ಕಲ್ಪ ಮೀಡಿಯಾ ಹೌಸ್
ಬೆಂಗಳೂರು: ರಾಷ್ಟ್ರೀಯ ಶಿಕ್ಷಣ ನೀತಿ 2020 ಕೃತಿಯನ್ನು ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ ಲೋಕಾರ್ಪಣೆಗೊಳಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ಕನ್ನಡ ಭಾಷೆಯಲ್ಲಿ ಅತ್ಯಂತ ಸರಳವಾಗಿ ನಿರೂಪಣೆಗೊಂಡಿರುವ ಈ ಕೃತಿಯನ್ನು ರಚಿಸಿರುವ ಪ್ರಯತ್ನವನ್ನು ಶ್ಲಾಘಿಸಿದರು.
ಪಿಇಎಸ್ ಸಂಸ್ಥೆಯ ಸಿಇಒ ಎಸ್.ವೈ. ಉಮಾದೇವಿ, ಪಿಇಎಸ್ ಸಂಸ್ಥೆಯ ಮುಖ್ಯ ಆಡಳಿತ ಸಂಯೋಜಕರಾದ ಡಾ.ನಾಗರಾಜ ಆರ್, ಪಿಇಎಸ್ ಐಎಎಂಎಸ್ ಕಾಲೇಜಿನ ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಎನ್. ಪ್ರವೀಣ್ ಚಂದ್ರ ಹಾಗೂ ಬೆಂಗಳೂರಿನ ಸಂಪದ ಪಬ್ಲಿಕೇಷನ್ಸ್’ನ ವಿನಾಯಕ, ಗಿರೀಶ್, ಸುನಿಲ್ ಉಪಸ್ಥಿತರಿದ್ದರು.
ಪ್ರಧಾನಿ ನರೇಂದ್ರ ಮೋದಿಯವರ ಮಹತ್ವಾಕಾಂಕ್ಷೆಯ ರಾಷ್ಟ್ರೀಯ ಶಿಕ್ಷಣ ನೀತಿ 2020 ಯು ಶಿಕ್ಷಣ ಕ್ಷೇತ್ರದಲ್ಲಿ ಬಹುದೊಡ್ಡ ಮಾರ್ಪಾಡುಗಳನ್ನು ಮಾಡುವ ಮೂಲಕ ಶಿಕ್ಷಣ ರಂಗದಲ್ಲಿ ಹೊಸ ಭಾಷ್ಯವನ್ನು ಬರೆಯುವ ಸಂಕಲ್ಪ ಹೊಂದಿದೆ. ಅಲ್ಲದೆ ಇಡೀ ದೇಶದಲ್ಲಿಯೇ ಕರ್ನಾಟಕ ರಾಜ್ಯ ಸರ್ಕಾರವು ಮೊಟ್ಟ ಮೊದಲಿಗೆ ಈ ನೀತಿಯನ್ನು ಜಾರಿಗೆ ತರುವ ನಿಟ್ಟಿನಲ್ಲಿ ಅಣಿಯಾಗುತ್ತಿದೆ.
ಈ ಹಂತದಲ್ಲಿ ಹೊಸ ರಾಷ್ಟ್ರೀಯ ಶಿಕ್ಷಣ ನೀತಿ 2020 ಯ ಹೂರಣವು ಶಿಕ್ಷಣ ಕ್ಷೇತ್ರದ ಪ್ರತಿಯೊಬ್ಬರಿಗೂ ಹಾಗೂ ಶ್ರೀಸಾಮಾನ್ಯರಿಗೂ ತಲುಪಬೇಕು ಎಂಬ ಆಶಯದಿಂದ ಶಿವಮೊಗ್ಗದ ಪ್ರೇರಣಾ ಶೈಕ್ಷಣಿಕ ಮತ್ತು ಸಾಮಾಜಿಕ ಸಂಸ್ಥೆಯ ಮುಖ್ಯ ಆಡಳಿತ ಸಂಯೋಜಕರಾದ ಡಾ. ನಾಗರಾಜ ಆರ್ ಮತ್ತು ಕನ್ನಡ ಸಹಾಯಕ ಪ್ರಾಧ್ಯಾಪಕರಾದ ಡಾ.ಎನ್. ಪ್ರವೀಣ್ ಚಂದ್ರ ಅವರು ಜೊತೆಗೂಡಿ ರಾಷ್ಟ್ರೀಯ ಶಿಕ್ಷಣ ನೀತಿ 2020 ಕುರಿತು ವಿವರವಾಗಿ ಸ್ಥಳೀಯ ದಿನಪತ್ರಿಕೆಯಲ್ಲಿ ಬರೆದ ಅಂಕಣ ಬರಹಗಳು ಸುಂದರ ಕೃತಿಯಾಗಿ ಮೂಡಿ ಬಂದಿದೆ. ಬೆಂಗಳೂರಿನ ಸಂಪದ ಪಬ್ಲಿಕೇಷನ್ ಈ ಕೃತಿಯನ್ನು ಪ್ರಕಟಿಸಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9481252093 – info@kalpa.news

















