ಬೆಂಗಳೂರು: ದ್ವಿತೀಯ ವಿಶ್ವ ಹವ್ಯಕ ಸಮ್ಮೇಳನ ಇಂದು ಸಮಾರೋಪಗೊಂಡಿದ್ದು, ದೇಶ ಸೇವೆ ಹಾಗೂ ಧರ್ಮ ರಕ್ಷಣೆಗಾಗಿ ಹಲವು ಮಹತ್ವದ ನಿರ್ಣಯಗಳನ್ನು ಕೈಗೊಳ್ಳಲಾಗಿದೆ.
ಹೀಗಿವೆ ನಿರ್ಣಯಗಳು:
1. ದೇಶರಕ್ಷಣೆಗೆ ಬದ್ಧ : ಅರಿವಿನಲ್ಲಿ ವಿಶ್ವಗುರುವೆಂದು ಮಾನ್ಯತೆ ಪಡೆದ ನಮ್ಮ ಈ ಪುಣ್ಯಭೂಮಿ ಭಾರತ ದೇಶದ ಸಂಸ್ಕೃತಿ, ಸಂಸ್ಕಾರಗಳ ಸಂರಕ್ಷಣೆ ಹಾಗೂ ಸಂವರ್ಧನೆಯಲ್ಲಿ ತ್ರಿಕರಣ ಪೂರ್ವಕವಾಗಿ ಯಾವಜ್ಜೀವವೂ ಕಂಕಣ ಬದ್ಧರಾಗಿರುತ್ತೇವೆ.
2. ಸನಾತನ ಧರ್ಮಸಂರಕ್ಷಣೆಗೆ ಬದ್ಧ : ಅದೆಷ್ಟೋ ವರ್ಷಗಳ ಪೂರ್ವಪುಣ್ಯಫಲದಿಂದ ನಾವು ಹುಟ್ಟಿ ಬಂದ ಈ ಸನಾತನಧರ್ಮದ ಪ್ರಾವಿತ್ರ್ಯತೆ, ಶ್ರೇಷ್ಠತೆ ಹಾಗೂ ಸರ್ವಮಾನ್ಯತೆಯನ್ನು ಅನೂಚಾನವಾಗಿ ಕಾಪಾಡುವಲ್ಲಿ ನಾವೆಲ್ಲರೂ ಸದಾ ಸಿದ್ಧರಾಗಿರುತ್ತೇವೆ- ಬದ್ಧರಾಗಿರುತ್ತೇವೆ.
3. ಹವ್ಯಕ ಸಂಸ್ಕೃತಿಯ ರಕ್ಷಣೆಗೆ ಬದ್ಧ : ವೇದ – ವಾಙ್ಮಯಗಳ ತತ್ತ್ವಾನುಷ್ಠಾನಗಳ ಶ್ರೇಷ್ಠತೆಯಿಂದ ಸಮಗ್ರ ಸನಾತನಧರ್ಮಕ್ಕೂ, ಭಾರತೀಯತೆಗೂ ರತ್ನಸದೃಶವಾದ ಕೊಡುಗೆಗಳನ್ನು ಕೊಡುತ್ತಿರುವ ಅಪೂರ್ವವಾದ ನಮ್ಮ ಹವ್ಯಕ ಸಂಸ್ಕೃತಿ-ಸಂಸ್ಕಾರಗಳನ್ನು ಉಳಿಸಿ-ಬೆಳೆಸಿಕೊಳ್ಳುವಲ್ಲಿ ನಾವು ಸದಾ ಬದ್ಧರಾಗಿರುತ್ತೇವೆ.
4. ಶ್ರೀಗುರುಪೀಠದ ರಕ್ಷಣೆಗೆ ಬದ್ಧ: ನಮ್ಮ ಶ್ರದ್ಧಾ-ಭಕ್ತಿಕೇಂದ್ರವಾದ ಶ್ರೀರಾಮಚಂದ್ರಾಪುರಮಠದ ಮೇಲಾಗಲೀ, ಶ್ರೀಗುರುಗಳಾದ ಪರಮಪೂಜ್ಯ ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀಶ್ರೀರಾಘವೇಶ್ವರಭಾರತೀ ಮಹಾಸ್ವಾಮಿಗಳ ಮೇಲಾಗಲೀ ಪ್ರತ್ಯಕ್ಷವಾಗಿ ಹಾಗೂ ಪರೋಕ್ಷವಾಗಿ ಮಾಡಿದ ಎಲ್ಲಾ ಮಿಥ್ಯಾರೋಪಗಳನ್ನು ಹಾಗೂ ಅವಹೇಳನಕಾರೀ ಕೃತ್ಯಗಳನ್ನು ಈ ಸಭೆ ಖಂಡಿಸುತ್ತದೆ ಮತ್ತು ಮುಂದೆ ಯಾವತ್ತೂ ಅಂತಹ ಮಿಥ್ಯಾರೋಪಗಳನ್ನು ಯಾ ಅವಹೇಳನಕಾರೀ ಹೇಳಿಕೆಗಳನ್ನು ಯಾವುದೇ ವ್ಯಕ್ತಿ, ಸಂಘಟನೆ ಯಾ ಮಠಗಳು ನೀಡಿದಲ್ಲಿ ಅವುಗಳ ವಿರುದ್ಧ ನಾವೆಲ್ಲರೂ ಸಂಘಟಿತರಾಗಿ ಹೋರಾಡಲು ಬದ್ಧರಾಗಿರುತ್ತೇವೆ.
5. ಮಠ ಮಾನ್ಯ ಮತ್ತು ದೇವಾಲಯಗಳ ರಕ್ಷಣೆಗೆ ಬದ್ಧ : ಯಾವುದೇ ರೀತಿಯಲ್ಲಿ ಯಾವುದೇ ಕಾರಣಕ್ಕೂ ಮಠಮಾನ್ಯಗಳಾಗಲಿ ದೇವಸ್ಥಾನಗಳಾಗಲಿ ಸರ್ಕಾರ ಸ್ವಾಧೀನಪಡಿಸಿಕೊಳ್ಳುವುದನ್ನು ನಾವು ಖಂಡಿಸುತ್ತೇವೆ ಹಾಗೂ ಅವುಗಳಿಗೆ ಮೊದಲಿನಂತೆ ಸ್ವತಂತ್ರತೆಯನ್ನೂ, ಸ್ವಾಯತ್ತತೆಯನ್ನೂ, ಮುಂದುವರೆಸಬೇಕೆಂದು ಸರ್ಕಾರವನ್ನು ಆಗ್ರಹಿಸುತ್ತೇವೆ. ಹಾಗೂ ಅವುಗಳ ರಕ್ಷಣೆಗೆ ನಾವು ಬದ್ಧರಾಗಿರುತ್ತೇವೆ.
Discussion about this post