ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ದೆಹಲಿಯ ಕೆಂಪು ಕೋಟೆ ಬಳಿಯಲ್ಲಿ ನಿನ್ನೆ ಸಂಜೆ ಸಂಭವಿಸಿದ ಭೀಕರ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಮೂವರನ್ನು ಬಂಧಿಸಲಾಗಿದೆ ಎಂದು ವರದಿಯಾಗಿದೆ.
ಈ ಕುರಿತಂತೆ ರಾಷ್ಟ್ರೀಯ ಮಾಧ್ಯಮಗಳು ವರದಿ ಮಾಡಿದ್ದು, ದೆಹಲಿ ಸ್ಫೋಟ ಪ್ರಕರಣದಲ್ಲಿ ಅಮೀರ್, ಉಮರ್ ಮತ್ತು ತಾರಿಕ್ ಅವರನ್ನು ಈಗ ಔಪಚಾರಿಕವಾಗಿ ಬಂಧಿಸಲಾಗಿದೆ ಎನ್ನಲಾಗಿದೆ.
ಇನ್ನು, ಸ್ಫೋಟಕ್ಕೆ ಬಳಸಲಾದ ಕಾರಿನ ಮಾಲೀಕತ್ವ ಮತ್ತು ಜಾಡಿನ ಬಗ್ಗೆ ತನಿಖೆ ನಡೆಸಿದ ನಂತರ ಬಂಧನಗಳು ನಡೆದಿವೆ ಎಂದು ವರದಿಯಾಗಿದೆ.
ಇನ್ನು ಇದೇ ವೇಳೆ, ದೆಹಲಿ ಸ್ಪೋಟದ ತನಿಖೆ ವ್ಯಾಪಕವಾಗಿರುವ ಬೆನ್ನಲ್ಲೇ ಜಮ್ಮು ಕಾಶ್ಮೀರ ಪೊಲೀಸರೂ ಸಹ ಕಾರ್ಯಾಚರಣೆಯನ್ನು ಚುರುಕುಗೊಳಿಸಿದ್ದಾರೆ.
ಮುಜಾಮಿಲ್’ಗೆ ಸಂಬಂಧಿಸಿದ ಹಾಗೂ ಅಲ್ ಫಲಾಹ್ ವಿಶ್ವವಿದ್ಯಾಲಯದ ಮಾಡ್ಯೂಲ್’ಗೆ ಭಾಗವಾಗಿರುವ ಅನುಮಾನದಲ್ಲಿ ಜಮ್ಮು ಕಾಶ್ಮೀರದ ಪೊಲೀಸರು ಲಕ್ನೋದಲ್ಲಿ ಡಾ. ಶಹೀನಾ ಎನ್ನುವವರನ್ನು ಬಂಧಿಸಲಾಗಿದೆ. ಈ ಮೂಲಕ ದೇಶದಲ್ಲಿ ವಿಧ್ವಂಸಕ ಕೃತ್ಯ ಎಸಗುವ ಸಂಚಿನಲ್ಲಿ ಮಹಿಳೆಯರೂ ಸಹ ಭಾಗಿಯಾಗಿದ್ದಾರೆ ಎಂಬ ಅನುಮಾನಗಳಿಗೆ ಪುಷ್ಟಿ ದೊರಕುತ್ತಿದೆ.
ಅಲ್ಲದೇ, ದೆಹಲಿ ಸ್ಪೋಟಕ್ಕೆ ಸಂಬಂಧಿಸಿದಂತೆ ತನಿಖಾಧಿಕಾರಿಗಳ ತಂಡ ಇನ್ನೊಬ್ಬ ವೈದ್ಯನನ್ನು ಬಂಧಿಸಿದ್ದು, ತನಿಖೆಗೆ ಒಳಪಡಿಸಿದ್ದಾರೆ. ಮಾತ್ರವಲ್ಲ, ಸ್ಪೋಟದ ಹಿಂದೆ ಜೈಷ್ ಉಗ್ರ ಸಂಘಟನೆಯ ಮೂಲಭೂತವಾದದ ಜಾಡು ಹಿಡಿದು ತನಿಖೆ ಚುರುಕುಗೊಂಡಿದೆ.
ನಿನ್ನೆ ಮುಂಜಾನೆ ಜಮ್ಮು ಕಾಶ್ಮೀರದಲ್ಲಿ ಉಗ್ರರು ಹಾಗೂ ಭಾರೀ ಸ್ಪೋಟಕ ಸಾಮಗ್ರಿಗಳನ್ನು ವಶಕ್ಕೆ ಪಡೆದ ಬೆನ್ನಲ್ಲೇ ಸಂಜೆ ದೆಹಲಿಯ ಕೆಂಪು ಕೋಟೆ ಬಳಿಯಲ್ಲಿ ಭಾರೀ ಸ್ಪೋಟ ಸಂಭವಿಸಿತ್ತು. ಇದರ ಜಾಡು ಹಿಡಿದಿರುವ ಜಮ್ಮು ಕಾಶ್ಮೀರ, ನವದೆಹಲಿ, ಹರಿಯಾಣ, ಎನ್’ಐಎ ಸೇರಿದಂತೆ ವಿವಿಧ ತನಿಖಾ ತಂಡಗಳಿಗೆ ಒಂದೊಂದೇ ಅಂಶಗಳು ದೊರೆಯುತ್ತಿವೆ.
ಜಮ್ಮು ಕಾಶ್ಮೀರ, ಹರಿಯಾಣ, ನವದೆಹಲಿ, ಲಕ್ನೋ ಹೀಗೆ ಬೇರೆ ಬೇರೆ ಕಡೆಗಳಲ್ಲಿ ಶಂಕಿತ ಉಗ್ರರು ಹಾಗೂ ಉಗ್ರರಿಗೆ ಬೆಂಬಲ ನೀಡುತ್ತಿದ್ದ ಹಲವರು ಬಂಧನಕ್ಕೆ ಒಳಗಾಗಿರುವುದು ಗಮನಿಸಿದಾಗ ದೇಶದ ವಿವಿಧ ಕಡೆಗಳಲ್ಲಿ ಭಾರೀ ವಿದ್ವಂಸಕ ಕೃತ್ಯಕ್ಕೆ ಸಂಚು ರೂಪಿಸಲಾಗಿತ್ತಾ ಎಂಬ ಆತಂಕಕಾರಿ ಅನುಮಾನ ವ್ಯಕ್ತವಾಗಿದೆ.
2,900 ಕೆಜಿ ಸ್ಫೋಟಕ ಪತ್ತೆಯಾದ ಫರಿದಾಬಾದ್ ಮಾಡ್ಯೂಲ್ ಜೊತೆ ಸಂಬಂಧ ಹೊಂದಿದ್ದ ಪುಲ್ವಾಮಾ ಮೂಲದ ಉಮರ್ ಯು ನಬಿ ಕಾರಿನಲ್ಲಿ ಇದ್ದಿರಬಹುದು ಎಂಬ ಅನುಮಾನ ಈಗ ವ್ಯಕ್ತವಾಗಿದೆ.
ತನ್ನ ತಂಡದ ಸದಸ್ಯರನ್ನು ಬಂಧಿಸಿದ ವಿಚಾರ ಗೊತ್ತಾಗಿ ಪರಾರಿಯಾಗಿದ್ದ ನಬಿ ಸೋಮವಾರ ಏಕಾಂಗಿಯಾಗಿ ಈ ಕೃತ್ಯ ನಡೆಸಿರುವ ಸಾಧ್ಯತೆಯಿದೆ ಎಂದು ತನಿಖಾ ಸಂಸ್ಥೆಗಳ ಮೂಲಗಳನ್ನು ಆಧಾರಿಸಿ ಮಾಧ್ಯಮಗಳು ವರದಿ ಮಾಡಿವೆ.
ತನಿಖಾಧಿಕಾರಿಗಳು ಈಗ ಕಾರಿನ ಚಾಲಕನದ್ದೆಂದು ಶಂಕಿಸಲಾಗಿರುವ ಕತ್ತರಿಸಿದ ಕೈಯನ್ನು ಸ್ಥಳದಿಂದ ವಶಪಡಿಸಿಕೊಂಡಿದ್ದು ಕಾಶ್ಮೀರದಲ್ಲಿರುವ ನಬಿ ಕುಟುಂಬದ ಡಿಎನ್ಎ ಮಾದರಿಗಳನ್ನು ಸಂಗ್ರಹಿಸಿದ್ದಾರೆ.
ಮೂಲಗಳ ಪ್ರಕಾರ ನಬಿ ಭಟ್ ಅವರ ಮಗ ಡಾ. ಉಮರ್ ಯು ನಬಿ ಫರಿದಾಬಾದ್ನ ಅಲ್-ಫಲಾಹ್ ವೈದ್ಯಕೀಯ ಕಾಲೇಜಿನಲ್ಲಿ ಸಹಾಯಕ ಪ್ರಾಧ್ಯಾಪಕನಾಗಿ ಕೆಲಸ ಮಾಡುತ್ತಿದ್ದ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















