ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಪಂಚಭೂತಗಳ ಆರಾಧನೆ, ಅನುಸರಣೆಯ ಮೂಲಕ ಬೆಳೆಯುತ್ತಿರುವ ನಾವು ಪೃಕೃತಿಯ ಜೊತೆಗೆ ಒಂದಾಗಿ ಸಮುದಾಯವನ್ನು ಬೆಳೆಸುವ ಸಂಕಲ್ಪ ತೊಡಬೇಕು ಎಂದು ಯೋಗಿ ನಿವೃತ್ತಿನಾಥ್ಜಿ ಹೇಳಿದರು.
ಜೋಗಿ ಸಮುದಾಯದವರಾದ ಅವರು ಈಚೆಗೆ ರಾಜ್ಯದಲ್ಲಿ ಜೋಗಿ ಜನಾಂಗದ ಪ್ರಥಮ ಯೋಗಿಯಾಗಿ ಕರ್ಣಕುಂಡಲ ಧೀಕ್ಷೆ ಪಡೆದು ಚಂದ್ರಗುತ್ತಿಯ ಯೋಗೀಶ್ವರ ಮಠದಲ್ಲಿ ಜೋಗಿ ಸಮುದಾಯದವರು ಹಮ್ಮಿಕೊಂಡಿದ್ದ ಗುರುವಂದನೆ ಸ್ವೀಕರಿಸಿ ಮಾತನಾಡಿದರು.

ಹಠ ಯೋಗ ಪರಂಪರೆಯ 41 ದಿನಗಳ ಕಠಿಣ ಧೀಕ್ಷೆಯನ್ನು ಮಹರಾಷ್ಟ್ರದ ಮುದ್ಗೋಡು ಆಶ್ರಮದಲ್ಲಿ ಮೆಹಂತ್ ಸೋಮವಾರನಾಥಜೀ, ಗೋರಖ್ಪುರದ ಆದಿತ್ಯನಾಥಜೀ ಮೂಲಕ ಧೀಕ್ಷೆ ಪಡೆದಿದ್ದು, ಜನಾಂಗದ ಹಲವು ವೈರುಧ್ಯಗಳ ನಡುವೆಯೂ ಸಂಘಟನಾತ್ಮಕವಾಗಿ ಬೆಳೆಯಲು, ಮೂಲ ಸಂಸ್ಕೃತಿ ಉಳಿಯಲು ಎಲ್ಲರೂ ಒಗ್ಗೂಡಬೇಕು, ಜ್ಞಾನ ನೀಡುವ ಮುದ್ರಧಾರಣೆಗೆ ಎಲ್ಲರೂ ಮುಂದಾಗಬೇಕು, ಸತ್ಸಂಸ್ಕೃತಿಯನ್ನು ಉಳಿಸಿಕೊಳ್ಳಬೇಕು ಎಂದು ಕರೆ ನೀಡಿದ ಅವರು ಧೀಕ್ಷೆ ಪಡೆಯಲು ಸಹಕರಿಸಿದ ಸುಖದೇವನಾಥ್ಜೀ, ಸಮಾಜದ ರಾಜ್ಯಾಧ್ಯಕ್ಷ ಶಿವಾಜಿಮಧುಕರ್ ಅವರನ್ನು ಸ್ಮರಿಸಿದರು.
Also read: ಪರಿಷ್ಕೃತ ಪಠ್ಯ ಪುಸ್ತಕ ವಿವಾದದಿಂದ ಸುಸಂಸ್ಕೃತ ಸಮಾಜದ ಘನತೆಗೆ ಧಕ್ಕೆ: ಟಿ.ಎಸ್. ನಾಗಾಭರಣ

ಅಖಿಲಭಾರತ ವರ್ಷೀಯ ಭಾರಾಪಂಥ್ ಅವಧೂತ ಯೋಗಿ ಮಹಾಸಭಾದ ರಾಜ್ಯಾಧ್ಯಕ್ಷ ಶಿವಾಜಿಮಧುಕರ್ ಮಾತನಾಡಿ, ಮಠದ ಅಭಿವೃದ್ಧಿಗೆ ಶ್ರಮಿಸಿ ಕಟ್ಟಡ ಜೀರ್ಣೋದ್ಧಾರಕ್ಕಾಗಿ ಯೋಜಿಸಲಾಗಿದೆ, ಬಿಳಲುಬಿಟ್ಟ ಆಲದ ಮರದಂತೆ ಜೋಗಿ ಸಮಾಜವಿದ್ದು ಬಿಳಲು ಗಟ್ಟಿಗೊಳಿಸುವ ಮೂಲಕ ಒಂದಾಗಬೇಕು, ಜೋಗಿ ಕಲಾವಿದರ ಶ್ರೇಯೋಭಿವೃದ್ಧಿಯ ಜೊತೆಗೆ ತಳಹಂತದ ಸದೃಢತೆಗೆ ಎಲ್ಲರ ಸಹಕಾರ ಇರಬೇಕು ಎಂದರು.

ಗೊಟಗೋಡಿ ಜನಪದ ವಿವಿಯ ಪ್ರಾಧ್ಯಾಪಕ ಡಾ.ಆನಂದ್, ಅಧ್ಯಯನಕಾರ ಶ್ರೀಪಾದ ಬಿಚ್ಚುಗತ್ತಿ ಜೋಗಿ ಜನಾಂಗದ ಮೂಲೋದ್ಧೇಶ, ಸಮಾಜ ಬೆಳೆದು ಬಂದ ಬಗೆಯ ಕುರಿತು, ಸಮಾಜದ ಹೊಳೆಲಿಂಗಪ್ಪ ಸಂಘಟನೆಯ ಔಚಿತ್ಯತೆ ಕುರಿತು ಮಾತನಾಡಿದರು.
ಸಮುದಾಯದ ಪ್ರಮುಖರಾದ ಶಿವಜೋಗಿ, ಶಿವರುದ್ರಪ್ಪ ಜೋಗಿ, ನಾಗರಾಜಜೋಗಿ ಇನ್ನೂ ಅನೇಕರಿದ್ದರು.

ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















