ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ತಾಲೂಕಿನ ಹಲವು ಕಡೆ ರೈತರ ಈರುಳ್ಳಿ ಬೆಳೆಗೆ ಕೊಳೆರೋಗ ಕಾಣಿಸಿಕೊಂಡಿರುವುದರಿಂದ ತೋಟಗಾರಿಕೆ ಇಲಾಖೆಯ ಅಧಿಕಾರಿಗಳೊಂದಿಗೆ ಬಬ್ಬೂರು ಕೃಷಿ ಫಾರ್ಂನ ಕೃಷಿ ವಿಜ್ಞಾನಿ ಡಾ. ಎಸ್. ಓಂಕಾರಪ್ಪ ನನ್ನಿವಾಳ, ರಾಮಜೋಗಿಹಳ್ಳಿ, ಬಾಲೇನಹಳ್ಳಿ ರೈತರ ಜಮೀನಿಗಳಿಗೆ ಭೇಟಿ ನೀಡಿ ಈರುಳ್ಳಿ ಬೆಳೆ ಪರಿಶೀಲನೆ ಮಾಡಿದರು.
ನಂತರ ಮಾತನಾಡಿದ ಅವರು, ಈರುಳ್ಳಿ ಬೆಳೆಗೆ ಹೆಚ್ಚು ರಸಗೊಬ್ಬರ ಬಳಕೆ ಮಾಡುವುದರಿಂದ ಕೊಳೆರೋಗ ಕಾಣಿಸಿಕೊಳ್ಳುತ್ತದೆ. ಈರುಳ್ಳಿ ಪೈರು ಪೌಷ್ಠಿಕವಾಗಿ ಬೆಳೆಯಲು ಎಂದು ಔಷಧಿಗಳನ್ನು ಸಿಂಪಡಣೆ ಮಾಡುವುದರಿಂದ ಕೂಡ ಈರುಳ್ಳಿ ಪೈರಿನ ತುದಿಯು ಬಿಳಿಬಣ್ಣಕ್ಕೆ ತಿರುಗಿ ಕೊಳೆಯುತ್ತದೆ. ಆದ್ದರಿಂದ ಯಾವುದೇ ಔಷದಿಗಳನ್ನು ಈರುಳ್ಳಿ ಬೆಳೆಗೆ ಸಿಂಪಡಿಸಬಾರದು ಎಂದು ರೈತರಿಗೆ ಮಾಹಿತಿ ನೀಡಿದರು.
ರೈತರು ಇತ್ತೀಚೆಗೆ ರಾಸಾಯನಿಕ ಗೊಬ್ಬರಗಳನ್ನು ಹೆಚ್ಚಿನದಾಗಿ ಬಳಸುತ್ತಿದ್ದಾರೆ. ಆದ್ದರಿಂದ ಕೊಟ್ಟಿಗೆ ಗೊಬ್ಬರವನ್ನು ಹೆಚ್ಚಿನದಾಗಿ ಈರುಳ್ಳಿ ಬೆಳೆ ಬಳಸಬೇಕು. ಈರುಳ್ಳಿ ಬೆಳೆಗೆ ಯಾವುದೇ ರೋಗ ಕಾಣಿಸಿಕೊಂಡಾಗ ತೋಟಗಾರಿಕೆ ಇಲಾಖೆಯ ಅಧಿಕಾರಿಗಳ ಸಲಹೆ ಪಡೆದು ಅವರು ತಿಳಿಸಿದ ಔಷಧಿಗಳನ್ನು ಸಿಂಪಡಣೆ ಮಾಡಬೇಕು ಎಂದು ಸಲಹೆ ನೀಡಿದರು.
ಇನ್ನು ಖಾಸಗಿ ಅಂಗಡಿಗಳಲ್ಲಿ ಈರುಳ್ಳಿ ಬೆಳೆಗಳಿಗೆ ಸಿಕ್ಕ-ಸಿಕ್ಕ ಔಷಧಿಗಳನ್ನು ನೀಡುತ್ತಾರೆ. ಅಂತಹ ಔಷಧಿಗಳನ್ನು ಈರುಳ್ಳಿ ಬೆಳೆಗಳಿಗೆ ಸಿಂಪಡಣೆ ಮಾಡಬಾರದು ಯಾವುದೇ ಔಷಧಿಗಳನ್ನು ಸಿಂಪಡಣೆ ಮಾಡಬೇಕಾದರೆ ತೋಟಗಾರಿಕೆ ಇಲಾಖೆ ಅಧಿಕಾರಿಗಳ ಗಮನಕ್ಕೆ ತಂದು ಸಿಂಪಡಣೆ ಮಾಡಬೇಕು ಎಂದು ತಿಳಿಸಿದರು.
ತಾಲೂಕಿನಾದ್ಯಂತ ರೈತರು ಈರುಳ್ಳಿ ಬೆಳೆಗಳಿಗೆ ಕೊಳೆರೋಗ ಪತ್ತೆಯಾಗಿದೆ. ಆದ್ದರಿಂದ ತಾಲೂಕಿನ ಹಲವು ಕಡೆಗೆ ಇಂದಿನಿಂದ ರೈತರ ಹೊಲಗಳಿಗೆ ಭೇಟಿ ನೀಡಿ, ಈರುಳ್ಳಿ ಬೆಳೆ ಪರಿಶೀಲನೆ ಮಾಡಲಾಗುವುದು.
-ವಿರೂಪಾಕ್ಷಪ್ಪ, ಸಹಾಯಕ ನಿರ್ದೇಶಕರು, ತೋಟಗಾರಿಕೆ ಇಲಾಖೆ.
ಈ ವೇಳೆ ತೋಟಗಾರಿಕೆ ಅಧಿಕಾರಿಗಳಾದ ಪ್ರವೀಣ್ ಕುಮಾರ್, ಅಜಯ್, ರೈತರಾದ ಪ್ರಶಾಂತ್, ಲಕ್ಷ್ಮಣ್, ದೇವರಾಜ್ ರೆಡ್ಡಿ, ಆಶೋಕ್, ಸಿದ್ದೇಶ್ ಸೇರಿದಂತೆ ಮುಂತಾದವರು ಇದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post