ಕಲ್ಪ ಮೀಡಿಯಾ ಹೌಸ್ | ಚಿತ್ರದುರ್ಗ |
ಸರ್ವೋಚ್ಚ, ಉಚ್ಛ ಹಾಗೂ ಕೆಳ ಹಂತದ ನ್ಯಾಯಾಲಯ ಹಾಗೂ ವಕೀಲರ ಸಂಘಗಳಲ್ಲಿ ನಾಡಿನ ಜ್ವಲಂತ ಸಮಸ್ಯೆಗಳ ಕುರಿತು ಚರ್ಚೆಯಾಗಲಿ. ಕಾನೂನಿನ ನೆರವಿಂದ ಈ ಸಮಸ್ಯೆಗಳಿಗೆ ಪರಿಹಾರವನ್ನು ಹೇಗೆ ಒದಗಿಸಬಹದು ಎಂಬುದರ ಚಿಂತನೆ ನಡೆಯಲಿ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ CM Basavaraja Bommai ಹೇಳಿದರು.
ಬುಧವಾರ ಚಿತ್ರದುರ್ಗ ನಗರದ ಸರಸ್ವತಿ ಕಾನೂನು ಮಹಾವಿದ್ಯಾಲಯದ ಸುವರ್ಣ ಸಮಾರಂಭ ಹಾಗೂ ಕಾನೂನು ಸೌಧ ಉದ್ಘಾಟಿಸಿ ಮಾತನಾಡಿದರು.
ಶಾಸಕಾಂಗ ಹಾಗೂ ನ್ಯಾಯಾಂಗ ಒಂದನ್ನೊಂದು ಅವಲಂಬಿಸಿವೆ. ಎರಡೂ ಜೊತೆ ಜೊತೆಯಾಗಿ ಸಾಗಬೇಕು. ಶಾಸಕಾಂಗದಿಂದ ಕಾನೂನು ರೂಪಿಸುವಾಗ ಹತ್ತು ಹಲವು ವಿಚಾರಗಳನ್ನು ಗಮನಿಸಬೇಕಾಗುತ್ತದೆ. ರೂಪಿಸುವ ಕಾನೂನು ಸಂವಿಧಾನ ಬದ್ದಬಾಗಿರಬೇಕು, ಸಮಾನತೆ ಸ್ವರೂಪ ಹೊಂದಿರಬೇಕು, ಕಾನೂನುಗಳು ಗೊಂದಲ ಮಯವಾಗಿರಬಾರದು. ಸ್ಪಷ್ಟ ಉದ್ದೇಶದಿಂದ ಕಾನೂನು ರೂಪಿಸಬೇಕು ಎಂದರು.
ದೇಶದಲ್ಲಿ ವ್ಯಾಜ್ಯಗಳ ಸಂಖ್ಯೆ ಕಡಿಮೆಯಾಗಬೇಕು. ವಕೀಲರು ಮಾನವೀಯತೆ ಮರೆಯಬಾರದು. ಪ್ರಾಕೃತಿಕ ನ್ಯಾಯ ಹಾಗೂ ಮಾನವ ರಚಿತ ಕಾನೂನುಗಳು ಭಿನ್ನವಾಗಿವೆ. ಪ್ರಾಕೃತಿಕ ನ್ಯಾಯ, ಸತ್ಯ, ಧರ್ಮ, ಪರೋಪಕಾರದಿಂದ ಲಭಿಸುವ ಪುಣ್ಯ ಪ್ರಾಪ್ತಿಯ ಬಗ್ಗೆ ತಿಳಿಸುತ್ತದೆ. ಆದರೆ ಮಾನವ ನಿರ್ಮಿತ ಕಾನೂನು ಶಿಕ್ಷಾರ್ಹ ನೀತಿ ಹೊಂದಿದೆ. ಕಾನೂನು ಮೀರಿದರೆ ದಂಡ ವಿಧಿಸಲಾಗುತ್ತದೆ. ಭಾರತಕ್ಕೆ ಭವ್ಯ ಚರಿತ್ರೆ ಇದೆ. ಆದರೆ ಇಂದು ಉತ್ತಮ ಚಾರಿತ್ಯ ಹೊಂದಿರುವ ಜನರು ಬೇಕಾಗಿದೆ. ಭಾರತದಲ್ಲಿ ನೀತಿಗಳ ಬೋದಿಸುವ ಆಚಾರ್ಯರಿದ್ದಾರೆ. ಆದರೆ ನೀತಿಗಳ ಆಚರಣೆಯಾಗಬೇಕು ಎಂದರು.
ರಾಜಕಾರಣಿಗಳು ಪ್ರತಿನಿತ್ಯ ರಾಜಕಾರಣ ಮಾಡಬಾರದು. ಅಧಿಕಾರ ಲಭಿಸುವ 60 ತಿಂಗಳಲ್ಲಿ 59 ತಿಂಗಳ ಅಭಿವೃದ್ಧಿ ಮಾಡಿ 1 ತಿಂಗಳು ರಾಜಕಾರಣ ಮಾಡಬೇಕು. ಜವಬ್ದಾರಿಯುತ ರಾಜಕೀಯ ಪಕ್ಷಗಳ ಇದನ್ನು ಅರಿಯಬೇಕು. ರಾಜಕಾರಣಿ ಮುಂದಿನ ಚುನಾವಣೆ ನೋಡಿತ್ತಾನೆ. ಮುತ್ಸದ್ಧಿ ದೃಷ್ಟಿ ಮುಂದಿನ ಜನಾಂಗದ ಮೇಲೆ ಇರುತ್ತದೆ. ಮುಂದಿನ ಜನಾಂಗಕ್ಕೆ ಮೌಲ್ಯಗಳನ್ನು ತಿಳಿಸಬೇಕು ಎಂದರು.
Also read: ಗಮನಿಸಿ! ನ.24ರಂದು ಸೊರಬ, ಶಿಗ್ಗಾ ಗ್ರಾಪಂ ವ್ಯಾಪ್ತಿಯ ಈ ಪ್ರದೇಶಗಳಲ್ಲಿ ವಿದ್ಯುತ್ ಇರುವುದಿಲ್ಲ
ಸರಸ್ವತಿ ವಿದ್ಯಾಸ್ಥಂಸ್ಥೆ ಮಧ್ಯ ಕರ್ನಾಟಕದಲ್ಲಿ ಜನರಿಗೆ ಕಾನೂನು ನೆರವು ಲಭಿಸುವ ನಿಟ್ಟಿನಲ್ಲಿ ಉತ್ತಮ ವಕೀಲರನ್ನು ರೂಪಿಸಿದೆ.ಸ್ವಾತಂತ್ರ್ಯ ಹಾಗೂ ರಾಜ್ಯ ಏಕೀಕರಣದಲ್ಲಿ ವಕೀಲರ ಪಾತ್ರ ದೊಡ್ಡದಿದೆ. ಬ್ಯಾರಿಷ್ಟರ್ ಪದವಿ ಪಡೆದ ಮಹನೀಯರು ಸ್ವಾತಂತ್ರ್ಯ ಸಮಯದಲ್ಲಿ ಕಾನೂನು ರೂಪಿಸುವ ಸ್ಥಾನದಲ್ಲಿದ್ದರು. ಕಾಲಕ್ರಮೇಣ ಈ ಸಂಖ್ಯೆ ಇಳಿಮುಖವಾಗಿದೆ. ಇಂದು ಶೇ.25ಕ್ಕಿಂತ ಕಡಿಮೆ ವಕೀಲರು ರಾಜಕಾರಣದಲ್ಲಿದ್ದಾರೆ ಎಂದರು.
ಸರಸ್ವತಿ ಕಾನೂನು ಮಹಾವಿದ್ಯಾಲಯದ ಸ್ನಾತಕೋತ್ತರ ಅಧ್ಯಯನ ಕೇಂದ್ರಕ್ಕೆ ರೂ.2 ಕೋಟಿ ಅನುದಾನ ಒದಗಿಸುವುದಾಗಿ ಮುಖ್ಯಮಂತ್ರಿಗಳು ಈ ಸಂದರ್ಭದಲ್ಲಿ ಭರವಸೆ ನೀಡಿದರು. ಕಾನೂನು ಕಾಲೇಜು ವಿದ್ಯಾರ್ಥಿಗಳಿಗಾಗಿ ಪ್ರತ್ಯೇಕ ಹಾಸ್ಟೆಲ್ ಸ್ಥಾಪಿನೆ.ಕಾನೂನು ಕಾಲೇಜುಗಳ ಶೈಕ್ಷಣಿಕ, ಆರ್ಥಿಕ, ಆಡಳಿತಾತ್ಮಕ ವಿಚಾರಗಳನ್ನು ನೋಡಿಕೊಳ್ಳಲು ಪ್ರತ್ಯೇಕ ನಿರ್ದೇಶನಾಲಯ ಸ್ಥಾಪಿಸುವ ಕುರಿತು ಹಿರಿಯ ಅಧಿಕಾರಿಗಳೊಂದಿಗೆ ಚರ್ಚಿಸಿ ನಿರ್ಧರಿಸುವುದಾಗಿ ತಿಳಿಸಿದರು.
ಕಾರ್ಯಕ್ರಮದಲ್ಲಿ ಜಲಸಂಪನ್ಮೂಲ ಸಚಿವ ಗೋವಿಂದ ಕಾರಜೋಳ, ನಗರಾಭಿವೃದ್ಧಿ ಸಚಿವ ಭೈರತಿ ಬಸವಾರಾಜ, ಕೆ.ಎಸ್.ಆರ್.ಟಿ.ಸಿ ಅಧ್ಯಕ್ಷ ಹಾಗೂ ಶಾಸಕ ಎ.ಚಂದ್ರಪ್ಪ, ಶಾಸಕ ಟಿ.ರಘುಮೂರ್ತಿ,ವಿಧಾನ ಪರಿಷತ್ ಶಾಸಕ ರವಿಕುಮಾರ್, ಕೆ.ಎಸ್.ನವೀನ್, ನಗರ ಸಭೆ ಅಧ್ಯಕ್ಷೆ ಬಿ.ತಿಪ್ಪಮ್ಮ , ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಜಿ.ಟಿ.ಸುರೇಶ್, ಹುಬ್ಬಳ್ಳಿ ಕಾನೂನು ವಿ.ವಿ. ಉಪಕುಲಪತಿ ಡಾ.ಸಿ.ಬಸವರಾಜು ಸರಸ್ವತಿ ಕಾನೂನು ಕಾಲೇಜು ಮುಖ್ಯಸ್ಥ ಹೆಚ್. ಹನುಮಂತಪ್ಪ, ಜಿ.ಪಂ.ಸಿಇಓ ಎಂ.ಎಸ್. ದಿವಾಕರ್, ಅಪರಜಿಲ್ಲಾಧಿಕಾರಿ ಇ. ಬಾಲಕೃಷ್ಣ, ಪೊಲೀಸ್ ವರಿಷ್ಠಾಧಿಕಾರಿ ಕೆ. ಪರುಶರಾಮ್ ಉಪಸ್ಥಿತರಿದ್ದರು.
ವರದಿ: ಡಿ.ಎಲ್. ಹರೀಶ್, ಬೆಂಗಳೂರು
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post