ಭದ್ರಾವತಿ: ಜನಪ್ರಿಯತೆಗಾಗಿ ಸಾಹಿತ್ಯಗಳನ್ನು ರಚಿಸದೆ, ಜನಪರ ಭಾವನೆಗಳಿಗೆ ಧ್ವನಿಯಾಗಿ ಸಾಹಿತ್ಯ ರಚಿಸಿದಾಗ ಮಾತ್ರ ಉತ್ತಮ ಸಾಹಿತ್ಯ ಹೊರ ಹೊಮ್ಮಲು ಸಾದ್ಯ ಎಂದು ನಗರದ ಪ್ರಸೂತಿ ತಜ್ಞೆ ಡಾ.ವೀಣಾಭಟ್ ಕರೆ ನೀಡಿದರು.
ನಯನ ಆಸ್ಪತ್ರೆಯ ಅನಸೂಯಮ್ಮ ಐತಾಳ್ ಸಭಾಂಗಣದಲ್ಲಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ಏರ್ಪಡಿಸಿದ್ದ ಸಾಹಿತ್ಯ ಪರಿಷತ್ತು ಸಂಸ್ಥಾಪನಾ ದಿನಾಚರಣೆ ಕಾರ್ಯಕ್ರಮವನ್ನು ಗಿಡಕ್ಕೆ ನೀರೆರೆಯುವ ಮೂಲಕ ಉದ್ಘಾಟಿಸಿ ಅವರು ಮಾತನಾಡಿದರು.
ಉತ್ತಮ ಸಮಾಜ ನಿರ್ಮಾಣದಲ್ಲಿ ಸಾಹಿತ್ಯದ ಪಾತ್ರ ಗಣನೀಯವಾಗಿರುತ್ತದೆ. ಮಾನವನು ಪರಿಸರದ ಕುರಿತ ಕಾಳಜಿ ಹೊಂದಿರುವ ಸಾಹಿತ್ಯವೇ ನಿಜವಾದ ಸಾಹಿತ್ಯವಾಗಲು ಸಾಧ್ಯ. ಸಾಹಿತಿಗಳು ನಾಡು ನುಡಿ ಬಿಂಬಿಸುವ ಕಾರ್ಯ ಮಾಡಿರುವ ಹಿನ್ನೆಲೆಯಲ್ಲಿ ಪ್ರತಿಯೊಬ್ಬರು ಕಾಪಾಡುವಂತಾಗಬೇಕು ಎಂದರು.
ನ್ಯೂಟೌನ್ ಸರ್.ಎಂ.ವಿ. ಕಾಲೇಜು ಕನ್ನಡ ಸಹ ಪ್ರಾಧ್ಯಾಪಕ ಡಾ.ಸಿ.ಎಸ್. ಷಣ್ಮುಖಪ್ಪ ಮಾತನಾಡಿ, ರಾಜಪ್ರಭುತ್ವ, ಆಂಗ್ಲರ ಆಳ್ವಿಕೆ ನಡುವೆ ಅನೇಕ ಎಡರು, ತೊಡರುಗಳನ್ನು ಸಮರ್ಥವಾಗಿ ಎದುರಿಸಿ ಕನ್ನಡ ಸಾಹಿತ್ಯ ಪರಿಷತ್ ಬೆಳೆದುಬಂದಿದೆ. ಇದರ ಬೆಳವಣಿಗೆಗೆ ಅಂದಿನ ಬೇಂದ್ರೆ, ಡಿವಿಜಿ ಕುವೆಂಪು, ನಂಜಯ್ಯ, ಬಿ.ಎಂ. ಶ್ರೀ ಮುಂತಾದ ಅನೇಕ ಮಹನೀಯರ ಕೊಡುಗೆ ಅಪಾರವದುದು. ರನ್ನ, ಪಂಪ, ಕುಮಾರವ್ಯಾಸ ಮುಂತಾದ ಹಳೇಗನ್ನಡ ಕನ್ನಡ ಸಾಹಿತ್ಯವನ್ನು ನವ್ಯಗನ್ನಡಕ್ಕೆ ಪರಿವರ್ತಿಸಿ ಪುಸ್ತಕ ರೂಪದಲ್ಲಿ ಮುದ್ರಿಸಿ ಓದುಗರಿಗೆ ಕನ್ನಡ ಸಾಹಿತ್ಯ ಪರಿಷತ್ ನೀಡಿರುವುದು ಹೆಮ್ಮೆಯ ಸಂಗತಿಯಾಗಿದೆ ಎಂದರು.
ಸಾಹಿತ್ಯಗಳನ್ನು ಓದುವುದರೊಂದಿಗೆ ಅದನ್ನು ಅರ್ಥೈಸಿಕೊಂಡಲ್ಲಿ ಮಾತ್ರ ಇಂದಿನ ಅನೇಕ ಸಮಸ್ಯೆಗಳಿಗೆ ಪರಿಹಾರ ದೊರಕುತ್ತದೆ. ಆದರೆ ನಮ್ಮಲ್ಲಿ ಕನ್ನಡ ಪುಸ್ತಕ ಓದುವ ಮನಃಸ್ಥಿತಿಯಿಂದ ದೂರವಾಗುತ್ತಿರುವುದು ವಿಷಾದನೀಯ. ಬರೆದ ಸಾಹಿತ್ಯವೆಲ್ಲ ಉಳಿಯುವುದಿಲ್ಲ. ಯಾವ ಸಾಹಿತ್ಯ ಜನಪರಕಾಳಜಿಯಿಂದ ರಚಿತವಾಗಿರುತ್ತದೆಯೋ ಅಂತಹ ಸಾಹಿತ್ಯ ಕೃತಿ ಜನಮಾನಸದಲ್ಲಿ ಚಿರಸ್ಥಾಯಿಯಾಗಿ ಉಳಿಯುತ್ತದೆ ಎಂದರು.
ಕಸಾಪ ತಾಲೂಕು ಅಧ್ಯಕ್ಷ ಬೇಲಿಮಲ್ಲೂರು ಎಂ.ನಾಗಪ್ಪ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು. ಗೌರವ ಕಾರ್ಯದರ್ಶಿ ಅಪರಂಜಿ ಶಿವರಾಜ್, ಅಪೇಕ್ಷ ಮಂಜುನಾಥ್ ಮುಂತಾದವರು ವೇದಿಕೆಯಲ್ಲಿದ್ದರು.
ಇದೇ ಸಂದರ್ಭದಲ್ಲಿ ಎಚ್.ಎಸ್.ಗುರುರಾಜರಾವ, ಕೆ.ಎನ್. ಭೈರಪ್ಪಗೌಡ, ಸಿದ್ಧಲಿಂಗಯ್ಯ, ರಾಜಶೇಖರ್, ಬಸನ ಗೌಡ ಮಾಳಗಿ, ವಿರೂಪಾಕ್ಷಪ್ಪ, ಪರಮೇಶ್ವರಪ್ಪ, ಶೈಲೇಶ್ಕೋಠಿ, ರೂಪಾರಾವ್ ಮುಂತಾದವರನ್ನು ಸನ್ಮಾನಿಸಿ ಗೌರವಿಸಲಾಯಿತು.
(ವರದಿ: ಆರ್.ವಿ. ಕೃಷ್ಣ, ಭದ್ರಾವತಿ)
Discussion about this post