ಕಲ್ಪ ಮೀಡಿಯಾ ಹೌಸ್ | ಹುಬ್ಬಳ್ಳಿ |
ಇಂದಿನಿಂದ ಆರಂಭವಾಗಿರುವ ರಾಜ್ಯ ಸರ್ಕಾರಿ ಬಸ್ ಪ್ರಯಾಣ ದರದ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂಬ ಅಚ್ಚರಿಯ ಹೇಳಿಕೆಯನ್ನು ಕಾರ್ಮಿಕ ಸಚಿವ ಸಂತೋಷ್ ಲಾಡ್ #SantoshLad ನೀಡಿದ್ದಾರೆ.
ಈ ಕುರಿತಂತೆ ಮಾಧ್ಯಮಗಳಿಗೆ ಮಾತನಾಡಿರುವ ಸಂತೋಷ್ ಲಾಡ್, ರಾಜ್ಯದಲ್ಲಿ ಸಾರಿಗೆ ಬಸ್ ಪ್ರಯಾಣ ದರ ಏರಿಕೆಗೆ ಕೇಂದ್ರ ಸರ್ಕಾರವೇ ಕಾರಣ ಎಂದಿದ್ದಾರೆ.
ಬಿಜೆಪಿಯವರು #BJP ದರ ಏರಿಕೆ ಬಗ್ಗೆ ಮಾತನಾಡುತ್ತಿದ್ದಾರೆ. ಚರ್ಚೆಗೆ ಬಂದರೆ ಮಾತನಾಡೋಣ. ಕೇಂದ್ರ ಸರ್ಕಾರ ಮನಸ್ಸು ಮಾಡಿದರೆ ಡೀಸೆಲ್ ಅನ್ನು 30 ರಿಂದ 40 ರೂಪಾಯಿಗೆ ಕೊಡಬಹುದು ಎಂದಿದ್ದಾರೆ.
ಮನಮೋಹನ ಸಿಂಗ್ ಅವರು 103 ಡಾಲರ್’ಗೆ 1 ಬ್ಯಾರಲ್ ಖರೀದಿ ಮಾಡುತ್ತಿದ್ದರು. 90 ಸಾವಿರ ಕೋಟಿ ಸಬ್ಸಿಡಿ ಕೊಡುತ್ತಿದ್ದರು. ಡಿಸೇಲ್-ಪೆಟ್ರೋಲ್ ದರ ಜಾಸ್ತಿಯಾದಾಗ ಎಲ್ಲ ವಸ್ತುಗಳು ದುಬಾರಿಯಾಗುತ್ತವೆ. ಸಾಗಾಟ ವೆಚ್ಚ ಜಾಸ್ತಿಯಾದಾಗ ಜನಸಾಮಾನ್ಯರ ಮೇಲೆ ಅದರ ಪರಿಣಾಮ ಆಗುತ್ತದೆ ಎಂದರು.
ಎಲ್ಲದಕ್ಕೂ ಪ್ರತಿಭಟನೆ ಮಾಡುವ ಬಿಜೆಪಿಯವರು ಜಿಎಸ್’ಟಿಗಾಗಿ ಯಾಕೆ ಪ್ರತಿಭಟನೆ ಮಾಡುತ್ತಿಲ್ಲ? ನಿರ್ಮಲಾ ಸೀತಾರಾಮನ್ ಮೈ ಪ್ಯಾಜ್ ನಹಿ ಕಾತಿ ಹೂ ಎಂದರು. ಕೇಂದ್ರ ಹಣಕಾಸು ಸಚಿವರು ಹೀಗೆ ಹೇಳಬಹುದೇ..? ಬಿಜೆಪಿ ದೇಶವನ್ನು ಕೊಳ್ಳೆ ಹೊಡೆಯುತ್ತಿದೆ ಎಂದು ಆರೋಪಿಸಿದರು.
ಇನ್ನು, ರಾಜ್ಯದಲ್ಲಿ ಪ್ರತಿನಿತ್ಯ 1.16 ಕೋಟಿ ಮಂದಿ ಬಸ್’ನಲ್ಲಿ ಪ್ರಯಾಣಿಸುತ್ತಾರೆ. 5,300 ಹೊಸ ಬಸ್’ಗಳನ್ನು ಖರೀದಿ ಮಾಡಿದ್ದೇವೆ. ಅಲ್ಲದೇ, 8000 ಹೊಸ ಸಿಬ್ಬಂದಿಗಳ ನೇಮಕವೂ ಸಹ ನಡೆಯಲಿದ್ದು, ಇದಕ್ಕೆ ಹಣಕಾಸು ಇಲಾಖೆ ಅನುಮತಿ ನೀಡಿದೆ. ಹೀಗಾಗಿ, ಪ್ರಯಾಣ ದರ ಏರಿಕೆ ಮಾಡುವುದು ರಾಜ್ಯ ಸರ್ಕಾರಕ್ಕೆ ಅನಿವಾರ್ಯವಾಗಿತ್ತು ಎಂದು ದರ ಏರಿಕೆಯನ್ನು ಸಮರ್ಥನೆ ಮಾಡಿಕೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news



















