ಕಲ್ಪ ಮೀಡಿಯಾ ಹೌಸ್ | ಚಳ್ಳಕೆರೆ |
ರಾಜ್ಯದ ಪ್ರಸಿದ್ದ ಜಾತ್ರೆಗಳಲ್ಲಿ ತಾಲ್ಲೂಕಿನ ಗೌರಸಮುದ್ರ ಗ್ರಾಮದ ಶ್ರೀಮಾರಮ್ಮ ದೇವಿ ಜಾತ್ರೆಯೂ ಸಹ ಒಂದಾಗಿದೆ. ಪ್ರತಿವರ್ಷದಂತೆ ಲಕ್ಷಾಂತರ ಸಂಖ್ಯೆಯಲ್ಲಿ ಭಕ್ತರು ಜಾತ್ರೆಗೆ ಆಗಮಿಸಿ ದೇವಿಯ ದರ್ಶನ ಪಡೆದರು.
ಕಳೆದ ನೂರಾರು ವರ್ಷಗಳಿಂದ ಜಾನಪದ ಸಂಸ್ಕೃತಿ ಹಾದಿಯಲ್ಲಿಯೇ ಈ ಜಾತ್ರೆ ನಡೆದುಕೊಂಡು ಬರುತ್ತಿದ್ದು, ಇಂತಹ ಆಧುನಿಕ ಕಾಲದಲ್ಲೂ ಸಹ ಸಾವಿರಾರು ಭಕ್ತರು ಎತ್ತಿನ ಗಾಡಿಗಳಲ್ಲಿ ಆಗಮಿಸಿ ದೇವಿಯ ದರ್ಶನ ಪಡೆಯುವುದು ವಿಶೇಷ.
ಪ್ರತಿವರ್ಷವೂ ಸಹ ಈ ಜಾತ್ರೆಗೆ ಆಗಮಿಸುವ ಭಕ್ತರ ಸಂಖ್ಯೆ ನಿರಂತರವಾಗಿ ಹೆಚ್ಚುತ್ತಿದ್ದು, ಭಕ್ತರಿಗೆ ಎಲ್ಲಾ ರೀತಿಯ ಸೌಲಭ್ಯಗಳನ್ನು ಒದಗಿಸುವಲ್ಲಿ ಜಿಲ್ಲಾ ಆಡಳಿತ ಮುಂದಾಗಿದೆ.
ಭಕ್ತರಿಗೆ ಸಂಚಾರ ವ್ಯವಸ್ಥೆ, ದೇವಿಯ ದರ್ಶನ ವ್ಯವಸ್ಥೆ, ಕಳ್ಳಕಾಕರಿಂದ ರಕ್ಷಣೆ, ಉತ್ತಮ ಭದ್ರತೆ, ಯಾವುದೇ ರೀತಿಯ ಅಡಚಣೆ ಇಲ್ಲದೆ ದೇವಿಯ ದರ್ಶನದ ಜೊತೆಗೆ ತುಮಲಕ್ಕೆ ಭೇಟಿ ನೀಡುವುದು ಸಹ ವಾಡಿಕೆಯಾಗಿದೆ. ಈ ಹಿನ್ನೆಲೆಯಲ್ಲಿ ಈ ವರ್ಷ ಪೊಲೀಸ್ ಇಲಾಖೆ ಭಕ್ತರ ನಿರೀಕ್ಷೆಗೂ ಮೀರಿ ಹೆಚ್ಚಿನ ಸೌಕರ್ಯಗಳನ್ನು ಕಲ್ಪಿಸಿದೆ.
ಸೆ.18ರಿಂದ 30ರವರೆಗೂ ಜಾತ್ರೆ ನಡೆಯಲಿದ್ದು, ಇದರ ನಿಮಿತ್ತ ಮಂಗಳವಾರ ವಿಶೇಷವಾದ ದೇವಿಯ ಭವ್ಯ ಅಲಕೃತ ಮೆರವಣಿಗೆ, ಪದ್ಧತಿಯಂತೆ ಗ್ರಾಮದ ದೇವಸ್ಥಾನದಿಂದ ಬರುವ ದೇವಿ ಊರ ಹೊರಗಿನ ತುಮಲದಲ್ಲಿ ಪ್ರತಿಷ್ಠಾಪನೆ ಮಾಡಿ, ಅಲ್ಲಿ ಪೂಜಾರರು ಕಂಬ ಹತ್ತಿ ದೀಪ ಹಚ್ಚುವ ಮೂಲಕ ಜಾತ್ರೆಗೆ ಪ್ರಾರಂಭವಾಯಿತು.
ಈ ಬಾರಿ ವಿಶೇಷವಾಗಿ ಜಾತ್ರೆಗೆ ಬರುವ ಭಕ್ತರು ತಮ್ಮ ಜಾನುವಾರಗಳನ್ನು ಸಹ ದೇವಿಯ ದರ್ಶನಕ್ಕೆ ಕರೆತರುವ ಪದ್ದತಿ ಇದ್ದು, ಅವುಗಳಿಗಾಗಿ ಪ್ರತ್ಯೇಕ ಬ್ಯಾರಿಕೇಡ್ ನಿರ್ಮಿಸಿ ಯಾವುದೇ ತೊಂದರೆಯಾಗದಂತೆ ಜಾಗೃತೆ ವಹಿಸಿದ್ದರು.
ಒಂದು ವಾರದಿಂದ ಜಾತ್ರೆಗೆ ಬರುವ ಭಕ್ತಾಧಿಗಳ ಸಹಾಯಕ್ಕಾಗಿ ಅನೇಕ ಮಾದರಿ ಕಾರ್ಯಕ್ರಮಗಳನ್ನು ರೂಪಿಸಿದ್ದಾರೆ. ವಿಶೇಷವಾಗಿ ಈ ಬಾರಿ ಗ್ರಾಮದ ಶ್ರೀಮಾರಮ್ಮ ದೇವಸ್ಥಾನ, ತುಮಲು ಪ್ರದೇಶದಲ್ಲಿ ಹಾಗೂ ಸುತ್ತಮುತ್ತ ಪೊಲೀಸ್ ಇಲಾಖೆ ಸಿಸಿ ಕ್ಯಾಮರಾವನ್ನು ಅಳವಡಿಸಿದೆ. ಇದು ಕಳೆದ ಬಾರಿಗಿಂತ ಈ ಬಾರಿ ಹೆಚ್ಚಿನ ಸಂಖ್ಯೆಯಲ್ಲಿ ಅಳಡಿಸಲಾಗಿದೆ. ವಾಹನ ಸಂಚಾರಕ್ಕೆ ಯಾವುದೇ ಅಡ್ಡಿ ಉಂಟಾಗದಂತೆ ರಸ್ತೆಗಳ ಎರಡೂ ಬದಿಯನ್ನು ವಿಸ್ತರಣೆ ಮಾಡಲಾಗಿದೆ.
ದೇವಸ್ಥಾನಕ್ಕೆ ಬರುವ ವಾಹನಗಳನ್ನು ಸ್ವಲ್ಪ ದೂರದಲ್ಲೇ ತಡೆದು ನೇರವಾಗಿ ತುಮುಲು ಪ್ರದೇಶಕ್ಕೆ ವಿಶೇಷವಾಗಿ ರಸ್ತೆ ವ್ಯವಸ್ಥೆ ಮಾಡಲಾಗಿದೆ. ಬಸ್ ನಿಲ್ದಾಣವನ್ನು ಪ್ರತ್ಯೇಕವಾಗಿ ನಿರ್ಮಿಸಲಾಗಿದೆ. ಎಲ್ಲೆಡೆ ವಿವಿಧ ಕಾರ್ಯಕ್ರಮಗಳ ಮಾಹಿತಿ ಪಡೆಯಲು ಪೊಲೀಸ್ ಇಲಾಖೆ ಪತ್ಯೇಕ ನಾಮಪಲಕ ಅಳವಡಿಸಿದೆ. ವಿಶೇಷವಾಗಿ ಆರು ಕಡೆ ಸಹಾಯ ವಾಣಿ ಕೇಂದ್ರವನ್ನು ಸ್ಥಾಪಿಸಿದ್ದು, ಐದು ಕಡೆ ಚೆಕ್ ಪೋಸ್ಟ್ಗಳನ್ನು ನಿರ್ಮಿಸಲಾಗಿದೆ. ತುಮಲ ಪ್ರದೇಶದ ಒಳ ಆವರಣದಲ್ಲೇ ವಾರ್ಟವರ್ ನಿರ್ಮಿಸಿ ಜಾತ್ರೆ ನಡೆಯುವ ಬಗ್ಗೆ ನಿಗಾವಹಿಸಲಾಗುವುದು.
ವಿಶೇಷವಾಗಿ ಸರಗಳ್ಳತನ, ಇತರೆ ಸಣ್ಣ ಪುಟ್ಟ ಕಳ್ಳತನ ನಿಯಂತ್ರಿಸಲು ಸುತ್ತಮುತ್ತಲ ಪ್ರದೇಶದಿಂದಲೂ ಸಹ ನುರಿತ ಪೊಲೀಸ್ ತಂಡವನ್ನು ನಿಯೋಜಿಸಲಾಗಿತ್ತು.
ಜಾತ್ರಗೆ ಬಂದೋಬಸ್ತ್ :
ಈ ಬಾರಿಯ ಜಾತ್ರೆಯ ಬಂದೋಬಸ್ತನ್ನು ವಿಶೇಷವಾಗಿ ನಿಯೋಜಿಲಾಗಿದ್ದು, 100 ಪೋಲೀಸ್ ಅಧಿಕಾರಿಗಳು 800 ಪೊಲೀಸ್ ಪೇದೆ, 1 ಕೆಎಸ್ಆರ್ಪಿ, 5 ಡಿಆರ್ ವ್ಯಾನ್, ಮಹಿಳಾ ಪೊಲೀಸ್ ಪೇದೆ, 200 ಗೃಹ ರಕ್ಷಕ ದಳ ಸಿಬ್ಬಂದಿ, ಕೆಎಸ್ಆರ್ಪಿ ತುಕಡಿಯನ್ನು ಜಾತ್ರೆಗೆ ನಿಯೋಜಿಸಲಾಗಿದೆ.
ಜಾತ್ರೆಗೆ ಸಾರಿಗೆ ಸಚಿವ ಬಿ ಶ್ರೀರಾಮುಲು, ಚಳ್ಳಕೆರೆ ಶಾಸಕ ಟಿ. ರಘುಮೂರ್ತಿ, ಎಂಎಲ್ಸಿ ನವೀನ್, ಜಿಲ್ಲಾಧಿಕಾರಿ ಕವಿತಾ ಎಸ್ ಮನ್ನಿಕೇರಿ, ತಹಶೀಲ್ದರ್ ಎನ್. ರಘುಮೂರ್ತಿ ಹಾಗೂ ಜನಪ್ರತಿನಿಧಿಗಳು ವಿವಿಧ ಪಕ್ಷದ ಮುಖಂಡರುಗಳು ಹಾಗೂ ಸುತ್ತಮುತ್ತಲಿನ ಭಕ್ತರು ಜಾತ್ರೆಗೆ ಆಗಮಿಸಿ ತಾಯಿಯ ಆಶೀರ್ವಾದ ಪಡೆದರು. ಜಾತ್ರೆಯಲ್ಲಿ ಪ್ರಾಣಿ ಬಲಿ ನಿಷೇಧವಿದ್ದ ಕಾರಣ ತುಮಲಿನಿಂದ ಮೂರು ಕಿಲೋಮೀಟರ್ ದೂರದಲ್ಲಿ ಅಡಿಗೆ ಮಾಡಿ ಸ್ವೀಕರಿಸಿದರು.
ವರದಿ: ಸುರೇಶ್ ಬೆಳಗೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post