ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಗೌರಿಬಿದನೂರು: ಇಡೀ ವಿಶ್ವಕ್ಕೆ ಕಂಟಕವಾಗಿದ್ದ ಕೊರೋನಾ ವೈರಸ್ ಇದೀಗ ಸಮುದಾಯದಲ್ಲಿ ಹಾಗೂ ಗ್ರಾಮೀಣ ಪ್ರದೇಶಕ್ಕೂ ಲಗ್ಗೆ ಇಟ್ಟಿರುವುದು ಆತಂಕದ ವಿಚಾರವಾಗಿದೆ ಎಂದು ಗ್ರಾಮ ಪಂಚಾಯತಿ ಆಡಳಿತಾಧಿಕಾರಿ ಮಹದೇವಸ್ವಾಮಿ ತಿಳಿಸಿದರು.
ತಾಲೂಕಿನ ಜಿ. ಬೊಮ್ಮಸಂದ್ರ ಗ್ರಾಮ ಪಂಚಾಯಿತಿ ಕಾರ್ಯಾಲಯದಲ್ಲಿ ಕೊರೋನಾ ವಾರಿಯರ್ಸ್’ಗೆ ಆಯೋಜಿಸಿದ್ದ ಜಾಗೃತಿ ಸಭೆಯನ್ನು ಉದ್ದೇಶಿಸಿ ಅವರು ಮಾತನಾಡಿದರು.
ಕೋವಿಡ್19 ಸೋಂಕು ವ್ಯಾಪಕವಾಗಿ ಹರಡುತ್ತಿದ್ದು, ಇದೀಗ ನಮ್ಮ ಸುತ್ತಮುತ್ತಲೂ ಇರುವ ಗ್ರಾಮಗಳಲ್ಲಿ ಸೋಂಕು ಕಾಣಿಸಿಕೊಂಡಿದೆ. ಆದ್ದರಿಂದ ಪ್ರತಿ ಗ್ರಾಮದಲ್ಲಿನ ವಯೋವೃದ್ಧರು, ಗರ್ಭಿಣಿಯರು, ಮಕ್ಕಳು ಮತ್ತು ಬಾಣಂತಿಯರು ಅನಾವಶ್ಯಕವಾಗಿ ಮನೆಯಿಂದ ಹೊರ ಬರದಂತೆ ನೋಡಿಕೊಳ್ಳಿ, ಕಾರ್ಯದ ನಿಮಿತ್ತ ನಾಗರಿಕರು ಮನೆಯಿಂದ ಹೊರ ಬಂದಲ್ಲಿ ಕಡ್ಡಾಯವಾಗಿ ಮಾಸ್ಕ್ ಧರಿಸಬೇಕು ಮತ್ತು ನಡುವಿನ ಅಂತರವನ್ನು ಕಾಯ್ದುಕೊಳ್ಳಬೇಕು. ಮನೆಯಲ್ಲಿರುವವರಿಗೆ ಏನಾದರೂ ನೆಗಡಿ, ಕೆಮ್ಮು, ಜ್ವರದಂತಹ ಲಕ್ಷಣಗಳು ಕಂಡು ಬಂದಲ್ಲಿ ಕೂಡಲೆ ಆಶಾ ಕಾರ್ಯಕರ್ತೆಯರಿಗೆ ತಿಳಿಸಬೇಕಾಗಿದೆ. ನೆರೆಯ ಜಿಲ್ಲೆಗಳು, ಹಿಂದೂಪುರ, ಬೆಂಗಳೂರಿನಿಂದ ಗ್ರಾಮಕ್ಕೆ ಬಂದವರ ಬಗ್ಗೆ ನಿಗಾವಹಿಸುವುದು ಎಂದರು.
ಅನಾವಶ್ಯಕವಾಗಿ ಬೇರೆ ಊರುಗಳಿಗೆ ಹೋಗುವುದನ್ನು ನಿಲ್ಲಿಸಿ, ನಿಮ್ಮ ಗ್ರಾಮದ ಹಾಲಿನ ಡೈರಿ, ರೇಷನ್ ಅಂಗಡಿ, ಪೆಟ್ಟಿಗೆ ಅಂಗಡಿಗಳ ಹತ್ತಿರ ಕಡ್ಡಾಯವಾಗಿ ಮಾಸ್ಕ್ ಧರಿಸುವುದು ಮತ್ತು ನಡುವಿನ ಅಂತರ ಕಾಯ್ದುಕೊಳ್ಳುವುದು ಅವಶ್ಯಕವಾಗಿದೆ. ಅನಾವಶ್ಯಕವಾಗಿ ಊರಿನ ಅರಳಿ ಕಟ್ಟೆ, ಅಂಗಡಿ, ಹೊಟೇಲ್’ಗಳ ಮುಂದೆ ಗುಂಪು ಸೇರುವುದನ್ನು ನಿಲ್ಲಿಸಬೇಕು. ಪಂಚಾಯತಿ ವ್ಯಾಪ್ತಿಯ ಪ್ರತಿಯೊಂದು ಗ್ರಾಮದಲ್ಲಿ ಒಂದೊಂದು ವಾಟ್ಸಾಪ್ ಗ್ರೂಪ್ ರಚನೆ ಮಾಡಿದ್ದು ನಿಮ್ಮ ಊರಿನ ಮಾಹಿತಿಗಳನ್ನು ಸದರಿ ಗುಂಪಿನಲ್ಲಿ ಹಂಚಿಕೊಳ್ಳುವುದು. ಎಲ್ಲರೂ ಒಂದಾಗಿ ಕೊರೊನಾ ವೈರಸ್ ತಡೆಗಟ್ಟಲು ನಮ್ಮೊಂದಿಗೆ ಕೈಜೋಡಿಸಲು ಸಹಕಾರ ನೀಡಬೇಕಾಗಿದೆ ಎಂದು ತಿಳಿಸಿದರು.
ಬಳಿಕ ಗ್ರಾಮದ ಪ್ರತಿಯೊಂದು ಕಡೆಗಳಲ್ಲಿ ಸೋಂಕು ನಿವಾರಕವನ್ನು ಸಿಂಪರಣೆ ಮಾಡಿಸಿದರು.
ಈ ಸಂದರ್ಭದಲ್ಲಿ ಗ್ರಾಮ ಪಂಚಾಯಿತಿ ಕಾರ್ಯದರ್ಶಿ ಚನ್ನ ಕೃಷ್ಣಪ್ಪ, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತರು, ಹಾಗೂ ಗ್ರಾಮ ಪಂಚಾಯಿತಿ ಮಾಜಿ ಸದಸ್ಯರು, ಸ್ವಯಂ ಸೇವಕರು ಉಪಸ್ಥಿತರಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get In Touch With Us info@kalpa.news Whatsapp: 9481252093
Discussion about this post