ಕಲ್ಪ ಮೀಡಿಯಾ ಹೌಸ್ | ಚಿಕ್ಕಬಳ್ಳಾಪುರ |
ನಾಯಿ ಕಡಿತಕ್ಕೊಳಗಾಗಿದ್ದ 5 ವರ್ಷದ ಬಾಲಕನಿಗೆ ಸೂಕ್ತ ಚುಚ್ಚುಮದ್ದು ನೀಡದ ಕಾರಣ ಮಗುವಿಗೆ ಜ್ವರ ಬಂದು ಸಾವನ್ನಪ್ಪಿದೆ ಎಂದು ಆರೋಪಿಸಿ ಗೌರಿಬಿದನೂರಿನ ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದ ಬಳಿ ಬಾಲಕನ ಪೋಷಕರು ಪ್ರತಿಭಟನೆ ನಡೆಸಿದ ಘಟನೆ ನಡೆದಿದೆ.
ಘಟನೆ ಹಿನ್ನೆಲೆ:
ಗೌರಿಬಿದನೂರು ತಾಲೂಕು ಕೋಟಾಲದಿನ್ನೆ ಗ್ರಾಮದ ಫೈರೋಜ್ ಹಾಗೂ ಫಾಮೀದಾ ದಂಪತಿಯ ಪುತ್ರ ಸಮೀರ್ (5) ಮೃತ ಬಾಲಕ ನಾಗಿದ್ದು, ಈತನಿಗೆ ಕಳೆದ ಆಕ್ಟೋಬರ್ 30 ರಂದು ನಾಯಿ ಕಡಿದಿತ್ತು. ಹೊಸೂರು ಪ್ರಾಥಮಿಕ ಆರೋಗ್ಯ ಕೇಂದ್ರದಲ್ಲಿ ಮಗುವಿಗೆ ನಾಯಿ ಕಡಿತಕ್ಕೆ ಇಂಜೆಕ್ಷನ್ ಕೊಡಿಸಲಾಗಿತ್ತಾದರೂ, 5 ದಿನಗಳ ನಂತರ ಮಗುವಿಗೆ ತೀವ್ರತರ ಜ್ವರ ಬಂದಿದೆ. ಚಿಕಿತ್ಸೆಗಾಗಿ ಬಾಲಕನನ್ನು ಗೌರಿಬಿದನೂರು ನಗರದ ಖಾಸಗಿ ಆಸ್ಪತ್ರೆಗೆ ಬಾಲಕನನ್ನು ದಾಖಲಿಸಿದ್ದಾರೆ. ತದನಂತರ ಹೆಚ್ಚಿನ ಚಿಕಿತ್ಸೆಗೆ ಬೆಂಗಳೂರಿನ ಇಂದಿರಾ ಗಾಂಧಿ ಮಕ್ಕಳ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ಫಲಕಾರಿಯಾಗದೆ ಬಾಲಕ ಸಾವನ್ನಪ್ಪಿದ್ದಾನೆ.
ಇಂದಿರಾಗಾಂಧಿ ಆಸ್ಪತ್ರೆಯ ವೈದ್ಯರು, ಪ್ರಥಮ ಹಂತದಲ್ಲೇ ನಾಯಿ ಕಡಿತಕ್ಕೆ ಸೂಕ್ತ ಇಂಜೆಕ್ಷನ್ ನೀಡದ ಹಿನ್ನೆಲೆ ಮಗುವಿನ ಮೆದುಳಿಗೆ ವಿಷ ಏರಿ ಬಾಲಕ ಸಾವನ್ನಪ್ಪಿದ್ದಾನೆ ಎಂದು ಪೋಷಕರಿಗೆ ತಿಳಿಸಿದ್ದಾರೆ. ಇದರಿಂದ ನೊಂದ ಬಾಲಕನ ಪೋಷಕರು ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಆಗಮಿಸಿ, ತಮ್ಮ ಮಗುವಿಗೆ ನೀಡಿದ ಇಂಜೆಕ್ಷನ್ ಮಾಹಿತಿ ನೀಡುವಂತೆ ಒತ್ತಾಯಿಸಿ ಪ್ರತಿಭಟನೆ ನಡೆಸಿದ್ದಾರೆ.
Also read: ಕಿರ್ಲೋಸ್ಕರ್ ಫೆರಸ್ ಕಾರ್ಖಾನೆಗೆ ಸಿಎಸ್ಆರ್ ಎಕ್ಸ್ಲೆನ್ಸ್ – 2022 ಪ್ರಶಸ್ತಿ

ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news


















