ಕಲ್ಪ ಮೀಡಿಯಾ ಹೌಸ್ | ಕೊಪ್ಪಳ |
ಸಮಸ್ಯೆ ಹೇಳಿಕೊಂಡು, ದೂರು ನೀಡಲು ಠಾಣೆಗೆ ಬಂದ ದಲಿತ ಯುವಕನ ಮೇಲೆ ಹಲ್ಲೆ ನಡೆಸಿದ ಆರೋಪದಲ್ಲಿ ಕುಕನೂರು ಪಿಎಸ್’ಐ ಗುರುರಾಜ್ ಅವರನ್ನು ಅಮಾನತು ಮಾಡಲಾಗಿದೆ.
ಏನಿದು ಘಟನೆ? ಆರೋಪವೇನು?
ಗಾಳೆಪ್ಪ ಹಿರೇಮನಿ ಎಂಬವರು ತಮ್ಮ ಸಂಬಂಧಿಕರ ಸಮಸ್ಯೆಯನ್ನು ಹೇಳಿ ನ್ಯಾಯ ಕೊಡಿಸಿ ಎಂದು ಕೇಳಿದ್ದಕ್ಕೆ ಪಿಎಸ್’ಐ ಅವರು ಕೊರಳ ಪಟ್ಟಿ ಹಿಡಿದು, ನೀವು …. ಐದು ನೂರು ರೂಪಾಯಿಗೆ ಚಿಲ್ಲರೆ ಕೆಲಸ ಮಾಡುತ್ತೀರಿ, ನಿಮ್ಮಿಂದ ನಾನು ಕೆಲಸ ಕಲಿಯುವ ಅಗತ್ಯ ಇಲ್ಲ ಎಂದು ಅವಾಚ್ಯ ಶಬ್ದಗಳಿಂದ ಬೈದು ಜಾತಿ ನಿಂದನೆ ಮಾಡಿದ್ದಾರೆ ಎಂದು ಅವರು ಆರೋಪಿಸಿದ್ದರು. ಇದರ ನಡುವೆ ದಲಿತ ಸಮುದಾಯದವರು ನಿನ್ನೆ ರಾತ್ರಿಯಿಂದಲೇ ಠಾಣೆ ಎದರು ಅಮಾನತ್ತಿ ಆಗ್ರಹಿಸಿ ಪ್ರತಿಭಟಿಸಿದ್ದರು.
ಅಮಾನತು ಆದೇಶದಲ್ಲಿ ಏನಿದೆ?
ಪಿಎಸ್’ಐ ಗುರುರಾಜ ಅವರು ದೂರು ಕೊಡಲು ಠಾಣೆಗೆ ಗಾಳಪ್ಪ ರವರು ತಮ್ಮ ಸಂಬಂಧಿಕರ ಕೌಟುಂಬಿಕ ವಿಷಯವಾಗಿ ದೂರು ನೀಡಲು ಠಾಣೆಗೆ ಬಂದಾಗ ಅವರ ದೂರನ್ನು ಸರಿಯಾಗಿ ಕೇಳದೇ ಅವರೊಂದಿಗೆ ಮಾತನಾಡುವಾಗ ಸಿಟ್ಟಿನ ಭರದಲ್ಲಿ ಗಾಳಪ್ಪ ಅವರನ್ನು ತಳ್ಳಾಡಿ, ಹೊಡೆದು ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಠಾಣೆಯ ಸಿಸಿಟಿವಿಯ ದೃಶ್ಯಾವಳಿಗಳಿಂದ ಕಂಡುಬಂದಿದ್ದು, ಇದು ಕೆಸಿಎಸ್ (ನಡತೆ) ನಿಯಮಗಳು 2021 ರ ನಿಯಮ 3 (1) ರ ಸೂಚನೆಗಳನ್ನು ಉಲ್ಲಂಘಿಸಿ, ನಿಮ್ಮ ಕರ್ತವ್ಯದಲ್ಲಿ ಅತೀವ ನಿರ್ಲಕ್ಷತನ, ಬೇಜವಾಬ್ದಾರಿತನ ಹಾಗೂ ಕರ್ತವ್ಯಲೋಪವೆಸಗಿರುವುದು ಕಂಡು ಬಂದಿರುತ್ತದೆ ಎಂದು ಯಲಬುರ್ಗಾ ವೃತ್ತದ ಸಿಪಿಐ ಅವರು ನೀಡಿದ ವರದಿಯ ಆಧಾರದ ಮೇಲೆ ಅಮಾನತ್ತು ಮಾಡಲಾಗಿದೆ ಎಂದು ತಿಳಿಸಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news






















