ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಚಿಕ್ಕಬಳ್ಳಾಪುರ: ವಿಧಾನಸಭಾ ಉಪಚುನಾವಣೆಗೆ ಕಾಂಗ್ರೆಸ್ ಪಕ್ಷದಿಂದ ಸ್ಪರ್ಧಿಸಿರುವ ಅಭ್ಯರ್ಥಿಯಾಗಿ ನಂದಿ ಎಂ. ಅಂಜನಪ್ಪ ಅವರ ಪರ ಮಾಜಿ ಸಚಿವರು ಹಾಗೂ ಹಾಲಿ ಶಾಸಕರು ಆದ ಶಿವಶಂಕರ್ ರೆಡ್ಡಿ ಮಂಚೇನಹಳ್ಳಿ ಹೋಬಳಿಯ ವಿವಿಧ ಗ್ರಾಮಗಳಲ್ಲಿ ಮತ ಪ್ರಚಾರ ಕೈಗೊಂಡರು.
ಪ್ರಚಾರ ವೇಳೆ ಮಾತನಾಡಿದ ಅವರು ಕಾಂಗ್ರೆಸ್ ಪಕ್ಷವು ಅನೇಕ ವರ್ಷಗಳಿಂದ ಜನರ ಏಳಿಗೆಗಾಗಿ ಅನೇಕ ಯೋಜನೆಗಳನ್ನು ಜಾರಿಗೊಳಿಸಿದೆ ಎಂದು ತಿಳಿಸಿದರು.
ಕರ್ನಾಟಕವನ್ನು ಹಸಿವು ಮುಕ್ತ ಕರ್ನಾಟಕವನ್ನಾಗಿಸಲು ಅನ್ನಭಾಗ್ಯ ಯೋಜನೆಯನ್ನು ಜಾರಿಗೆ ತಂದಿದೆ. ಇದರ ಮೂಲಕ ಪ್ರತಿ ಕುಟುಂಬಕ್ಕೆ 30 ಕೆಜಿ ಅಕ್ಕಿ, ರಾಗಿ, ಗೋಧಿ ಕೊಡುತ್ತಿತ್ತು. ಆದರೆ ಈ ಬಿಜೆಪಿ ಸರ್ಕಾರ ಕಾಂಗ್ರೆಸ್ ಪಕ್ಷ ತಂದ ಅನ್ನಭಾಗ್ಯ ಯೋಜನೆಯನ್ನು ಮೊಟಕುಗೊಳಿಸಿದೆ, ಮುಂದಿನ ದಿನಗಳಲ್ಲಿ ಕಾಂಗ್ರೆಸ್ ಪಕ್ಷ ಜಾರಿಗೆ ತಂದಂತಹ ಅನೇಕ ಯೋಜನೆಗಳನ್ನು ಕೈಬಿಡುವ ಸಂಚು ರೂಪಿಸಿದೆ. ಜನರನ್ನು ಮರೆತು ತಮ್ಮ ಸ್ವಾರ್ಥಕ್ಕೆ ಅನುಕೂಲಕರವಾಗುವ ಯೋಜನೆಗಳನ್ನು ರೂಪಿಸುವಲ್ಲಿ ಮುಂದಾಗಿದೆ ಎಂದು ದೂರಿದರು.
ಹಾಲು ಉತ್ಪಾದನೆಯಲ್ಲಿ ನಮ್ಮ ರಾಜ್ಯ ದೇಶದಲ್ಲಿ 11ನೆಯ ಸ್ಥಾನದಲ್ಲಿದೆ. ಹಾಗೆಯೇ ಸಹಕಾರ ಹಾಲು ಸಂಗ್ರಹಣೆಯಲ್ಲಿ ಎರಡನೇ ಸ್ಥಾನದಲ್ಲಿದೆ. ಕಾಂಗ್ರೆಸ್ ಸರ್ಕಾರ ಹಾಲು ಉತ್ಪಾದನೆಯನ್ನು ಹೆಚ್ಚಿಸಿ ರೈತರ ಆರ್ಥಿಕ ಮಟ್ಟ ಸುಧಾರಿಸಲು ಲೀಟರ್’ಗೆ 4 ರೂ.ನಂತೆ ಪ್ರೋತ್ಸಾಹಧನವನ್ನು ನೀಡಲಾಗುತ್ತಿದೆ ಎಂದರು.
ಮಕ್ಕಳ ಅಪೌಷ್ಠಿಕತೆಯನ್ನು ದೂರಮಾಡಲು ಒಂದರಿಂದ ಹತ್ತನೆಯ ತರಗತಿಯವರೆಗೆ ಕರ್ನಾಟಕದ 62 ಲಕ್ಷ ಮಕ್ಕಳಿಗೆ ಹಾಲು ನೀಡುವ ಕ್ಷೀರಭಾಗ್ಯ ಯೋಜನೆಯನ್ನು ಜಾರಿಗೊಳಿಸಿದೆ ಎಂದರು.
ಅವಿವಾಹಿತ ಮತ್ತು ಪರಿತ್ಯಕ್ತ ಮಹಿಳೆಯರು ನೆಮ್ಮದಿಯ ಜೀವನ ಸಾಗಿಸಲು ಮನಸ್ವಿನಿ ಯೋಜನೆ ಜಾರಿಗೊಳಿಸಲಾಗಿದೆ.ಹೀಗೆ ಹಲವಾರು ಯೋಜನೆಗಳನ್ನು ಕಾಂಗ್ರೆಸ್ ಸರ್ಕಾರ ಜಾರಿಗೊಳಿಸಿದೆ ಎಂದು ಹೇಳಿದರು.
ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಅಲ್ಪಸಂಖ್ಯಾತರು ಹಿಂದುಳಿದ ವರ್ಗಗಳ ಮತ್ತು ಮಹಿಳಾ ಅಭಿವೃದ್ಧಿ ನಿಗಮದಿಂದ ಪಡೆದ ಸಾಲ ಮನ್ನಾ ಮಾಡಲಾಗಿದೆ. ಇದರಿಂದ ಸುಮಾರು 8 ಲಕ್ಷ ಕುಟುಂಬಗಳನ್ನು ಋಣ ಮುಕ್ತವನ್ನಾಗಿಸಿದೆ. ಕೃಷಿ ಭಾಗ್ಯ ಯೋಜನೆಯಡಿ ರೈತರಿಗೆ ಬಡ್ಡಿ ರಹಿತ ಸಾಲ ನೀಡುವುದರ ಮೂಲಕ ರೈತರಿಗೆ ಉತ್ತಮ ಜೀವನ ನಡೆಸಲು ಅನುಕೂಲ ಮಾಡಿದೆ ಎಂದರು.
ಚಿಕ್ಕಬಳ್ಳಾಪುರ ಜಿಲ್ಲೆಯ ಎಲ್ಲಾ ಗ್ರಾಮ ಪಂಚಾಯ್ತಿ ವ್ಯಾಪ್ತಿಗಳಲ್ಲಿ ಶುದ್ಧ ಕುಡಿಯುವ ನೀರಿನ ಘಟಕ ಸ್ಥಾಪನೆ ಮಾಡಿ ಎಲ್ಲರಿಗೂ ಶುದ್ಧ ಕುಡಿಯುವ ನೀರು ಒದಗಿಸುತ್ತಾ ಬಂದಿದೆ. ಹಿಂದುಳಿದ ವರ್ಗದ ವಿದ್ಯಾರ್ಥಿಗಳಿಗೆ ವಿದ್ಯಾಸಿರಿ ಯೋಜನೆ ಜಾರಿಗೊಳಿಸಿದೆ. ಮುಂದಿನ ದಿನಗಳಲ್ಲಿ ಇನ್ನೂ ಅನೇಕ ಯೋಜನೆಗಳನ್ನು ಜಾರಿಗೊಳಿಸುವ ಯೋಚನೆಯಲ್ಲಿದೆ ಎಂದು ತಿಳಿಸಿದರು.
ಬರಗಾಲದಲ್ಲಿ ಸುಮಾರು ಎಂಟು ತಿಂಗಳುಗಳ ಕಾಲ ತನ್ನ ಸ್ವಂತ ವೆಚ್ಚದಲ್ಲಿ ಅಕ್ಕಿ, ರಾಗಿ, ಸಕ್ಕರೆ, ಗೋಧಿ ನೀಡಿದ ಅನ್ನದಾತ ನಂದಿ ಎಂ. ಆಂಜಿನಪ್ಪ ಅವರ ಈ ಮಹತ್ಕಾರ್ಯ ರಾಜ್ಯದ ಜನತೆಗೆ ತಲುಪಲು ಸಿದ್ದರಾಮಯ್ಯನವರ ಸರ್ಕಾರ ಇಡೀ ಕರ್ನಾಟಕ ರಾಜ್ಯಕ್ಕೆ ವಿಸ್ತರಿಸಿದೆ. ಈ ಕೀರ್ತಿ ನಂದಿ ಎಂ ಅಂಜನಪ್ಪ ಅವರಿಗೆ ಸಲ್ಲುತ್ತದೆ ಎಂದು ಹೇಳುತ್ತಾ ಬಡವರ ಬಂಧು ಅನ್ನದಾತ ಆಂಜಿನಪ್ಪ ಅವರಿಗೆ ಮತ ನೀಡಿ ಜಯಶೀಲರನ್ನಾಗಿ ಮಾಡಿ ಎಂದು ಮತಯಾಚನೆ ಮಾಡಿದರು.
ಇದೇ ವೇಳೆ ಕಾಂಗ್ರೆಸ್ ಪಕ್ಷವನ್ನು ತೊರೆದು ಬಿಜೆಪಿ ಪಕ್ಷಕ್ಕೆ ಸೇರ್ಪಡೆಯಾದ ಅನರ್ಹ ಸುಧಾಕರ್ ವಿರುದ್ಧ ಕಿಡಿಕಾರಿದರು. ಕೇವಲ ಸ್ವಂತ ಲಾಭಕ್ಕೆ ಮಂತ್ರಿ ಆಸೆಗೆ ಕಾಂಗ್ರೆಸ್ ಪಕ್ಷಕ್ಕೆ ದ್ರೋಹ ಬಗೆದ ಸುಧಾಕರ್’ಗೆ ಜನ ತಕ್ಕ ಪಾಠ ಕಲಿಸಬೇಕು ಮುಂದಿನ ದಿನಗಳಲ್ಲಿ ಇಂತಹ ಪಕ್ಷಾಂತರಿ ಅನರ್ಹ ನೀಚರಿಗೆ ಕ್ಷೇತ್ರದಲ್ಲಿ ಸ್ಥಾನ ಕಲ್ಪಿಸಬಾರದು ಎಂದು ಹೇಳಿದರು. ಅನಾವಶ್ಯಕವಾಗಿ ಚುನಾವಣೆ ಬಂದಿದೆ. ಜನ ಹಣದ ಆಸೆಗೆ ಬಲಿಯಾಗುವುದಿಲ್ಲ ಅವರಿಗೂ ಸ್ವಾಭಿಮಾನ ಇದೆ. ಕೋಟಿ ಕೋಟಿ ಹಣ ಪಡೆದು ಬಿಜೆಪಿ ಪಕ್ಷವನ್ನು ಸೇರಿದ ಸುಧಾಕರ್ ನನ್ನು ಯಾರು ಬೆಂಬಲಿಸಬಾರದು ಎಂದರು.
ಮತಪ್ರಚಾರದಲ್ಲಿ ನಂದಿ ಎಂ ಅಂಜನಪ್ಪ ಅವರ ಪತ್ನಿ ಡಾಕ್ಟರ್ ಜಯಂತಿ, ಜಿಲ್ಲಾ ಪಂಚಾಯತ್ ಸದಸ್ಯ ಪ್ರಕಾಶ್ ಸೇರಿದಂತೆ ಅನೇಕ ಕಾಂಗ್ರೆಸ್ ಮುಖಂಡರು, ಕಾರ್ಯಕರ್ತರು ಮಹಿಳೆಯರು ಮತ್ತು ಯುವಕರು ಪಾಲ್ಗೊಂಡಿದ್ದರು.
(ವರದಿ: ಬಿ.ಎಂ. ಅಜಯ್, ಗೌರಿಬಿದನೂರು)
Get in Touch With Us info@kalpa.news Whatsapp: 9481252093
Discussion about this post