ದಾವಣಗೆರೆ: ಕೇಂದ್ರ ಹಾಗೂ ರಾಜ್ಯ ಸರ್ಕಾರದ ಅನುದಾನದಿಂದ ನೀಡಲಾಗುವ ಎಲ್ಲ ಸೌಲಭ್ಯಗಳು ಎಲ್ಲ ಅರ್ಹ ಜನತೆಗೆ ತಲುಪುವಂತೆ ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಾರ್ಯ ನಿರ್ವಹಿಸಬೇಕು. ನಿಗದಿತ ಗುರಿ ತಲುಪಲು ಶ್ರಮಿಸಬೇಕೆಂದು ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಸಚಿವ ಹಾಗೂ ಜಿಲ್ಲಾ ಉಸ್ತುವಾರಿ ಸಚಿವ ಕೆ.ಎಸ್. ಈಶ್ವರಪ್ಪ ಹೇಳಿದರು.
ಜಿಲ್ಲಾ ಪಂಚಾಯತ್ ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ಗ್ರಾಮೀಣಾಭಿವೃದ್ದಿ ಮತ್ತು ಪಂಚಾಯತ್ ರಾಜ್ ಇಲಾಖೆಯ ಪ್ರಗತಿ ಪರಿಶೀಲನಾ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿ, ಇಂದಿನ ಆರ್ಡಿಪಿಆರ್ ಪ್ರಗತಿ ವರದಿ ಪ್ರಕಾರ ಜಿಲ್ಲೆಯು ಪ್ರಗತಿ ಸಾಧನೆಯಲ್ಲಿ ಕೊಂಚ ಹಿಂದಿದೆ. ಮುಂದಿನ ದಿನಗಳಲ್ಲಿ ಜಿಲ್ಲಾಧಿಕಾರಿ, ಜಿ.ಪಂ ಸಿಇಓ ಇವರ ಜೊತೆ ಚರ್ಚಿಸಿ, ಗುರಿ ಸಾಧನೆಯೆಡೆ ಕಾರ್ಯೋನ್ಮುಖವಾಗಬೇಕು. ಅಕ್ಟೋಬರ್ 11 ರಂದು ನಡೆಯುವ ಕೆಡಿಪಿ ಸಭೆಯಲ್ಲಿ ಎಲ್ಲ ಇಲಾಖೆಗಳ ಪ್ರಗತಿಯನ್ನು ಪರಿಶೀಲಿಸುತ್ತೇನೆ. ಆ ವೇಳೆಗೆ ನಿಗದಿತ ಗುರಿ ತಲುಪಲು ಇಂದಿನಿಂದಲೇ ಶ್ರಮಿಸಬೇಕೆಂದರು.
ಈ ಹಿಂದೆ ನಾನು ನೀರಾವರಿ ಸಚಿವರಾಗಿದ್ದಾಗ ಸಿರಿಗೆರೆ ಶ್ರೀಗಳು ಈ ಭಾಗದ ಕೆರೆಗಳನ್ನು ತುಂಬಿಸಲು ಆದೇಶಿಸಿದ್ದರು. ಈ ಬಗ್ಗೆ ಸಚಿವ ಸಂಪುಟದಲ್ಲಿ ಅನುಮೋದನೆ ಪಡೆದು ಕಾರ್ಯ ನಿರ್ವಹಿಸಲಾಗುವುದು ಎಂದ ಅವರು, ಸ್ನೇಹಕ್ಕೆ ಮತ್ತೊಂದು ಹೆಸರು ದಾವಣಗೆರೆಯಾಗಿದ್ದು, ಎಲ್ಲ ಜನಪ್ರತಿನಿಧಿಗಳು, ಅಧಿಕಾರಿಗಳು, ಶರಣರ, ಮಠಮಾನ್ಯಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಅಭಿವೃದ್ಧಿ ಕಾರ್ಯಗಳನ್ನು ಜಿಲ್ಲೆಯಲ್ಲಿ ಕೈಗೊಳ್ಳುತ್ತೇನೆ ಎಂದರು.
ಜಿಲ್ಲಾಧಿಕಾರಿ ಮಹಾಂತೇಶ್ ಬೀಳಗಿ ಮಾತನಾಡಿ, ಜಿಲ್ಲೆಯಲ್ಲಿರುವ ಹಲವು ಬೋರ್ವೆಲ್ಗಳಿಗೆ ರೀಚಾರ್ಜ್ ಆಗದ ಕಾರಣ ದಾವಣಗೆರೆಯ 13 ಗ್ರಾಮಗಳು, ಹೊನ್ನಾಳಿ 2, ಜಗಳೂರು ತಾಲ್ಲೂಕಿನ 80 ಮತ್ತು ಚನ್ನಗಿರಿಯ 1 ಗ್ರಾಮ ಸೇರಿದಂತೆ 101 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಸರಬರಾಜು ಮಾಡಲಾಗುತ್ತಿದೆ. ಜಗಳೂರಿನಲ್ಲಿ ಮಳೆಯೇ ಆಗದ ಕಾರಣ ಬರದ ಸ್ಥಿತಿ ಇದ್ದು, ಇಲ್ಲಿನ ರಾಸುಗಳಿಗೆ ಮೇವಿನ ಕೊರತೆ ಎದುರಾಗಿದೆ. ಮಳೆಗಾಲಕ್ಕೂ ಮುನ್ನ ಜಗಳೂರು ತಾಲ್ಲೂಕಿನ ಮೂರು ಸ್ಥಳಗಳಲ್ಲಿ ಗೋಶಾಲೆ ಸ್ಥಾಪಿಸಿ ಮೇವು ಒದಗಿಸಲಾಗುತ್ತಿತ್ತು. ಸದ್ಯಕ್ಕೆ ಹಿರೇಮಲ್ಲನಹೊಳೆ ಗ್ರಾಮದಲ್ಲಿ ಮಾತ್ರ ಒಂದು ಗೋಶಾಲೆ ಕಾರ್ಯ ನಿರ್ವಹಿಸುತ್ತಿದೆ ಎಂದರು.
ಜಗಳೂರು ಶಾಸಕರಾದ ಎಸ್.ವಿ.ರಾಮಚಂದ್ರ ಪ್ರತಿಕ್ರಿಯಿಸಿ, ತಾಲ್ಲೂಕಿನಲ್ಲಿ ಮಳೆಯೇ ಆಗದೆ ಬರ ಸ್ಥಿತಿ ಉಂಟಾಗಿದೆ. ಆದ್ದರಿಂದ ಕೊಡದಗುಡ್ಡ, ಹಿರೇಮಲ್ಲನಹೊಳೆ ಸೇರಿದಂತೆ ಮೂರು ಕಡೆಯೂ ಗೋಶಾಲೆ ಮುಂದುವರೆಸಬೇಕು ಹಾಗೂ ಅವಶ್ಯವಿರುವೆಡೆ ಮೇವು ಬ್ಯಾಂಕ್ ಕೂಡ ಸ್ಥಾಪಿಸಬೇಕು ಎಂದು ಮನವಿ ಮಾಡಿದರು.
ಸಚಿವರು, ಶಾಸಕರು ಹೇಳಿದಂತೆ ಗೋಶಾಲೆಗಳನ್ನು ಮುಂದುವರೆಸಿಕೊಂಡು ಹೋಗುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದರು.
ಜಿ ಪಂ ವ್ಯವಸ್ಥಾಪಕ ಬಸವರಾಜ್ ಮಾತನಾಡಿ, ಸ್ವಚ್ಚಭಾರತ್ ಯೋಜನೆಯಡಿ 2017 ರಲ್ಲಿ ಬಯಲುಶೌಚ ಮುಕ್ತ ಜಿಲ್ಲೆಯನ್ನಾಗಿ ಘೋಷಿಸಿದ ನಂತರ ಎಲ್ಓಬಿ ಅಡಿಯಲ್ಲಿ 8634 ಶೌಚಾಲಯ ನಿರ್ಮಿಸುವ ಗುರಿಯಲ್ಲಿ 8605 ಕ್ಕೆ ಕಾರ್ಯಾದೇಶ ನೀಡಲಾಗಿದೆ. 4816 ಧನಾದೇಶ ಆಗಿದ್ದು, 3789 ಬಾಕಿ ಇದೆ ಎಂದು ಮಾಹಿತಿ ನೀಡಿದರು.
ಶೌಚಾಲಯ ನಿರ್ಮಾಣ ಗುರಿ 74 ರಲ್ಲಿ 48 ಪೂರ್ಣಗೊಂಡಿದ್ದು, 26 ನಿರ್ಮಾಣ ಹಂತದಲ್ಲಿದೆ. ಅಂಗನವಾಡಿ ದುರಸ್ತಿ ಹಾಗೂ ಹೊಸ ಶೌಚಾಲಯ ಗುರಿ ತಲುಪಲಾಗಿದೆ ಎಂದು ಮಾಹಿತಿ ನೀಡಿದರು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ಇಲಾಖೆಯ ಆಯುಕ್ತ ವಿಶಾಲ್ ಮಾತನಾಡಿ, ಎಫ್ಟಿಓ ಜನರೇಟ್ ಸಮರ್ಪಕ ಮತ್ತು ಶೀಘ್ರವಾಗಿ ಆಗಬೇಕು. ಇದಾದರೆ ಪಾವತಿ ಪೂರ್ಣವಾದಂತೆ. ಹಾಗೂ ಜಿಯೋಟ್ಯಾಗ್(ಐಹೆಚ್ಹೆಚ್ಎಲ್), ಐಎಂಐಎಸ್ ಮಾಡಬೇಕಿರುವುದು ಅತ್ಯಂತ ಮುಖ್ಯವಾಗಿದ್ದು, ಇದರಲ್ಲಿ ಜಿಲ್ಲೆ ಹಿಂದಿದೆ. ಜಿಯೋಟ್ಯಾಗ್ ಕ್ಷಿಪ್ರಗತಿಯಲ್ಲಿ ಸಾಗಬೇಕು. ದಿನಕ್ಕೆ 100 ರಿಂದ 200 ಜಿಯೋಟ್ಯಾಗ್ ಮಾಡಿ ಮುಗಿಸಬೇಕೆಂದು ಸೂಚಿಸಿದರು.
ಸಚಿವರು ಮಾತನಾಡಿ, ಇದೇ ಪ್ರಥಮ ಬಾರಿಗೆ ನಗರ ಪ್ರದೇಶಗಳಲ್ಲಿ ಶಾಲೆ ಮತ್ತು ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಿಸಲು ಶಾಸಕರಿಗೆ ಅನುದಾನ ನೀಡಲಾಗುತ್ತಿದೆ. ಗ್ರಾಮೀಣ ಪ್ರದೇಶದಲ್ಲಿ ಆರ್ಡಿಪಿಆರ್ ವತಿಯಿಂದ ಸ್ವಚ್ಚಭಾರತ್ ಮಿಷನ್ ಅಡಿಯಲ್ಲಿ ಶಾಲೆಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ರೂ.2 ಲಕ್ಷ, ಅಂಗನವಾಡಿಗಳಲ್ಲಿ ಶೌಚಾಲಯ ನಿರ್ಮಾಣಕ್ಕೆ ರೂ. 40 ಸಾವಿರ ಹಾಗೂ ರಿಪೇರಿಗೆ ಅನುದಾನ ನೀಡಲಾಗುವುದು. ಜಿಲ್ಲೆಯಲ್ಲಿ ಎಷ್ಟು ಶಾಲೆ, ಅಂಗನವಾಡಿಗಳಿಗೆ ಶೌಚಾಲಯ ಹಾಗೂ ಹೆಚ್ಚುವರಿ ಶೌಚಾಲಯ ಬೇಕೆಂದು ಪಟ್ಟಿ ಮಾಡಿ ಕೂಡಲೇ ನೀಡುವಂತೆ ತಿಳಿಸಿದರು. ಹಾಗೂ ಪಿಆರ್ಇಡಿ ಯವರು ಡಿಡಿಪಿಐ ಮತ್ತು ಅಂಗನವಾಡಿಗಳಿಂದ ಪಟ್ಟಿ ಪಡೆದು ಶೌಚಾಲಯ ನಿರ್ಮಾಣದ ಕುರಿತು ಅಂದಾಜು ಮತ್ತು ಯೋಜನೆ ತಯಾರಿಸಿ ನೀಡಬೇಕು. ಹಾಗೂ ಪ್ರಸ್ತುತ ನಿರ್ಮಾಣ ಹಂತದಲ್ಲಿರುವ ಶೌಚಾಲಯಗಳನ್ನು ಅ.15ರೊಳಗೆ ಪೂರ್ಣಗೊಳಿಸುವಂತೆ ತಿಳಿಸಿದರು.
ಶಾಸಕರು ಹಾಗೂ ಮುಖ್ಯಮಂತ್ರಿಗಳ ರಾಜಕೀಯ ಕಾರ್ಯದರ್ಶಿಗಳಾದ ಎಂ.ಪಿ.ರೇಣುಕಾಚಾರ್ಯ ಪ್ರತಿಕ್ರಿಯಿಸಿ, ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗಳಿಗುಣವಾಗಿ ಶೌಚಾಲಯ ನಿರ್ಮಿಸುವುದು ಅವಶ್ಯಕ ಹಾಗೂ ಶೌಚಾಲಯ ಬಳಕೆಗೆ ನೀರಿನ ಲಭ್ಯತೆಯನ್ನು ನೋಡಿಕೊಂಡು ಪೂರೈಸಬೇಕಾಗಿರುತ್ತದೆ ಎಂದರು.
ಗ್ರಾಮೀಣಾಭಿವೃದ್ಧಿ ಇಲಾಖೆಯ ಆಯುಕ್ತ ಪ್ರಿಯಾಂಕ ಮೇರಿ ಫ್ರಾನ್ಸಿಸ್ ಮಾತನಾಡಿ, ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಖಾತರಿ ಯೋಜನೆಯಡಿ ಜಿಲ್ಲೆಯಲ್ಲಿ 2018-19 ನೇ ಸಾಲಿನಲ್ಲಿ 33.87 ಲಕ್ಷ ಮಾನವ ದಿನಗಳ ಗುರಿ ಇದ್ದು, 39.33 ಮಾನವ ದಿನಗಳನ್ನು ಸೃಷ್ಠಿಸಿ ಶೇ.116.18 ಸಾಧನೆ ಮಾಡಲಾಗಿದೆ. 2019-20 ನೇ ಸಾಲಿನಲ್ಲಿ 11,23,500 ಮಾನವ ದಿನಗಳ ಗುರಿಯಲ್ಲಿ ಇಲ್ಲಿಯವರೆಗೆ 3,02,909 ಮಾನವ ದಿನಗಳನ್ನು ಸೃಷ್ಟಿಸಿ ಶೇ.27 ಪ್ರಗತಿ ಸಾಧಿಸಲಾಗಿದೆ. ಅರಣ್ಯ ಇಲಾಖೆ, ರೇಷ್ಮೆ ಮತ್ತು ತೋಟಗಾರಿಕೆ ಇಲಾಖೆಯ ಪ್ರಗತಿ ಕುಂಠಿತವಾಗಿದ್ದು, ಈ ಇಲಾಖೆಗಳ ಮುಖ್ಯಸ್ಥರು ನಿಗದಿತ ಗುರಿ ತಲುಪಲು ಶ್ರಮಿಸಬೇಕು. ಹರಿಹರ ಮತ್ತು ದಾವಣಗೆರೆಯಲ್ಲಿ ನರೇಗಾದಡಿ ಪ್ರಗತಿ ಕಡಿಮೆ ಇದೆ. ನೀರಾವರಿ ಪ್ರದೇಶವಾದರೂ ಹಳ್ಳ, ಶಾಲಾ ಮೈದಾನ ಅಭಿವೃದ್ಧಿ, ಸ್ಮಶಾನ ಅಭಿವೃದ್ಧಿ ಸೇರಿದಂತೆ ಇತರೆ ಅಭಿವೃದ್ಧಿ ಕಾಮಗಾರಿ ಕೈಗೊಂಡು ಪ್ರಗತಿ ಸಾಧಿಸಬೇಕು. ಜಗಳೂರಿನಲ್ಲಿ ಪ್ರಗತಿ ಹೆಚ್ಚಿದೆ. 2019-20 ನೇ ಸಾಲಿಲ್ಲಿನ 209.4 ಲಕ್ಷ ಕೂಲಿ ಮತ್ತು 2753.95 ಲಕ್ಷ ಒಟ್ಟು 2963.35 ಲಕ್ಷ ಪಾವತಿ ಬಾಕಿ ಇದೆ ಎಂದರು.
ಆದರೆ ಮುಖ್ಯವಾಗಿ ಕೂಲಿ ಮತ್ತು ಸಾಮಗ್ರಿ ಅನುಪಾತವನ್ನು 60:40 ಇರಬೇಕಿದ್ದು, ಎಲ್ಲ ತಾಲ್ಲೂಕುಗಳಲ್ಲಿ ಸಾಮಗ್ರಿ ಅನುಪಾತ 40 ಕ್ಕಿಂತ ಹೆಚ್ಚಿದ್ದು, ಕೇಂದ್ರದ ಪೋರ್ಟಲ್ನಲ್ಲೇ ಲಾಕ್ ಆಗಿದೆ. ಕೇಂದ್ರಕ್ಕೆ ಜಿಲ್ಲೆಯ ವರದಿ ಕುರಿತು ಮನವರಿಕೆ ಮಾಡಿ ಲಾಕ್ ತೆಗಿಸಿ ಪಾವತಿಸಬೇಕಿದೆ. ಈ ಅನುಪಾತ ಸರಿಹೊಂದುವಂತೆ ಕಾಮಗಾರಿ ನಿರ್ವಹಿಸುವ ಕುರಿತು ತಾಲ್ಲೂಕುಗಳ ಇಓಗಳು ಹೆಚ್ಚಿನ ಗಮನ ಮತ್ತು ಜವಾಬ್ದಾರಿ ವಹಿಸಬೇಕೆಂದರು. ಹಾಗೂ ಜಲಶಕ್ತಿ ಅಭಿಯಾನದಡಿ ನೀಡಲಾದ ಗುರಿಯನ್ನು ಸೆ.30 ರೊಳಗೆ ಸಾಧಿಸಬೇಕು.
ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಎಇ ರಾಜು ಮಾತನಾಡಿ, ಎನ್ಆರ್ಡಿಡಬ್ಲ್ಯುಪಿ ಅಡಿಯಲ್ಲಿ 406 ಮುಂದುವರೆದ ಕಾಮಗಾರಿಗಳ ಪೈಕಿ 347 ಕಾಮಗಾರಿಗಳನ್ನು ಪೂರ್ಣಗೊಳಿಸಿ 59 ಬಾಕಿ ಇದೆ. ಎಸ್ಡಿಪಿ ಅಡಿಯಲ್ಲಿ 56 ಮುಂದುವರೆದ ಕಾಮಗಾರಿಗಳ ಪೈಕಿ 49 ಪೂರ್ಣಗೊಂಡು 7 ಬಾಕಿ ಇದೆ. ಇದರ 66 ಕಾಮಗಾರಿಗಳಲ್ಲಿ 28 ಕಾಮಗಾರಿಗಳು ಬಹುಗ್ರಾಮ ಯೋಜನೆ ಹಾಗೂ ಬಹುಗ್ರಾಮ ವಾರ್ಷಿಕ ಯೋಜನೆಯಲ್ಲಿರುತ್ತವೆ ಎಂದು ಮಾಹಿತಿ ನೀಡಿದರು.
ಸಚಿವರು ಪ್ರತಿಕ್ರಿಯಿಸಿ, ಮುಂದುವರೆದ ಕಾಮಗಾರಿ ಪ್ರಗತಿ ಕುಂಠಿತವಾಗಿದೆ. ಅಕ್ಟೋಬರ್ ಅಂತ್ಯದೊಳಗೆ ಮುಗಿಸಬೇಕು. ಒತ್ತಡ ಮಾಡಿಕೊಳ್ಳದೇ ಉತ್ತಮ ಗುಣಮಟ್ಟದ ಕೆಲಸ ನಿರ್ವಹಿಸಬೇಕು. ಹಾಗೂ ಇಂಡೆಂಟ್ ಮಾಡಿದ ತಕ್ಷಣ ಇಲಾಖೆಯಿಂದ ಹಣ ಮಂಜೂರಾಗಲಿದ್ದು, ಆದಷ್ಟು ಬೇಗ ಪಾವತಿ ಮಾಡಬೇಕು ಎಂದರು.
ಆಯುಕ್ತರು ಮಾತನಾಡಿ, ಈ ವರ್ಷದಿಂದ ಜಲ ಜೀವನ್ ಮಿಷನ್ ಆರಂಭವಾಗಲಿದೆ. ಇದರ ಆಡಿಟ್ ಕಟ್ಟುನಿಟ್ಟಾಗಿರುವುದರಿಂದ ಜಾಗೃತೆಯಿಂದ ಕೆಲಸ ಮಾಡಬೇಕೆಂದರು.
ದಾವಣಗೆರೆ ಜಿಲ್ಲೆಯಲ್ಲಿ ಬಹುಗ್ರಾಮ ಕುಡಿಯುವ ನೀರು ಯೋಜನೆಯಡಿ 1,134 ಗ್ರಾಮಗಳನ್ನು ತಲುಪುವ 36 ಯೋಜನೆಗಳು ಅನುಮೋದನೆಗೊಂಡಿದ್ದು, 24 ಯೋಜನೆ ಪೂರ್ಣಗೊಂಡಿದೆ. 6 ಪ್ರಗತಿಯಲ್ಲಿದೆ ಎಂದು ಮಾಹಿತಿ ನೀಡಿದರು.
ಶಾಸಕ ಎಸ್.ವಿ.ರಾಮಚಂದ್ರ ಪ್ರತಿಕ್ರಿಯಿಸಿ, ರಾಜ್ಯದ ಅನೇಕ ಕಡೆಗಳಲ್ಲಿ ಅತಿವೃಷ್ಟಿಯಾಗಿದ್ದರೂ ಜಗಳೂರಿನಲ್ಲಿ ಮಾತ್ರ ಮಳೆ ಬಂದಿಲ್ಲ. 8 ವರ್ಷವಾದರೂ ಬಹುಗ್ರಾಮ ಯೋಜನೆ ಕಾರ್ಯರೂಪಕ್ಕೆ ಬಂದಿಲ್ಲ. 1000 ಅಡಿ ಕೊರೆದರೂ ಬೋರ್ಲ್ಲಿ ನೀರು ಸಿಗುತ್ತಿಲ್ಲ. ಈಗಲೂ ತಾಲ್ಲೂಕಿನ 54 ಗ್ರಾಮಗಳಿಗೆ ಟ್ಯಾಂಕರ್ ಮೂಲಕ ಕುಡಿಯುವ ನೀರು ಪೂರೈಸಲಾಗುತ್ತಿದ್ದು, ಈ ನೀರಿನಲ್ಲಿ ಓತಿಕೇತ, ಹುಳ, ಉಪ್ಪಡಿ ಸೇರಿರುತ್ತವೆ. ಹಾಗೂ ಇಲ್ಲಿನ ಇಂಜಿನಿಯರು ಕೂಡ ಸಮರ್ಪಕವಾಗಿ ಕರ್ತವ್ಯ ನಿರ್ವಹಿಸುತ್ತಿಲ್ಲವೆಂದು ದೂರಿದರು.
ಆಯುಕ್ತರು ಪ್ರತಿಕ್ರಿಯಿಸಿ, ತಾಲ್ಲೂಕಿನ ಇಓ ಗಳು ಎಲ್ಲ ಕಾಮಗಾರಿಗಳ ಬಗ್ಗೆ ಮಾಹಿತಿ ಪಡೆದು ಉಸ್ತುವಾರಿ ನೋಡಿಕೊಳ್ಳಬೇಕು. ಕಾಳಜಿಯಿಂದ ಕೆಲಸ ನಿರ್ವಹಿಸಬೇಕು. ಹಾಗೂ ಶಿಥಿಲಗೊಂಡ ಓವರ್ಹೆಡ್ ಟ್ಯಾಂಕ್ಗಳನ್ನು ದೃಢೀಕರಣ ಪಡೆದುಕೊಂಡು ತೆರವುಗೊಳಿಸಬೇಕೆಂದು ಕಾರ್ಯಪಾಲಕ ಅಭಿಯಂತರರಿಗೆ ಸೂಚಿಸಿದರು.
ಸಂಸದ ಜಿ.ಎಂ.ಸಿದ್ದೇಶ್ವರ, ಸಂತೇಮುದ್ದಾಪುರ ಮತ್ತು 109 ಹಳ್ಳಿಗಳ ಬಹುಗ್ರಾಮ ಕುಡಿಯುವ ನೀರಿನ ಯೋಜನೆ ಬಹಳ ವರ್ಷಗಳಿಂದ ನೆನೆಗುದಿಗೆ ಬಿದ್ದಿದ್ದು, ಈ ಬಗ್ಗೆ ಇಂಜಿನಿಯರು ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದರು.
ಶಾಸಕ ಎಸ್.ಎ ರವೀಂದ್ರನಾಥ್ ಮಾತನಾಡಿ, ಬಹುಗ್ರಾಮ ಕುಡಿಯುವ ನೀರು ಯೋಜನೆ ಸರಿಯಾಗಿ ಅನುಷ್ಟಾನಗೊಂಡಿಲ್ಲ. ದಾವಣಗೆರೆ ತಾಲ್ಲೂಕಿನ ಮಾಯಕೊಂಡ, ಹುಚ್ಚವ್ವನಹಳ್ಳಿ, ಬಸಾಪುರ ಸೇರಿದಂತೆ ಅನೇಕ ಗ್ರಾಮಗಳಿಗೆ ಟ್ಯಾಂಕರ್ ಮೂಲಕ ನೀರು ಪೂರೈಸಲಾಗುತ್ತಿದೆ. ಈ ಯೋಜನೆಯನ್ನು ಚುರುಕುಗೊಳಿಸಿ ಇಲ್ಲಿಗೆ ನೀರು ಪೂರೈಸಲು ಆಗ್ರಹಿಸಿದರು.
ಆಯುಕ್ತರು, ಈ ಭಾಗದಲ್ಲಿ ಪಂಪಿಂಗ್, ಪೈಪ್ಲೈನ್ಗಳ ಅಂದಾಜು ಪಟ್ಟಿ ತಯಾರಿಸಿ, ನೀರು ಪೂರೈಕೆಯಾಗುವಂತೆ ಯೋಜಿಸಿ ಕಾರ್ಯಗತಗೊಳಿಸುವಂತೆ ಅಭಿಯಂತರರಿಗೆ ಸೂಚಿಸಿದರು.
ಕೆಆರ್ಐಡಿಎಲ್ ಮತ್ತು ಇತರೆ ಸಂಸ್ಥೆಗಳಿಂದ ಕಾರ್ಯ ನಿರ್ವಹಿಸುತ್ತಿರುವ ಒಟ್ಟು 760 ಶುದ್ದ ಕುಡಿಯುವ ನೀರಿನ ಘಟಕಗಳ ಸ್ಥಿತಿಗತಿ ಕುರಿತು ತಮಗೆ ವರದಿ ನೀಡಬೇಕು ಹಾಗೂ ದುರಸ್ತಿ, ನಿರ್ವಹಣೆ ಕುರಿತು ಛಾಯಾಚಿತ್ರ ಸಮೇತ ಮಾಹಿತಿ ನೀಡಬೇಕೆಂದು ಸಚಿವರು ಕೆಆರ್ಐಡಿಎಲ್ ಅಧಿಕಾರಿಗೆ ಸೂಚಿಸಿದರು.
ಸಭೆಯಲ್ಲಿ ಜಿಪಂನ ಉಪಾಧ್ಯಕ್ಷ ಸುರೇಂದ್ರ ನಾಯ್ಕ, ಜಿ.ಪಂ.ನ ಸ್ಥಾಯಿ ಸಮಿತಿಗಳ ಅಧ್ಯಕ್ಷರುಗಳು, ಸದಸ್ಯರು, ಸಚಿವರ ವಿಶೇಷಾಧಿಕಾರಿ ಜಯಂತ್, ಭುವನಹಳ್ಳಿ ನಾಗರಾಜು, ಜಿ.ಪಂ.ಸಿಇಓ ಪದ್ಮಾ ಬಸವಂತಪ್ಪ, ಜಿಲ್ಲಾ ಪೊಲೀಸ್ ವರಿಷ್ಟಾಧಿಕಾರಿ ಹನುಮಂತರಾಯ, ಜಿ.ಪಂ ಉಪ ಕಾರ್ಯದರ್ಶಿ ಜಗದೀಶ್ ಸೇರಿದಂತೆ ಇತರೆ ಅಧಿಕಾರಿಗಳು ಹಾಜರಿದ್ದರು.
Discussion about this post