ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ತಾಲ್ಲೂಕು ಕಚೇರಿ ಮುಖ್ಯ ದ್ವಾರದಲ್ಲಿ ಸಾರ್ವಜನಿಕರಿಗೆ ಕೊರೋನಾ ಲಸಿಕೆ ವಿತರಣೆ ಹಾಗೂ ಮಾಸ್ಕ್ ಧರಿಸುವಂತೆ ಕಚೇರಿ ಸಿಬ್ಬಂದಿಗಳಿಂದ ಜಾಗೃತಿ ಮೂಡಿಸಲಾಯಿರು.

ಕೊರೋನಾ 3ನೇ ಅಲೆಯು ಅಪಾಯಕಾರಿಯಾಗಿದೆ ಎಂದು ತಜ್ಞರು ಮುನ್ಸೂಚನೆ ನೀಡಿರುವುದರಿಂದ ಸೋಂಕಿಗೆ ಬ್ರೇಕ್ ಹಾಕುವ ಸಲುವಾಗಿ ಮುನ್ನೆಚ್ಚರಿಕೆ ವಹಿಸಿ, ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಲು ತಾಲೂಕು ಆಡಳಿತ ಮುಂದಾಗಿದೆ.


ಸಾರ್ವಜನಿಕರ ಹಿತ ದೃಷ್ಠಿಯಿಂದ ವಾಕ್ಸಿನ್ ಮುಕ್ತ ತಾಲೂಕು ಮಾಡುವಲ್ಲಿ ಪಣತೊಟ್ಟಿರುವ ತಹಶೀಲ್ದಾರ್ ಎನ್. ರಘುಮೂರ್ತಿ ಲಸಿಕೆ ಪಡೆದವರಿಗೆ ಮಾತ್ರ ಕಚೇರಿಗೆ ಪ್ರವೇಶ ಎಂದು ಎಚ್ಚರಿಕೆ ನೀಡಿದ್ದಾರೆ.
ಹೌದು… ಗ್ರಾಮೀಣ ಭಾಗದ ಜನರು ತಾಲೂಕು ದಂಡಾಧಿಕಾರಿಗಳನ್ನು ಕಾಣಲು ಬರುವ ಮುನ್ನ ಲಸಿಕೆ ಪಡೆದಿರಬೇಕು. ಒಂದು ವೇಳೆ ಹಾಕಿಸಿಕೊಳ್ಳದಿದ್ದಲ್ಲಿ ಕಚೇರಿಯ ಮುಖ್ಯ ದ್ವಾರದರಲ್ಲಿ ಲಸಿಕೆ ಪಡೆದು ಕಚೇರಿ ಒಳಗೆ ಬರಬೇಕು ಎಂದು ತಾಖೀತು ಮಾಡಿದ್ದಾರೆ.


ಕಂದಾಯ ಅಧಿಕಾರಿ ಲಿಂಗೇಗೌಡ ಮಾತನಾಡಿ, ಹೆಚ್ಚಿನ ಸಂಖ್ಯೆಯ ಜನರು ಮಾಸ್ಕ್ ಧರಿಸದೆ ಕಚೇರಿಗೆ ಬರುತ್ತಾರೆ. ಆದ್ದರಿಂದ ತಹಶೀಲ್ದಾರ್ ಅವರು ಮಾಸ್ಕ್ ಧರಿಸದೆ ಕಚೇರಿಗೆ ಬರುವವರಿಗೆ ಮಾಸ್ಕ್ ಧರಿಸುವಂತೆ ಜಾಗೃತಿ ಮೂಡಿಸಲು ನಿರ್ದೇಶನ ನೀಡಿದ್ದಾರೆ. ಈ ಹಿನ್ನೆಲೆಯಿಂದ ಎಲ್ಲರೂ ಮಾಸ್ಕ್ ಧರಿಸಿ ಕಚೇರಿಗೆ ಬರಬೇಕು. ಇನ್ನು ಲಸಿಕೆ ಪಡೆಯದವರು ಕಚೇರಿಯ ಮುಖ್ಯದ್ವಾರದಲ್ಲಿಯೇ ಲಸಿಕೆ ಪಡೆಯುವಂತೆ ವ್ಯವಸ್ಥೆ ಮಾಡಲಾಗಿದೆ ಎಂದು ತಿಳಿಸಿದರು.


ತಾಲೂಕಿನಲ್ಲಿ ಲಸಿಕೆ ಪ್ರಮಾಣವನ್ನು ಹೆಚ್ಚಿಸುವ ಸಲುವಾಗಿ ಇಂದು ತಾಲೂಕು ಕಚೇರಿ ಆವರಣದಲ್ಲಿ ಆರೋಗ್ಯ ಸಿಬ್ಬಂದಿಗಳು ಲಸಿಕೆ ನೀಡುತ್ತಾರೆ. ಎಲ್ಲರೂ ಲಸಿಕೆ ಪಡೆದುಕೊಳ್ಳಬೇಕು ಎಂದು ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

ಈ ಸಂದರ್ಭದಲ್ಲಿ ಕಚೇರಿ ಆಗಮಿಸಿದ ಹಲವರು ಕೊರೋನಾ ಲಸಿಕೆ ಪಡೆದುಕೊಂಡರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news

















