ಕಲ್ಪ ಮೀಡಿಯಾ ಹೌಸ್ | ಧಾರವಾಡ/ಶಿವಮೊಗ್ಗ/ವಿಜಯನಗರ |
ಲೋಕಾಯುಕ್ತ ಪೊಲೀಸರು #Lokayuktha Police ರಾಜ್ಯಾದ್ಯಂತ ಇಂದು ಬೆಳ್ಳಂಬೆಳಗ್ಗೆ ಹಲವು ಅಧಿಕಾರಿಗಳ ಮನೆ, ಕಚೇರಿಗಳ ಮೇಲೆ ಏಕಕಾಲದಲ್ಲಿ ದಾಳಿ ನಡೆಸಿದ್ದು, ಧಾರವಾಡ, ಶಿವಮೊಗ್ಗ ಹಾಗೂ ವಿಜಯನಗರ ಸೇರಿದಂತೆ ವಿವಿಧೆಡೆ ದಾಳಿ ನಡೆಸಿ ನಡೆಸುತ್ತಿದ್ದಾರೆ.
ಆದಾಯಕ್ಕಿಂತ ಹೆಚ್ಚು ಆಸ್ತಿ ಗಳಿಕೆ ಆರೋಪದ ಹಿನ್ನೆಲೆಯಲ್ಲಿ ಧಾರವಾಡ ಕೃಷಿ ಇಲಾಖೆ ಜಂಟಿ ನಿರ್ದೇಶಕ ರಾಜಶೇಖರ ಬಿಜಾಪೂರ ಅವರಿಗೆ ಸೇರಿದ್ದು ಎನ್ನಲಾದ ನಗರದ ಸಿಲ್ವರ್ ಆರ್ಚೆಡ್ ಬಡಾವಣೆಯಲ್ಲಿರುವ ಮನೆ ಮೇಲೆ ಇಂದು ದಾಳಿ ಮಾಡಿರುವ ಲೋಕಾ ಅಧಿಕಾರಿಗಳು, ಪರಿಶೀಲನೆ ನಡೆಸುತ್ತಿದ್ದಾರೆ.
ಬೆಳಗಾವಿ ಕೃಷಿ ಇಲಾಖೆ ವಿಜಿಲೆನ್ಸ್ ವಿಭಾಗದ ಜಂಟಿ ನಿರ್ದೇಶಕರಾಗಿರುವ ರಾಜಶೇಖರ್ ಅವರು, ಈ ಮುಂಚೆ ಧಾರವಾಡದಲ್ಲಿ ಸಹ ಜಂಟಿ ನಿರ್ದೇಶಕರಾಗಿ ಕಾರ್ಯ ನಿರ್ವಹಿಸಿದ್ದರು. ಧಾರವಾಡದಲ್ಲಿ ಮೂರು ಕಡೆ ದಾಳಿ ಮಾಡಿದ್ದು, ರಾಣಿ ಚೆನ್ನಮ್ಮ ನಗರದಲ್ಲಿರುವ ಅವರ ಖಾಸಗಿ ಕಚೇರಿ, ಧಾರವಾಡ ತಾಲೂಕಿನ ಯರಿಕೊಪ್ಪ ಗ್ರಾಮದ ಬಳಿಯ ಫಾರ್ಮ್ ಹೌಸ್ ಮೇಲೆಯೂ ದಾಳಿ ಮಾಡಿದ್ದಾರೆ. ಏಕಕಾಲಕ್ಕೆ ಮೂರು ಕಡೆ ದಾಳಿ ನಡೆಸಿದ್ದು, ಒಟ್ಟು ಆರು ಲೋಕಾ ಅಧಿಕಾರಿಗಳು ಕಾರ್ಯಾಚರಣೆ ಮಾಡಿ ದಾಖಲೆಗಳನ್ನು ಪರಿಶೀಲನೆ ಮಾಡುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.
ಶಿವಮೊಗ್ಗದಲ್ಲೂ ಲೋಕಾ ದಳಿ:
ಶಿವಮೊಗ್ಗ ಜಿಲ್ಲಾ ಪಂಚಾಯತ್ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ಹಾಗೂ ಸಹಾಯಕ ಇಂಜಿನಿಯರ್ ಅವರ ಶಿವಮೊಗ್ಗದ ಕಚೇರಿ, ಬೆಂಗಳೂರಿನ ಮನೆಗಳು ಸೇರಿದಂತೆ ಒಟ್ಟು ಐದು ಕಡೆ ಲೋಕಾಯುಕ್ತ ಎಸ್ಪಿ ಮಂಜುನಾಥದ ಚೌಧರಿ ಅವರ ನೇತೃತ್ವದಲ್ಲಿ ದಾಳಿ ನಡೆಸಲಾಗಿದೆ.
ಶಿವಮೊಗ್ಗ ಜಿಲ್ಲಾ ಪಂಚಾಯತ್ನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಾರ್ಯನಿರ್ವಾಹಕ ಎಂಜಿನಿಯರ್ ರೂಪ್ಲಾ ನಾಯ್ಕ್ ಹಾಗೂ ಸಹಾಯಕ ಎಂಜಿನಿಯರ್ ಶ್ಯಾಮ್ ಅವರ ಮನೆಗಳ ಮೇಲೆ ದಾಳಿ ನಡೆಸಲಾಗಿದೆ.
ಆದಾಯಕ್ಕಿಂತ ಹೆಚ್ಚಿನ ಆಸ್ತಿ ಗಳಿಕೆ ಆರೋಪದಡಿ ಲೋಕಾಯುಕ್ತ ದಾಳಿ ನಡೆಸಲಾಗಿದೆ. ರೂಪ್ಲಾ ನಾಯ್ಕ್ ಅವರ ಶಿವಮೊಗ್ಗದ ಬಸವನಗುಡಿಯ ಮನೆ, ಡಿಸಿ ಕಾಂಪೌಂಡ್ನ ಗ್ರಾಮೀಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗದ ಕಚೇರಿ, ಚಿಕ್ಕಮಗಳೂರು ಜಿಲ್ಲೆ ಸಖರಾಯ ಪಟ್ಟಣ ಹೋಬಳಿಯ ಹಳ್ಳಿಹಟ್ಟಿ ತಾಂಡದ ಮನೆ, ಬೆಂಗಳೂರಿನ ಕುಂಬಳಗೂಡಿನ ಪನೂರಮನ ಆರ್ ಆರ್ ಡೆಂಟಲ್ ಕಾಲೇಜು ಬಳಿಯ ಪನೂರಮ ಅಪಾರ್ಟ್ಮೆಂಟ್, ಹಾಗೂ ಸ್ಯಾಟಲೈಟ್ ಏರಿಯಾದ ಮನೆ ಸೇರಿ ಬೆಂಗಳೂರಿನಲ್ಲಿ ಎರಡು ಕಡೆ ದಾಳಿ ನಡೆಸಲಾಗಿದೆ.
ಇನ್ನು ಸಹಾಯಕ ಇಂಜಿನಿಯರ್ ಶ್ಯಾಮ್ ಅವರ ಶಿವಮೊಗ್ಗದ ವಿದ್ಯಾನಗರದ ಮನೆ ಮೇಲೆ ದಾಳಿ ನಡೆಸಲಾಗಿದೆ.
ಒಟ್ಟು ಆರು ಕಡೆ ಲೋಕಾಯುಕ್ತ ಪೊಲೀಸರು ಏಕಕಾಲದಲ್ಲಿ ದಾಳಿ ನಡೆಸಿದ್ದಾರೆ. ದಾಳಿಯ ವೇಳೆ ರೂಪ್ಲಾ ನಾಯ್ಕ್ ಅವರು ಬೆಂಗಳೂರಿನ ಮನೆಯಲ್ಲಿದ್ದರು ಎನ್ನಲಾಗಿದೆ. ಬೆಂಗಳೂರಿನಲ್ಲಿ ಎರಡು ಕಡೆ ಲೋಕಾಯುಕ್ತ ಎಸ್ಪಿ ಮಂಜುನಾಥ ಚೌಧರಿ ಅವರು ದಾಳಿ ನಡೆಸಿದ್ದಾರೆ.
ವಿಜಯನಗರ ಆರೋಗ್ಯಾಧಿಕಾರಿ ಶಂಕರ್ ನಾಯ್ಕ ಅವರಿಗೆ ಸೇರಿದ್ದು ಎನ್ನಲಾದ ಮನೆ ಮೇಲೆಯೂ ಲೋಕಾ ದಾಳಿ ನಡೆದಿದೆ. ಮನೆ ಹಾಗೂ ಕಚೇರಿ ಆಸ್ಪತ್ರೆ ಮೇಲೆ ದಾಳಿ ಮಾಡಲಾಗಿದೆ.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news 


















