ಕಲ್ಪ ಮೀಡಿಯಾ ಹೌಸ್ | ನವದೆಹಲಿ |
ಇಲ್ಲಿನ ಕೆಂಪು ಕೋಟೆ ಬಳಿಯಲ್ಲಿ ಇಂದು ಸಂಜೆ ನಡೆದ ಭೀಕರ ಸ್ಫೋಟದಲ್ಲಿ ಸಾವಿಗೀಡಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದ್ದು, ಸಾವಿನ ಸಂಖ್ಯೆ ಇನ್ನೂ ಏರಿಕೆಯಾಗುವ ಆತಂಕ ಎದುರಾಗಿದೆ.
ಕೆಂಪು ಕೋಟೆಯ ಬಳಿಯಲ್ಲಿ ಐ20 ಕಾರಿನಲ್ಲಿ ಇರಿಸಲಾಗಿದ್ದ ಸ್ಪೋಟಕ ಸ್ಪೋಟಗೊಂಡ ಪರಿಣಾಮ ಎರಡು ಭಾರೀ ಸ್ಫೋಟಗಳು ಸಂಭವಿಸಿತ್ತು.
ಘಟನೆಯಲ್ಲಿ ಕಾರಿನಲ್ಲಿದ್ದವರ ದೇಹಗಳು ಛಿದ್ರ ಛಿದ್ರಗೊಂಡು ಸಾವನ್ನಪ್ಪಿದ್ದರು. ತೀವ್ರವಾಗಿ ಗಾಯಗೊಂಡಿದ್ದ ಹಲವರನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ಆದರೆ, ಚಿಕಿತ್ಸೆ ಫಲಕಾರಿಯಾಗದೇ ಸಾವಿಗೀಡಾದವರ ಸಂಖ್ಯೆ 13ಕ್ಕೆ ಏರಿಕೆಯಾಗಿದೆ.
ಘಟನೆಯಲ್ಲಿ 6 ಕಾರು, 4 ಆಟೋ ಛಿದ್ರಛಿದ್ರವಾಗಿವೆ. ಕೆಂಪುಕೋಟೆ ಮೆಟ್ರೋದ ಗೇಟ್ ನಂ.1ರ ಪಾರ್ಕಿಂಗ್ ಬಳಿಯಲ್ಲಿ ಸಂಭವಿಸಿದ ನಿಗೂಢ ಆಕಸ್ಮಿಕ ಭೀಕರ ಸ್ಫೋಟದ ಸದ್ದು- ಬೆಂಕಿಗೆ ಜನ ನಡುಗಿ ಹೋಗಿದ್ದಾರೆ.
ಆಸ್ಪತ್ರೆಗೆ ಅಮಿತ್ ಶಾ ಭೇಟಿ
ಘಟನೆಯಲ್ಲಿ ಗಾಯಗೊಂಡರನ್ನು ದಾಖಲಿಸಲಾಗಿರುವ ಲೋಕನಾಯಕ್ ಆಸ್ಪತ್ರೆಗೆ ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ದಿಢೀರ್ ಭೇಟಿ ನೀಡಿದ್ದಾರೆ.
ಮಾಧ್ಯಮದೊಂದಿಗೆ ಮಾತನಾಡಿರುವ ಅಮಿತ್ ಶಾ, ಇಂದು ಸಂಜೆ 7 ಗಂಟೆ ಸುಮಾರಿಗೆ ದೆಹಲಿಯ ಕೆಂಪು ಕೋಟೆ ಬಳಿಯ ಸುಭಾಷ್ ಮಾರ್ಗದ ಟ್ರಾಫಿಕ್ ಸಿಗ್ನಲ್’ನಲ್ಲಿ ಐ20 ಕಾರಿನಲ್ಲಿ ಸ್ಫೋಟ ಸಂಭವಿಸಿದೆ ಎಂದು ಖಚಿತಪಡಿಸಿದ್ದಾರೆ.
ಈ ಸ್ಫೋಟದಲ್ಲಿ ಕೆಲವು ಪಾದಚಾರಿಗಳು ಗಾಯಗೊಂಡಿದ್ದು, ಕೆಲವು ವಾಹನಗಳು ಹಾನಿಗೊಳಗಾಗಿವೆ. ಪ್ರಾಥಮಿಕ ವರದಿಗಳ ಪ್ರಕಾರ, ಕೆಲವರು ಪ್ರಾಣ ಕಳೆದುಕೊಂಡಿದ್ದಾರೆ ಎಂದು ವಿವರಿಸಿದ್ದಾರೆ.
ಇನ್ನು, ಆಸ್ಪತ್ರೆಯಲ್ಲಿಯೇ ಹಿರಿಯ ಪೊಲೀಸ್ ಅಧಿಕಾರಿಗಳೊಂದಿಗೆ ತುರ್ತು ಸಭೆ ನಡೆಸಿದ ಅಮಿತ್, ಘಟನೆ ಕುರಿತಾಗಿ ಸಂಪೂರ್ಣ ಮಾಹಿತಿ ಪಡೆದುಕೊಂಡರು.
ಗೃಹ ಸಚಿವ ಅಮಿತ್ ಶಾ ಅವರು ಲೋಕ ನಾಯಕ್ ಆಸ್ಪತ್ರೆಗೆ ಆಗಮಿಸುತ್ತಿದ್ದಂತೆ ದೆಹಲಿ ಪೊಲೀಸ್ ಆಯುಕ್ತ ಸತೀಶ್ ಗೋಲ್ಚಾ ಮತ್ತು ಇತರ ಅಧಿಕಾರಿಗಳೊಂದಿಗೆ ಸಭೆ ನಡೆಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news




















