ಕಲ್ಪ ಮೀಡಿಯಾ ಹೌಸ್ | ಚಂದ್ರಗುತ್ತಿ |
ಸಹಕಾರ ಸಂಘಗಳ ಮೂಲಕ ರೈತರಿಗೆ ಹಲವು ಸೌಲಭ್ಯಗಳನ್ನು ಒದಗಿಸಲಾಗುತ್ತಿದ್ದು, ಸಂಘದ ಬೆಳವಣಿಗೆಯಲ್ಲಿ ಷೇರುದಾರರ ಪಾತ್ರ ಮಹತ್ವದ್ದಾಗಿದೆ ಎಂದು ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಮಂಜುನಾಥ ಶೆಣೈ ಹೇಳಿದರು.
ಇಲ್ಲಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದ ಆವರಣದಲ್ಲಿ ಹಮ್ಮಿಕೊಂಡ ಸಂಘದ 2022-23ನೇ ಸಾಲಿನ ವಾರ್ಷಿಕ ಮಹಾಸಭೆಯ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.
ಕಳೆದ ಐದು ವರ್ಷಗಳಿಂದ ಸಂಘವು ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಆರಂಭದಲ್ಲಿ 800 ಷೇರುದಾರ ಮೂಲಕ ಸಂಘವನ್ನು ಪ್ರಾರಂಭಿಸಲಾಯಿತು. ಪ್ರಸ್ತುತ ಸಂಘದಲ್ಲಿ 1199 ಷೇರುದಾರರಿದ್ದಾರೆ. ಸಂಘದಿಂದ ರೈತರಿಗೆ ಅನುಗುಣವಾಗಿ ಬೆಳೆಸಾಲ, ಹೈನುಗಾರಿಕೆ ಸಾಲ, ಮಧ್ಯಮಾವಧಿ, ಪಂಪ್ಸೆಟ್ ಸಾಲ, ಜಾಮೀನು ಸಾಲ, ಸ್ವ ಸ್ವಹಾಯ ಗುಂಪುಗಳಿಗೆ ಸಾಲವನ್ನು ಮತ್ತು ಸರ್ಕಾರದಿಂದ ಸಹಾಯ ಧನ ನೀಡುತ್ತಾ ಸಂಘವು ಪ್ರಗತಿ ಪಥದಲ್ಲಿ ಸಾಗುತ್ತಿದೆ ಎಂದರು.
Also read: ಕಾವೇರಿ ನೀರು ನಿಯಂತ್ರಣ ಸಮಿತಿಯ ತೀರ್ಪನ್ನು ಅನುಷ್ಠಾನ ಮಾಡಲು ಸಾಧ್ಯವಿಲ್ಲ
ಸಂಘದಲ್ಲಿ ಗೊಬ್ಬರ, ಕ್ರಿಮಿನಾಶಕ, ಬಿತ್ತನೆ ಬೀಜವನ್ನು ರೈತರಿಗೆ ಮಾರಾಟ ಮಾಡಲಾಗುತ್ತಿದೆ. ಸಂಘವು 2.14 ಲಕ್ಷ ರೂ., ನಿವ್ವಳ ಲಾಭಗಳಿಸಿದ್ದು, ಸಂಘಕ್ಕೆ ನಾಬಾರ್ಡ್ನಿಂದ ಕಟ್ಟಡ ಮಂಜೂರಾಗಿದೆ. ಕಟ್ಟಡ ನಿರ್ಮಾಣಕ್ಕೆ ಖಾಲಿ ನಿವೇಶನದ ಕೊರತೆ ಇದ್ದು, ಈ ಬಗ್ಗೆ ನಿವೇಷನ ಮಂಜೂರಾತಿಗೆ ಸರ್ಕಾರಕ್ಕೆ ಮನವಿ ಮಾಡಲಾಗಿದೆ. ಸಂಘದ ಸದಸ್ಯರು ಪಡೆದ ಸಾಲವನ್ನು ಸಕಾಲಕ್ಕೆ ಮರುಪಾವತಿ ಮಾಡಿದರೆ ಮತ್ತಷ್ಟು ಸಾಲ ಸೌಲಭ್ಯ ನೀಡಲು ಅನುಕೂಲವಾಗುತ್ತದೆ ಎಂದರು.
ಇದೇ ಸಂದರ್ಭದಲ್ಲಿ ಸಂಘದ ಸದಸ್ಯರ ಪ್ರತಿಭಾನ್ವಿತ ಮಕ್ಕಳಿಗೆ ಪ್ರತಿಭಾಪುರಸ್ಕಾರ ನೀಡಲಾಯಿತು. ಕೆ. ಸಂತೋಷ್ ಕುಮಾರ್ ಸಂಘದ ವಾರ್ಷಿಕ ವರದಿಯನ್ನು ವಾಚಿಸಿದರು. ಸಂಘದ ಅಭಿವೃದ್ಧಿ ಮತ್ತು ಸಾಲ-ಸೌಲಭ್ಯಗಳ ಕುರಿತು ಸದಸ್ಯರು ಚರ್ಚಿಸಿದರು.
ಗ್ರಾಪಂ ಉಪಾಧ್ಯಕ್ಷ ರೇಣುಕಾ ಪ್ರಸಾದ್, ಸಂಘದ ಉಪಾಧ್ಯಕ್ಷ ಎನ್.ಬಿ. ಸದಾನಂದಗೌಡ, ನಿರ್ದೇಶಕರಾದ ಎನ್. ಗುತ್ಯಪ್ಪ, ಗಂಗಾಧರಗೌಡ, ಗುರುರಾಜ್, ಕೆ. ರಮೇಶ್, ಕಾಳಪ್ಪ ತಿಪ್ಪಾರ್, ಎನ್.ಸಿ. ರವಿ, ಎಂ.ಆರ್. ಪರಮೇಶ್ವರ, ರಾಮಕೃಷ್ಣ ಶೇಟ್, ಕಲಾವತಿ, ಪಿ. ಅಂಜಲಿ, ಕ್ಷೇತ್ರಾಧಿಕಾರಿ ಶರಣಪ್ಪ, ಪ್ರಭಾರ ಮುಖ್ಯ ಕಾರ್ಯನಿರ್ವಾಹಕ ಪಿ.ಪಿ. ಸುನೀಲ್ ಕುಮಾರ್ ಸೇರಿದಂತೆ ಸಂಘದ ಸದಸ್ಯರು ಉಪಸ್ಥಿತರಿದ್ದರು.
ವರದಿ: ಮಧುರಾಮ್, ಸೊರಬ
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post