ಚನ್ನಗಿರಿ: ಎಲ್ಲ ಕ್ಷೇತ್ರಗಳಲ್ಲಿನ ವಿಪ್ರರು ತಮ್ಮ ಸಮಸ್ಯೆಗಳ ಬಗ್ಗೆ ಸಂಘಟನೆಯ ಸಮಾರಂಭಗಳಲ್ಲಿ ಗಮನ ಸೆಳೆಯುತ್ತಾರೆ. ಅದರಂತೆ ರಾಜಕೀಯ ಕ್ಷೇತ್ರದಲ್ಲಿ ಬ್ರಾಹ್ಮಣರ ಕುರಿತು ರಾಜಕಾರಣಿಯಾದ ನಾನು ನಮ್ಮ ಸಮಸ್ಯೆಗಳ ಬಗ್ಗೆ ಹೇಳಿಕೊಳ್ಳಲು ನಮ್ಮೊಂದಿಗೆ ವಿಪ್ರರನ್ನು ರಾಜಕೀಯದಲ್ಲಿ ಆರಿಸಿ ಕಳುಹಿಸಿ ಎಂದು ಮಾಜಿ ಶಾಸಕ ವೈ.ಎಸ್.ವಿ. ದತ್ತಾ ಕರೆ ನೀಡಿದರು.
ಚನ್ನಗಿರಿ ತಾಲೂಕು ಬ್ರಾಹ್ಮಣ ಮಹಾಸಭಾ ಘಟಕ ಉದ್ಘಾಟನಾ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.
ಕೆಲವು ವಿಧಾನಸಭಾ ಕ್ಷೇತ್ರಗಳಲ್ಲಿ ವಿಪ್ರರ ಸಂಖ್ಯೆ ಗಣನೀಯವಾಗಿದ್ದರೂ ಅಲ್ಲಿ ಬ್ರಾಹ್ಮಣ ಶಾಸಕರನ್ನು ಆರಿಸಿ ಕಳುಹಿಸುವುದಿಲ್ಲ. ಕಡೂರು ಕ್ಷೇತ್ರದಲ್ಲೇ ಬೆರಳೆಣಿಕೆಯ ಬ್ರಾಹ್ಮಣ ಮತದಾರರಿದ್ದಾರೆ. ಪ್ರಾಯೋಗಿಕವಾಗಿ ನಾನು ಆ ಕ್ಷೇತ್ರದಲ್ಲಿ ಸ್ಫರ್ಧಿಸಿ ನಲ್ವತ್ತೆಂಟು ಸಾವಿರಕ್ಕೂ ಅಧಿಕ ಮತಗಳಿಂದ ಜಯಪಡೆದೆ. ಅದಕ್ಕೆ ಕಾರಣ ನಾನು ಸಮಾಜಮುಖಿಯಾಗಿ ಇತರ ಎಲ್ಲ ಪಂಗಡಗಳ ವಿಶ್ವಾಸಗಳಿಸಿದ್ದೇ ಆಗಿದೆ. ಅಂದರೆ ನಮ್ಮಲ್ಲೇ ಆಂತರಿಕ ಬದಲಾವಣೆ ಆಗಬೇಕಿದೆ ಎಂದರು.
ಅದೆಂದರೆ ಸಮಾಜದ ಎಲ್ಲ ವರ್ಗಗಳಿಗೆ ದನಿಯಾಗುವುದು ಎಂದರು. ವಿಪ್ರ ವೈವಾಹಿಕ ಸಮಸ್ಯೆಗಳ ಬಗ್ಗೆ ಗಮನ ಸೆಳೆದ ಅವರು ಈಗಿನ ಪರಿಸ್ಥಿತಿ ಗಂಭೀರವಾಗಿದೆ. ಇದರ ಬಗ್ಗೆ ಶೃಂಗೇರಿ, ಮಂತ್ರಾಲಯ ಮತ್ತು ಸ್ವರ್ಣವಲ್ಲಿ ಗುರುಗಳ ಜೊತೆಯಲ್ಲಿ ಚರ್ಚಿಸಿದ್ದೇನೆ. ಒಂದು ಹಂತದಲ್ಲಿ ಸಸ್ಯಾಹಾರಿಗಳಾಗಿದ್ದರೆ ಸಾಕು ಅವರಲ್ಲಿ ಹೆಣ್ಣು ಗಂಡು ಕೊಡು ಕೊಳ್ಳುವಿಕೆ ಮಾಡಿ ಎನ್ನುವ ಮಟ್ಟಿಗೆ ರೋಸಿ ಸಮ್ಮತಿಸುವ ಅನಿವಾರ್ಯತೆ ಒದಗಿದೆ ಎಂದು ಮಾರ್ಮಿಕವಾಗಿ ಹೇಳಿದರು.
(ವರದಿ: ಡಾ.ಸುಧೀಂದ್ರ)
Discussion about this post