ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
11ನೇ ಅಂತರರಾಷ್ಟ್ರೀಯ ಯೋಗ ದಿನಾಚರಣೆ ಅಂಗವಾಗಿ ಚಿತ್ರದುರ್ಗ ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಲ್ಲಿ ಗುರುವಾರ ವಿವಿಧ ಯೋಗ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಯೋಗ ನಡಿಗೆ ಕಾರ್ಯಕ್ರಮಕ್ಕೆ ಅಪರ ಜಿಲ್ಲಾಧಿಕಾರಿ ಬಿ.ಟಿ. ಕುಮಾರಸ್ವಾಮಿ ಹಾಗೂ ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ರಂಗಸ್ವಾಮಿ ಹಸಿರು ನಿಶಾನೆ ತೋರುವ ಮೂಲಕ ಚಾಲನೆ ನೀಡಿದರು.
ಈ ವೇಳೆ ಮಾತನಾಡಿದ ಅಪರ ಜಿಲ್ಲಾಧಿಕಾರಿ ಬಿ.ಟಿ.ಕುಮಾರಸ್ವಾಮಿ, ಯೋಗ ಭಾರತ ದೇಶದ ಹೆಮ್ಮೆಯ ಕೊಡುಗೆ. ಇದು ಜಗತ್ತಿನಾದ್ಯಂತ ಪಸರಿಸುತ್ತಿರುವುದು ಹರ್ಷದಾಯಕವಾದ ವಿಚಾರ. ಸಾರ್ವಜನಿಕರಿಗೆ ಯೋಗವನ್ನು ತಲುಪಿಸುವ ಸಂಘ ಸಂಸ್ಥೆಗಳ ಆಸಕ್ತಿ ನಿಜಕ್ಕೂ ಶ್ಲಾಘನೀಯ ಎಂದು ಯೋಗ ನಡಿಗೆಗೆ ಶುಭ ಕೋರಿದರು.
ಜಿಲ್ಲಾ ಪಂಚಾಯಿತಿ ಉಪ ಕಾರ್ಯದರ್ಶಿ ಡಾ.ರಂಗಸ್ವಾಮಿ ಮಾತನಾಡಿ, ಆರೋಗ್ಯವೇ ಭಾಗ್ಯ. ಯೋಗದಿಂದ ಎಲ್ಲರಿಗೂ ಉಚಿತವಾಗಿ ಆರೋಗ್ಯ ಸಿಗಲಿದೆ. ನಿತ್ಯ ಯೋಗಭ್ಯಾಸ ಮಾಡಿ ನಿರೋಗಿಗಳಾಗಿ ಎಂದು ಕರೆ ನೀಡಿದರು.
ಜಿಲ್ಲಾ ಆಯುಷ್ ಅಧಿಕಾರಿ ಡಾ. ಚಂದ್ರಕಾಂತ್ ನಾಗಸಮುದ್ರ ಮಾತನಾಡಿ, ಆಯುಷ್ ಇಲಾಖೆ ವತಿಯಿಂದ ಯೋಗವನ್ನು ಮನೆಮನೆಗೆ ತಲುಪಿಸುವ ಕಾರ್ಯವನ್ನು ಮಾಡಲಾಗುತ್ತಿದೆ. ವೈದ್ಯ ಪದ್ಧತಿಗಳು ಚಿಕಿತ್ಸೆ ನೀಡಬಲ್ಲವೂ ಆದರೆ ಯೋಗದಿಂದ ಮಾತ್ರ ಆರೋಗ್ಯ ಪಡೆಯಲು ಸಾಧ್ಯ ಎಂದು ಹೇಳಿದರು.
ಜಿಲ್ಲೆಯ ವಿವಿಧ ಯೋಗ ಸಂಘ ಸಂಸ್ಥೆಗಳ ಸಹಕಾರದೊಂದಿಗೆ ಹಮ್ಮಿಕೊಂಡಿದ್ದ ಯೋಗ ನಡಿಗೆ ಜಾಗೃತಿ ಜಾಥಾವು ನಗರದ ಜಿಲ್ಲಾಧಿಕಾರಿಗಳ ಕಚೇರಿ ಆವರಣದಿಂದ ಪ್ರಾರಂಭವಾಗಿ, ಮದಕರಿ ವೃತ್ತ, ರಂಗಯ್ಯನಬಾಗಿಲು ಮೂಲಕ ಉಚ್ಚಂಗಿಯಲ್ಲಮ್ಮ ದೇವಸ್ಥಾನ, ಆನೆಬಾಗಿಲು, ಗಾಂಧಿ ವೃತ್ತದ ಮೂಲಕ ಪ್ರಮುಖ ಬೀದಿಗಳಲ್ಲಿ ಘೋಷಣೆ ಕೂಗುತ್ತಾ ಶಿಸ್ತು ಬದ್ಧವಾಗಿ ನಡೆದ ಯೋಗ ನಡಿಗೆಯು ಹಳೇ ಮಾಧ್ಯಮಿಕ ಶಾಲಾ ಆವರಣದಲ್ಲಿ ಕೊನೆಗೊಂಡಿತು.
ಇದೇ ಸಂದರ್ಭದಲ್ಲಿ ಆಯುಷ್ ಇಲಾಖೆ ವತಿಯಿಂದ ಭಾಗವಹಿಸಿದ್ದ ಎಲ್ಲರಿಗೂ ಆರೋಗ್ಯಕರ ಕಷಾಯ ವಿತರಣೆ ಮಾಡಲಾಯಿತು.
ಯೋಗ ನಡಿಗೆ ಜಾಗೃತಿ ಜಾಥಾದಲ್ಲಿ ಜಿಲ್ಲಾ ಆಯುಷ್ ಇಲಾಖೆಯ ವೈದ್ಯಾಧಿಕಾರಿ ಡಾ.ಟಿ.ಶಿವಕುಮಾರ್ ಸೇರಿದಂತೆ ಆಯುಷ್ ಇಲಾಖೆಯ ವೈದ್ಯಾಧಿಕಾರಿಗಳು, ಸಿಬ್ಬಂದಿ ವರ್ಗದವರು, ಜಿಲ್ಲೆಯ ವಿವಿಧ ಯೋಗಾಸಕ್ತ ಸಂಘ ಸಂಸ್ಥೆಗಳ ಪದಾಧಿಕಾರಿಗಳು ಹಾಗೂ ಸದಸ್ಯರು ಹಾಜರಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post