಾರದ ಆಶಯದಂತೆ ಡಿಜಿಟಲೀಕರಣಕ್ಕೆ ಹೆಚ್ಚಿನ ಒಟ್ಟು ನೀಡಲು ಗೃಹಿಣಿಯರು, ಮಹಿಳಾ ಉದ್ಯಮಿಗಳು ಹಾಗೂ ಹಿರಿಯನಾಗರೀಕರಿಗೆ ಕಂಪ್ಯೂಟರ್ ಬಗ್ಗೆ ಅರಿವು ವನ್ನು ಮೂಡಿಸಲು ಒಂದು ತಿಂಗಳ ಕಂಪ್ಯೂಟರ್ ಕಲಿಕಾ ಶಿಬಿರವನ್ನು ಆಯೋಜಿಸಲಾಗುತ್ತಿದೆ. ಈ ಯೋಜನೆಯಡಿ ಇದುವರೆಗೆ 150 ಕ್ಕೂ ಹೆಚ್ಚು ಮಂದಿ ಕಂಪ್ಯೂಟರ್ ಶಿಕ್ಷಣವನ್ನು ಪಡೆದಿದ್ದಾರೆ ಎಂದು ಸಂಸ್ಥೆ ತಿಳಿಸಿದೆ.
Discussion about this post