ಚಳ್ಳಕೆರೆ: ತಾಲೂಕಿನ ತಮ್ಮಣ್ಣ ನಾಯಕನ ಕೋಟೆ ಗ್ರಾಮದಲ್ಲಿ ನಿರ್ಮಿಸಲಾದ ನೂತನ ದೇವಾಲಯದಲ್ಲಿ ಗಣಪತಿ, ಈಶ್ವರ ಲಿಂಗ ಹಾಗೂ ನಂದಿ ದೇವರ ಪ್ರಾಣ ಪ್ರತಿಷ್ಠಾಪನಾ ಮಹೋತ್ಸವ ವಿಧಿವತ್ತಾಗಿ ಹಾಗೂ ಅದ್ದೂರಿಯಾಗಿ ನೆರವೇರಿತು.
ಶುಕ್ರವಾರ ಬೆಳಗಿನ ಜಾವ ಶ್ರೀ ಕ್ಷೇತ್ರ ಸಿದ್ಧರಬೆಟ್ಟ ಶ್ರೀ ಬಾಳೆಹೊನ್ನೂರು ಖಾಸಾ ಶಾಖಾಮಠದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿಯವರ ದಿವ್ಯಸಾನ್ನಿಧ್ಯದಲ್ಲಿ ಬ್ರಾಹ್ಮಿ ಮುಹೂರ್ತದಲ್ಲಿ ವಿಘ್ನೇಶ್ವರ, ಈಶ್ವರ ಲಿಂಗ ಮತ್ತು ನಂದಿ ಪ್ರತಿಮೆಗಳ ಪ್ರತಿಷ್ಠಾಪನೆ ನೆರವೇರಿತು.

ಇಂದು ಬೆಳಗಿನ ಜಾವ ಬ್ರಾಹ್ಮಿ ಮುಹೂರ್ತದಲ್ಲಿ ವಿಘ್ನೇಶ್ವರ, ಈಶ್ವರ ಲಿಂಗ ಮತ್ತು ನಂದಿ ಪ್ರತಿಮೆಗಳ ಪ್ರತಿಷ್ಠಾಪನೆ ನೆರವೇರಿಸಲಾಯಿತು. ನಂತರ ರುದ್ರಾಭಿಷೇಕ ಅಲಂಕಾರ ಅಷ್ಟೋತ್ತರ ನಾಮಾವಳಿ ಕಾರ್ಯಕ್ರಮಗಳು ನಡೆಯಿತು.
ಸ್ವಾಮೀಜಿಯವರ ಅಮೃತಹಸ್ತದಿಂದ ಪೂರ್ಣಾಹುತಿ ನೇತ್ರೋನ್ಮಿಲನ ಪ್ರಾಣ ಪ್ರತಿಷ್ಠಾಪನೆ, ಕಳಶ ಪ್ರತಿಷ್ಠಾಪನೆ ನಂತರ ಮಹಾಮಂಗಳಾರತಿ ನಡೆಯಿತು.

ನೆರೆದಿದ್ದ ಭಕ್ತ ಸಮೂಹಕ್ಕೆ ದೇವಸ್ಥಾನ ಸಮಿತಿಯವರು ಭಕ್ತರಿಗೆ ಪ್ರಸಾದ ವಿನಿಯೋಗ ಮಾಡಿದರು. ಸುತ್ತಲಿನ ಏಳು ಹಳ್ಳಿಗಳ ಭಕ್ತರು ಶುಕ್ರವಾರ ನೂತನ ದೇವಸ್ಥಾನದ ಪ್ರದಕ್ಷಿಣೆ, ಹಣ್ಣು, ಕಾಯಿ, ಕರ್ಪೂರ, ಧನ, ಕನಕಗಳೊಂದಿಗೆ ದೇವರ ದರ್ಶನ ಪಡೆದರು.
ಇದೇ ವೇಳೆ ಶಿವಾಲಯ ದೇವಸ್ಥಾನ ನಿರ್ಮಾಣಕ್ಕೆ ಸಹಕರಿಸಿದ ದಾನಿಗಳಿಗೆ ಗೌರವಿಸಿದರು. ಉತ್ಸವದಲ್ಲಿ ಪಾಲ್ಗೊಂಡ ಎಲ್ಲರಿಗೂ ಅನ್ನ ಸಂತರ್ಪಣೆ ಏರ್ಪಡಿಸಲಾಗಿತ್ತು.

ಈ ಸಂದರ್ಭದಲ್ಲಿ ಟಿಎನ್ ಕೋಟೆಯ ಎಲ್ಲಾ ಸಂಘ-ಸಂಸ್ಥೆಗಳ ಪದಾಧಿಕಾರಿಗಳು, ಮೇಲುಕೋಟೆ, ಬಸವೇಶ್ವರ ಗೊಲ್ಲರ ಹಟ್ಟಿ, ಕೋಟೆ ಓಬಳಾಪುರ ಸುತ್ತಮುತ್ತಲಿನ ಗ್ರಾಮಸ್ಥರು ದೇವಸ್ಥಾನ ಸಮಿತಿಯವರು ಗ್ರಾಮಸ್ಥರು ಉಪಸ್ಥಿತರಿದ್ದರು.
(ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ)

















