ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ
ಶಿವಮೊಗ್ಗ: ವಿಶ್ವದ ಹಲವು ಭಾಗಗಳಲ್ಲಿ ಸಾವಿರಾರು ಮಂದಿಯನ್ನು ಬಲಿ ಪಡೆದು, ಭಾರತಕ್ಕೂ ಕಾಲಿಟ್ಟಿರುವ ಮಾರಕ ಕರೋನಾ ವೈರಸ್ ಭೀತಿ ಜಿಲ್ಲೆಗೂ ಕಾಲಿಟ್ಟಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆತಂಕಕ್ಕೆ ಕಾರಣವಾಗಿದೆ.
ಶಿವಮೊಗ್ಗ, ಭದ್ರಾವತಿ, ಸೇರಿದಂತೆ ಜಿಲ್ಲೆಯ ಹಲವು ತಾಲೂಕುಗಳಲ್ಲಿ ಹಾಗೂ ದಾವಣಗೆರೆ ಜಿಲ್ಲೆಗೆ ಸೇರಿದ ಹೊನ್ನಾಳಿಯಲ್ಲೂ ಸಹ ಕರೋನಾ ಭೀತಿ ಸೃಷ್ಠಿಸಿದ್ದು, ಈ ಹಿನ್ನೆಲೆಯಲ್ಲಿ ಮೂಗು ಮುಚ್ಚಿಕೊಳ್ಳುವ ಕ್ಲಿನಿಕಲ್ ಮಾಸ್ಕ್ ಹಾಗೂ ಸ್ಯಾನಿಟೈಸರ್’ಗೆ ಭಾರೀ ಬೇಡಿಕೆ ಕಂಡು ಬಂದಿದೆ.
ಜಿಲ್ಲಾ ಕೇಂದ್ರ ಶಿವಮೊಗ್ಗದಲ್ಲಿ ಕಳೆದ ನಾಲ್ಕೈದು ದಿನಗಳಿಂದ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್’ಗಳ ಬೇಡಿಕೆ ಹೆಚ್ಚಾಗಿದ್ದು, ಹಲವು ಮೆಡಿಕಲ್ ಶಾಪ್’ಗಳಲ್ಲಿ ಇದರ ಮಾರಾಟ ಸಾಮಾನ್ಯಕ್ಕಿಂತಲೂ ನಾಲ್ಕು ಪಟ್ಟು ಹೆಚ್ಚಾಗಿದೆ.
ಜಿಲ್ಲಾ ಹಾಗೂ ತಾಲೂಕು ಕೇಂದ್ರಗಳಲ್ಲಿ ಸಾಮಾನ್ಯವಾಗಿ ಜನಸಾಮಾನ್ಯರು ಮಾಸ್ಕ್ ಬಳಸುವುದು ಕಡಿಮೆಯೇ. ಹೀಗಾಗಿ, ಇದರ ಮಾರಾಟವೂ ಸಹ ತೀರಾ ಕಡಿಮೆಯೇ. ಆದರೆ, ಕರೋನಾ ಕುರಿತಾಗಿ ಜಿಲ್ಲೆಯಲ್ಲಿ ಅನಗತ್ಯ ಆತಂಕದ ಮಾಹಿತಿ ಸೃಷ್ಠಿಯಾಗಿರುವ ಹಿನ್ನೆಲೆಯಲ್ಲಿ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್’ಗೆ ಭಾರೀ ಬೇಡಿಕೆ ಬಂದಿದೆ.
ಈ ಕುರಿತಂತೆ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾದೊಂದಿಗೆ ಮಾತನಾಡಿದ ಶಿವಮೊಗ್ಗದ ರಾಯಲ್ ಮೆಡಿಕಲ್ಸ್’ನ ಲೋಹಿತ್, ಒಂದಷ್ಟು ಬೇಡಿಕೆಯಿರುವುದು ಹೌದು. ಆದರೆ, ಈಗ ಹಲವು ಶಾಲೆಗಳಲ್ಲಿ ಮಕ್ಕಳಿಗೆ ಸ್ಯಾನಿಟೈಸರ್ ಬಳಕೆ ಮಾಡಬೇಕು ಎಂದು ಹೇಳಿರುವ ಕಾರಣ ಇದಕ್ಕೆ ಮಕ್ಕಳಿಂದಲೇ ಹೆಚ್ಚಿನ ಬೇಡಿಕೆಯಿದೆ. ಇನ್ನು, ಕ್ಲಿನಿಕಲ್ ಮಾಸ್ಕ್’ಗೆ ಸಾಮಾನ್ಯಕ್ಕಿಂತಲೂ ಕೊಂಚ ಹೆಚ್ಚಿನ ಬೇಡಿಕೆಯಿದ್ದರೂ, ತೀರಾ ಹೆಚ್ಚಾಗಿದೆ ಎಂದು
ಹೇಳಲಾಗುವುದಿಲ್ಲ ಎನ್ನುತ್ತಾರೆ.
ಪ್ರಮುಖವಾಗಿ ಕೈಗಾರಿಕಾ ಪ್ರದೇಶಗಳಲ್ಲಿ ಬಳಸಲಾಗುವ ಎನ್ 1 ಮಾಸ್ಕ್’ಗಳನ್ನು ಹೆಚ್ಚಿನ ಜನ ಕೇಳುತ್ತಿದ್ದು, ಇದರ ಬೆಲೆ ತೀರಾ ಹೆಚ್ಚಾಗಿರುವ ಕಾರಣ ಕೊಳ್ಳುವವರು ಇಲ್ಲ. ಇದರ ಹೊರತಾಗಿ ಕೆಲವು ಮಂದಿ ಮಾತ್ರ ಕ್ಲಿನಿಕಲ್ ಮಾಸ್ಕ್ ಖರೀದಿ ಮಾಡುತ್ತಿದ್ದಾರೆ ಎನ್ನುತ್ತಾರೆ.
ತಮ್ಮ ಅಭಿಪ್ರಾಯ ಹಂಚಿಕೊಂಡ ಆರ್.ಆರ್. ಮೆಡಿಕಲ್ಸ್’ನ ಸಂಜೀವ್ ಅವರು, ನಗರದಲ್ಲಿ ಕರೋನಾ ವೈರಸ್ ಭೀತಿ ಹರಡಿರುವ ಹಿನ್ನೆಲೆಯಲ್ಲಿ ಕ್ಲಿನಿಕಲ್ ಮಾಸ್ಕ್’ಗೆ ಬೇಡಿಕೆ ಹೆಚ್ಚಾಗಿದೆ. ಇದರೊಂದಿಗೆ ಹ್ಯಾಂಡ್ ಸ್ಯಾನಿಟೈಸರ್ ಬಳಕೆಯೂ ಸಹ ಹೆಚ್ಚಾಗಿದ್ದು, ಇದನ್ನೂ ಹೆಚ್ಚಿನ ಮಂದಿ ಕೇಳುತ್ತಿದ್ದಾರೆ. ನಾವೂ ಸಹ ವೈರಸ್ ಬಾರದಂತೆ ಹೇಗೆ ಮುಂಜಾಗ್ರತೆ ವಹಿಸಬೇಕು ಎಂಬ ಕುರಿತಾಗಿ ಗ್ರಾಹಕರಲ್ಲಿ ಮಾಹಿತಿ ನೀಡುವ ಕಾರ್ಯ ಮಾಡುತ್ತಿದ್ದೇವೆ ಎನ್ನುತ್ತಾರೆ.
ಭದ್ರಾವತಿಯಲ್ಲಿ ಹೆಚ್ಚಿನ ಬೇಡಿಕೆ:
ಕರೋನಾ ವೈರಸ್ ಭೀತಿ ತಾಲೂಕು ಕೇಂದ್ರಗಳಲ್ಲೂ ಆತಂಕ ಸೃಷ್ಠಿಸಿದ್ದು, ಈ ಹಿನ್ನೆಲೆಯಲ್ಲಿ ನಗರದಲ್ಲಿ ಮಾಸ್ಕ್ ಹಾಗೂ ಸ್ಯಾನಿಟೈಸರ್’ಗೆ ಭಾರೀ ಬೇಡಿಕೆ ಹೆಚ್ಚಾಗಿದೆ.
ಈ ಕುರಿತಂತೆ ಮಾತನಾಡಿದ ರಂಗಪ್ಪ ಸರ್ಕಲ್’ನ ಮಾರುತಿ ಮೆಡಿಕಲ್ಸ್ ಮಾಲೀಕರು, ಕರೋನಾ ಭೀತಿಯಿಂದಾಗಿ ನಗರದಲ್ಲಿ ಕಳೆದ 15 ದಿನದಿಂದಲೂ ಮಾಸ್ಕ್’ಗೆ ಬೇಡಿಕೆ ಹೆಚ್ಚಾಗಿದೆ. ಕಳೆದ 2 ವಾರದಲ್ಲಿ ಮೂರು ಲೇಯರ್’ನ 500ಕ್ಕೂ ಅಧಿಕ ಮಾಸ್ಕ್ ನಾವು ಮಾರಾಟ ಮಾಡಿದ್ದೇವೆ. ಇಂದು ಒಂದೇ ದಿನ ನಾವು 100ಕ್ಕೂ ಅಧಿಕ ಮಾಸ್ಕ್ ಮಾಡಿದ್ದೇವೆ. ಅಲ್ಲದೇ, ಒಂದು ವಾರದಿಂದ ಹ್ಯಾಂಡ್ ಸ್ಯಾನಿಟೈಸರ್’ಗೂ ಸಹ ಬೇಡಿಕೆ ಹೆಚ್ಚಾಗಿದ್ದು, ನಮ್ಮಲ್ಲಿ ಎರಡೂ ವಸ್ತುಗಳು ಖಾಲಿಯಾಗಿವೆ ಎನ್ನುತ್ತಾರೆ.
ಬೇಡಿಕೆ ಹೆಚ್ಚಾಗಿರುವ ಕಾರಣ ಬೆಲೆಯೂ ಸಹ ಹೆಚ್ಚಾಗಿದ್ದು, ಅಗತ್ಯಕ್ಕೆ ತಕ್ಕಂತೆ ಪೂರೈಕೆಯೂ ಸಹ ಇಲ್ಲವಾಗಿದೆ ಎನ್ನುತ್ತಾರೆ.
ಇನ್ನು, ಪ್ರತಿಷ್ಠಿತ ಅಪೋಲೋ ಮೆಡಿಕಲ್ಸ್’ನಲ್ಲಿ ನಮಗೆ ದೊರೆತ ಮಾಹಿತಿಯಂತೆ, 15 ದಿನದಿಂದ ಬೇಡಿಕೆ ಹೆಚ್ಚಾಗಿದ್ದು, ನಾಲ್ಕೈದು ದಿನದಿಂದ ಇದು ಮತ್ತಷ್ಟು ಅಧಿಕವಾಗಿದೆ. ಪ್ರಮುಖವಾಗಿ ಖಾಸಗಿ ಶಾಲೆಗಳಲ್ಲಿ ಮಕ್ಕಳು ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್ ತರಬೇಕು ಎಂದು ಹೇಳಿರುವ ಹಿನ್ನೆಲೆಯಲ್ಲಿ ಶಾಲಾ ಮಕ್ಕಳ ಪೋಷಕರೇ ಹೆಚ್ಚಾಗಿ ಕೇಳುತ್ತಿದ್ದಾರೆ. ಆದರೆ, ಬೇಡಿಕೆಗೆ ತಕ್ಕಂತೆ ಇವರಿಗೂ ಸಹ ಪೂರೈಕೆಯಿಲ್ಲ ಎಂದು ತಿಳಿದುಬಂದಿದೆ.
ಸ್ಟಾಕ್ ವ್ಯಾಪಾರಸ್ಥರ ಲಾಭಿ: ದುಪ್ಪಟ್ಟು ಬೆಲೆಗೆ ಮಾರಾಟ! ಕೃತಕ ಅಭಾವ ಸೃಷ್ಠಿ
ಕರೋನಾದ ಅನಗತ್ಯ ಭೀತಿಯಿಂದಾಗಿ ಜಿಲ್ಲೆಯಲ್ಲಿ ಕ್ಲಿನಿಕಲ್ ಮಾಸ್ಕ್ ಹಾಗೂ ಹ್ಯಾಂಡ್ ಸ್ಯಾನಿಟೈಸರ್’ಗೆ ಬೇಡಿಕೆ ಹೆಚ್ಚಾಗಿರುವ ಬೆನ್ನಲ್ಲೇ, ಇದರ ಹೋಲ್’ಸೇರ್ ಮಾರಾಟಗಾರರು ಕೃತಕ ಅಭಾವ ಸೃಷ್ಠಿಸಿದ್ದು, ಇದರು ರೀಟೈಲ್ ವ್ಯಾಪಾರಸ್ಥರಿಗೆ ಹಾಗೂ ಸಾರ್ವಜನಿಕರಿಗೆ ತೊಂದರೆಯಾಗಿ ಪರಿಣಮಿಸಿದೆ.
ಈ ಕುರಿತಂತೆ ಮಾರುಕಟ್ಟೆಯಲ್ಲಿ ಕಲ್ಪ ನ್ಯೂಸ್ ಡಿಜಿಟಲ್ ಮೀಡಿಯಾ ಸಂಗ್ರಹಿಸಿರುವ ಮಾಹಿತಿಯಂತೆ, ಈ ಎರಡೂ ವಸ್ತುಗಳ ಬೇಡಿಕೆ ಹೆಚ್ಚಾದಂತೆ ಹೋಲ್’ಸೇರ್ ಮಾರಾಟಗಾರರು ಕೃತಕ ಅಭಾವ ಸೃಷ್ಠಿಸಿದ್ದು, ಅಗತ್ಯವಿರುವ ರೀಟೈಲ್ ಮಾರಾಟಗಾರರಿಗೆ ದುಪ್ಪಟ್ಟು ಬೆಲೆಗೆ ಮಾರಾಟ ಮಾಡುತ್ತಿದ್ದಾರೆ ಎಂಬ ಮಾಹಿತಿ ದೊರಕಿದೆ.
ಸಾಮಾನ್ಯವಾಗಿ ಕ್ಲಿನಿಕಲ್ ಮಾಸ್ಕ್ ರೀಟೈಲ್ ಮಾರಾಟ ದರ 5 ರೂ. ಇರುತ್ತದೆ. ಇದನ್ನು ಹೋಲ್’ಸೇಲ್ ದರದಲ್ಲಿ ಖರೀದಿ ಮಾಡಿದರೆ 2.5 ರೂ.ನಿಂದ 3.5 ರೂ.ವರೆಗೂ ದೊರೆಯುತ್ತದೆ. ಆದರೆ, ಪ್ರಸ್ತುತ ರೀಟೈಲ್ ಮಾರಾಟಗಾರರಿಗೇ ಒಂದು ಮಾಸ್ಕ್’ಗೆ 10ರಿಂದ 20 ರೂ.ವರೆಗೂ ನೀಡುವಂತೆ ಹೋಲ್’ಸೇಲ್ ಮಾರಾಟಗಾರರು ಒತ್ತಡ ಹೇರುತ್ತಿದ್ದಾರೆ ಎಂಬ ಅಂಶ ದೊರೆತಿದೆ. ಹೀಗಾಗಿ, ರೀಟೈಲ್ ಮಾರಾಟದಲ್ಲಿ ಮಾಸ್ಕ್’ಗಳು 30ರಿಂದ 50 ರೂ.ಗಳವರೆಗೂ ಮಾರಾಟವಾಗುತ್ತಿದೆ.
ಜನರಲ್ಲಿನ ಆತಂಕವನ್ನು ಬಂಡವಾಳವನ್ನಾಗಿ ಮಾಡಿಕೊಂಡ ಹೋಲ್’ಸೇಲ್ ಮಾರಾಟಗಾರರು ಇಂತಹ ಕೃತ್ಯಕ್ಕೆ ಇಳಿದಿರುವುದನ್ನು ಜಿಲ್ಲಾಡಳಿತ ಹಾಗೂ ಜಿಲ್ಲಾ ಆರೋಗ್ಯ ಇಲಾಖೆ ಗಂಭೀರವಾಗಿ ಪರಿಗಣಿಸಿ, ಸೂಕ್ತ ಕ್ರಮ ಕೈಗೊಳ್ಳಲು ಮುಂದಾಗಬೇಕಿದೆ.
ಜಿಲ್ಲೆಯಲ್ಲಿ ಕರೋನಾ ವೈರಸ್? ಜಿಲ್ಲಾಧಿಕಾರಿಗಳು ಹೇಳಿದ್ದೇನು?
ಜಿಲ್ಲೆಯಲ್ಲಿ ಇದುವರೆಗೆ ಕರೋನಾ ವೈರಸ್ನ ಯಾವುದೇ ಪ್ರಕರಣ ಪತ್ತೆಯಾಗಿಲ್ಲ. ಶಂಕಿತ ವೈರಸ್ ಪೀಡಿತರ ಮೇಲೆ ನಿಗಾ ಇರಿಸಲಾಗಿದೆ. ಕರೋನಾ ವೈರಸ್ ಪೀಡಿತ ದೇಶಗಳಿಗೆ ಪ್ರವಾಸ ಕೈಗೊಂಡು ಜಿಲ್ಲೆಗೆ ಆಗಮಿಸಿರುವವರನ್ನು ಸೂಕ್ಷ್ಮ ನಿಗಾದಲ್ಲಿರಿಸಲಾಗಿದೆ. ಅವರಲ್ಲಿ ಕರೋನಾ ವೈರಸ್ ಪತ್ತೆಯಾಗಿರಿಸದಿದ್ದರೂ, ನಾಲ್ಕು ವಾರಗಳ ಕಾಲ ನಿಗಾದಲ್ಲಿರಿಸಲಾಗುವುದು. ಕರೋನಾ ವೈರಸ್ ಪತ್ತೆಯಾಗಿರುವ ದೇಶಗಳಿಗೆ ಸಧ್ಯಕ್ಕೆ ಪ್ರವಾಸ ಕೈಗೊಳ್ಳದಂತೆ ನಾಗರಿಕರಿಗೆ ಸಲಹೆ ನೀಡಲಾಗಿದೆ. ವಿದೇಶದಿಂದ ಆಗಮಿಸಿದ ವ್ಯಕ್ತಿಗಳಲ್ಲಿ ಶೀತ, ನೆಗಡಿ, ಕೆಮ್ಮು, ಜ್ವರ ಇತ್ಯಾದಿ ರೋಗ ಲಕ್ಷಣಗಳು ಕಂಡು ಬಂದರೆ ಸ್ವಯಂ ಚಿಕಿತ್ಸೆ ನಡೆಸದೆ ಆಸ್ಪತ್ರೆಗೆ ಬಂದು ದಾಖಲಾಗಬೇಕು.
ಆತಂಕ ಪಡುವ ಅಗತ್ಯವಿಲ್ಲ. ಕರೋನಾ ವೈರಸ್ ಹರಡದಂತೆ ಎಲ್ಲಾ ಮುಂಜಾಗರೂಕತಾ ಕ್ರಮಗಳನ್ನು ಕೈಗೊಳ್ಳಲಾಗುತ್ತಿದೆ. ಈ ಕುರಿತು ಸಾರ್ವಜನಿಕರು ಯಾವುದೇ ಆತಂಕಕ್ಕೆ ಒಳಗಾಗುವ ಅಗತ್ಯವಿಲ್ಲ. ಕರೋನಾ ವೈರಸ್ ಕುರಿತಾಗಿ ಸಾಮಾಜಿಕ ಜಾಲತಾಣಗಳಲ್ಲಿ ಸುಳ್ಳು ಸುದ್ದಿ, ವದಂತಿಗಳನ್ನು ಹರಡುವವರ ವಿರುದ್ಧ ಕ್ರಿಮಿನಲ್ ಮೊಕದ್ದಮೆ ದಾಖಲಿಸಲಾಗುವುದು.
-ಕೆ.ಬಿ. ಶಿವಕುಮಾರ್, ಜಿಲ್ಲಾಧಿಕಾರಿಗಳು
(ವರದಿ: ಕೆ.ಎಸ್. ಸುಧೀಂದ್ರ, ಭದ್ರಾವತಿ)
Get in Touch With Us info@kalpa.news Whatsapp: 9481252093
Discussion about this post