ಕಲ್ಪ ಮೀಡಿಯಾ ಹೌಸ್
ಚಳ್ಳಕೆರೆ: ಎ.14 ರಿಂದ ಚಳ್ಳಕೆರೆ ವೇದಾವತಿ ನದಿ ಪಾತ್ರಕ್ಕೆ ವಾಣಿವಿಲಾಸ ಸಾಗರದಿಂದ ನೀರು ಬೀಡಲಾಗುತ್ತಿರುವ ವಿಷಯ ಕೇಳಿದ ಈ ಭಾಗದ ಜನರಲ್ಲಿ ಸಂತೋಷ ಮೂಡಿದೆ ಎಂದು ಶಾಸಕ ಟಿ. ರಘುಮೂರ್ತಿ ಹೇಳಿದರು.
ಈ ಕುರಿತಂತೆ ಮಾತನಾಡಿದ ಅವರು, ಪ್ರಾದೇಶಿಕ ಆಯುಕ್ತರ ಕಾರ್ಯಾಲಯದಲ್ಲಿ ಸಭೆ ನಡೆಸಿ ಚಳ್ಳಕೆರೆ ವಿಧಾನಸಭಾ ಕ್ಷೇತ್ರ ವ್ಯಾಪ್ತಿಗೆ ಕುಡಿಯುವ ನೀರು ಒದಗಿಸಲು ಪ್ರಾದೇಶಿಕ ಆಯುಕ್ತರು ನಿರ್ದೇಶನ ನೀಡಿದ್ಧಾರೆ ಎಂದು ತಿಳಿಸಿದರು.
ಮಾರ್ಚ್ 24ರಂದು ಪ್ರಾದೇಶಿಕ ಆಯುಕ್ತರ ಸಭೆ ನಡೆದಿದ್ದು, ಹಿರಿಯೂರಿನ ವಾಣಿವಿಲಾಸ ಸಾಗರದಿಂದ ಈಗ ಸಂಗ್ರಹವಿರುವ ನೀರಿನ ಪ್ರಮಾಣವನ್ನು ಆಧರಿಸಿ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳು ಸೌಹಾರ್ಧಯುತವಾಗಿ ಚರ್ಚೆ ನಡೆಸಿ ಕುಡಿಯುವ ನೀರಿಗೆ ತೊಂದರೆಯಾಗದಂತೆ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದಾರೆ. ಅದರಂತೆ ಅಧೀಕ್ಷಕ ಇಂಜಿನಿಯರ್ಗೆ ನೀರು ಬಿಡಲು ಆದೇಶ ನೀಡಿದ್ದಾರೆ ಎಂದು ತಿಳಿಸಿದರು.
ಎ.14 ರಂದು ವಿವಿ ಸಾಗರದಲ್ಲಿರುವ ನೀರನ್ನು ವೇದಾವತಿ ನದಿ ಪಾತ್ರದ ಮೂಲಕ ಚಳ್ಳಕೆರೆ ಮತ್ತು ಮೊಳಕಾಲ್ಮೂರು ಕ್ಷೇತ್ರಗಳಿಗೆ ಸುಮಾರು 325 ಕ್ಯೂಸೆಕ್ಸ್ ನೀರು ಬಿಡಲಿದ್ದು ಇದನ್ನು ಕೇವಲ ಜನರು ಮತ್ತು ಜಾನುವಾರುಗಳು ಕುಡಿಯಲು ಮಾತ್ರ ಉಪಯೋಗಿಸಬೇಕಿದೆ. ಯಾವುದೇ ಕಾರಣಕ್ಕೂ ಕೃಷಿ ಚಟುವಟಿಕೆಗಳಿಗೆ ಈ ನೀರು ಬಳಸದಂತೆ ಪ್ರದೇಶಿಕ ಆಯುಕ್ತರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ ಎಂದರು.
ಎರಡನೆಯ ಹಂತದ ನೀರು ಬಿಡುವ ಕಾರ್ಯ ಮೇ 5 ರಿಂದ ಪ್ರಾರಂಭವಾಗಲಿದ್ದು ಹಿರಿಯೂರು, ಚಳ್ಳಕೆರೆ ಮತ್ತು ಮೊಳಕಾಲ್ಮೂರು ಕ್ಷೇತ್ರಗಳಿಗೆ ಸುಮಾರು 650 ಕ್ಯೂಸೆಕ್ಸ್ ನೀರು ಹರಿಯಲಿದ್ದು ನಂತರ ಮೇ 25 ರಂದು ಸಭೆ ನಡೆಸಿ ಮುಂದಿನ ತಿರ್ಮಾನ ಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.
ವರದಿ: ಸುರೇಶ್ ಬೆಳಗೆರೆ, ಚಳ್ಳಕೆರೆ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news
Discussion about this post