ಕಲ್ಪ ಮೀಡಿಯಾ ಹೌಸ್ | ಧಾರವಾಡ |
ಒಂದು ದೇಶದ ಸಾಮಾಜಿಕ, ಆರ್ಥಿಕ ಮತ್ತು ಸಾಂಸ್ಕøತಿಕ ಜೀವನ ಮಟ್ಟವು ದೇಶದಲ್ಲಿರುವ ಜಾನುವಾರುಗಳ ಸಂಖ್ಯೆ ಹಾಗೂ ಅವುಗಳ ಸಂರಕ್ಷಣೆಯ ಮೇಲೆ ಅವಲಂಬಿತವಾಗಿರುತ್ತದೆ. ರೈತ ದೇಶದ ಬೆನ್ನೆಲುಬಾದರೆ, ಜಾನುವಾರುಗಳು ರೈತನ ಬೆನ್ನೆಲುಬಾಗಿರುತ್ತವೆ. ಪಶು ಸಂಪತ್ತು ಅಭಿವೃದ್ಧಿಯಾದರೆ ಮಾತ್ರ ದೇಶ ಪ್ರಗತಿಯಲ್ಲಿ ಸಾಗುವುದು ಎಂದು ಜಿಲ್ಲಾ ಪಂಚಾಯತ ಯೋಜನಾ ನಿರ್ದೇಶಕ ಬಿ.ಎಸ್. ಮೂಗನೂರಮಠ ಹೇಳಿದರು.
ಅವರು ಇತ್ತೀಚೆಗೆ ಧಾರವಾಡದ ಜಿಲ್ಲಾ ಕೃಷಿ ತರಬೇತಿ ಕೇಂದ್ರದಲ್ಲಿ ಸಂಜೀವಿನಿ, ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಮತ್ತು ಜೀವನೋಪಾಯ ಇಲಾಖೆ, ಹಾಗೂ ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆ ತರಬೇತಿ ಕೇಂದ್ರದ ಸಹಯೋಗದಲ್ಲಿ ಆಯೋಜಿಸಿದ್ದ, ಆರು ದಿನಗಳ ಪಶುಸಖಿ ತರಬೇತಿ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಪಶುಪಾಲನೆಯಲ್ಲಿನ ಇತ್ತೀಚಿನ ವೈಜ್ಞಾನಿಕ ಮತ್ತು ತಾಂತ್ರಿಕ ಬೆಳವಣಿಗೆಗಳು ಹಾಗೂ ಪಶು ಸಂಗೋಪನಾ ಇಲಾಖೆಯ ಯೋಜನೆಗಳು ಪಶು ಸಖಿಯರ ಮೂಲಕ ಗ್ರಾಮೀಣ ಜನಸಾಮಾನ್ಯರಿಗೂ ಸಹ ತಲುಪಬೇಕೆಂದು ಹೇಳಿದರು.
Also read: ತ್ರಿವೇಣಿ ಸಂಗಮದಲ್ಲಿ ಕುಂಭಮೇಳಕ್ಕೆ ಸಕಲ ಸಿದ್ಧತೆಗೆ ಸೂಚನೆ: ಜಿಲ್ಲಾಧಿಕಾರಿ ಅಶ್ವತಿ
ಕೃಷಿ ಚಟುವಟಿಕೆಗಳಲ್ಲಿ ಯಶಸ್ಸು ಸಾಧಿಸಲು ಮತ್ತು ಕೃಷಿಯಲ್ಲಿ ಹೆಚ್ಚಿನ ಆದಾಯ ಗಳಿಸಲು ಪಶುಸಂಗೋಪನೆ ಒಂದು ಬಹುಮುಖ್ಯ ಉದ್ಯೋಗವಾಗಿದೆ. ಪಶುಪಾಲನೆ ಕೃಷಿಗೆ ಪೂರಕವಾಗಿದ್ದು, ಉತ್ತಮ ಗೊಬ್ಬರ, ಹಾಲಿನ ಉತ್ಪನ್ನವನ್ನು ನೀಡುವುದರೊಂದಿಗೆ, ಕೃಷಿ ಕಾರ್ಮಿಕರ ಕೊರತೆಯನ್ನು ನೀಗಿಸಲು ಸಹಾಯಕವಾಗುತ್ತದೆ.
ಪಶುಸಂಗೋಪನೆಯನ್ನು ಜನಪ್ರಿಯಗೊಳಿಸಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಅನೇಕ ಯೋಜನೆಗಳ ಮೂಲಕ ಸಾಲ ಸೌಲಭ್ಯ, ಸಹಾಯಧನ, ತಾಂತ್ರಿಕತೆ, ಕೌಶಲ್ಯ ಮತ್ತು ಸುಧಾರಿತ ಯಂತ್ರೋಪಕರಣಗಳನ್ನು ರೈತರಿಗೆ ಹಾಗೂ ಪಶುಪಾಲಕರಿಗೆ ನೀಡುತ್ತಿವೆ. ಪಶುಸಖಿಯರು ಈ ಎಲ್ಲ ಯೋಜನೆಗಳ ಅಗತ್ಯ ಮಾಹಿತಿಯನ್ನು ಮತ್ತು ತರಬೇತಿಯನ್ನು ಪಡೆಯುವ ಮೂಲಕ ಪಶುಪಾಲನೆ ನಿರತ ರೈತ ಸಮುದಾಯಕ್ಕೆ ಮಾರ್ಗದರ್ಶನ ನೀಡುವ ಮೂಲಕ ಪಶುಸಂಗೋಪನೆಯನ್ನು ಸದೃಡಗೊಳಿಸಬೇಕು ಮತ್ತು ಸರ್ಕಾರದ ಎಲ್ಲ ಯೋಜನೆಗಳನ್ನು ಗ್ರಾಮೀಣರ ಮನೆ ಬಾಗಿಲಿಗೆ ತಲುಪಿಸಬೇಕೆಂದು ಬಿ.ಎಸ್.ಮೂಗನೂರಮಠ ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪಶುಪಾಲನಾ ಇಲಾಖೆಯ ಉಪನಿರ್ದೇಶಕ ಡಾ.ಉಮೇಶ ಕೊಂಡಿ ಅವರು ಮಾತನಾಡಿ, ತರಬೇತಿಯಲ್ಲಿ ಪಾಲ್ಗೊಂಡ ಪಶುಸಖಿಯರು ಅವರ ಕರ್ತವ್ಯಗಳು ಮತ್ತು ಇಲಾಖೆಯ ಚಟುವಟಿಕೆಗಳಲ್ಲಿ ಭಾಗವಹಿಸುತ್ತ, ಇಲಾಖೆಯ ಯೋಜನೆಗಳು, ಪಶುಪಾಲನೆಯಲ್ಲಿ ತಾಂತ್ರಿಕ ವಿಷಯಗಳನ್ನು ವಿಸ್ತರಣಾ ಕಾರ್ಯಕ್ರಮಗಳ ಮೂಲಕ ರೈತರಿಗೆ ತಲುಪಿಸುವಲ್ಲಿ ಪ್ರಮುಖ ಪಾತ್ರ ನಿರ್ವಹಿಸುತ್ತಾರೆ.
ಕಾರ್ಯಕ್ರಮದಲ್ಲಿ ಜಿಲ್ಲಾ ಪಂಚಾಯತ ಸಂಜೀವಿನಿ ಯೋಜನಾ ಉಪವ್ಯವಸ್ಥಾಪಕ ವಿನೋದ ಕಂಟಿ, ಧಾರವಾಡ ತಾಲ್ಲೂಕಿನ ಪಶುಪಾಲನಾ ತರಬೇತಿ ಕೇಂದ್ರದ 33 ಪಶು ಸಖಿಯರು, ಜಿಲ್ಲಾ ಪಂಚಾಯತದ ಸಂಜೀವಿನಿ ಸಿಬ್ಬಂದಿ ಭಾಗವಹಿಸಿದ್ದರು. ಪಶುಪಾಲನಾ ಮತ್ತು ಪಶುವೈದ್ಯಕೀಯ ಇಲಾಖೆಯ ಮುಖ್ಯ ಪಶುವೈದ್ಯಾಧಿಕಾರಿ ಡಾ.ಸುನೀಲ ಬನ್ನಿಗೋಳ ಸ್ವಾಗತಿಸಿದರು. ಬಸವರಾಜ ಶೆಟ್ಟೆಪ್ಪನವರ ವಂದಿಸಿದರು. ಹೆಸರಘಟ್ಟ ಪಶುಪಾಲನಾ ತರಬೇತಿ ಕೇಂದ್ರದಲ್ಲಿ ನಡೆದ ಪಶುಸಖಿ ಕಾರ್ಯಕ್ರಮದ ಉದ್ಘಾಟನೆಯ ನೇರ ಪ್ರಸಾರವನ್ನು ವೀಕ್ಷಿಸಿದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post