ಕಲ್ಪ ಮೀಡಿಯಾ ಹೌಸ್ | ಧಾರವಾಡ |
ನಗರದ ಆಲೂರ ವೆಂಕಟರಾವ್ ಭವನದಲ್ಲಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯ ವತಿಯಿಂದ ಮೂರು ದಿನಗಳ ಕಾಲ ಅದ್ದೂರಿಯಾಗಿ ನಡೆದ ಅಂತಾರಾಷ್ಟ್ರೀಯ ಕಿರು ಚಲನಚಿತ್ರೋತ್ಸವ ಪ್ರಶಸ್ತಿ ವಿತರಣೆಯ ಸಮಾರಂಭ ಹಲವಷ್ಟು ವಿಶೇಷಗಳಿಗೆ ಮುನ್ನುಡಿ ಬರೆಯಿತು.
ಕಿರುಚಿತ್ರೋತ್ಸವದಲ್ಲಿ ಒಟ್ಟು 98 ಚಿತ್ರಗಳ ನಾಮಿನೇಷನ್ ಪೈಕಿ 4 ಸಾಕ್ಷ್ಯಚಿತ್ರ, 9 ಮ್ಯೂಜಿಕ್ ವೀಡಿಯೋ, 9 ಟೆಲಿಫಿಲ್ಮ್, 13 ಕಿರುಚಿತ್ರಗಳಿಗೆ ಒಟ್ಟು 35 ಪ್ರಶಸ್ತಿಗಳು ಬಂದಿದ್ದು ಇದರಲ್ಲಿ ಮರಾಠಿ 1 ಕಿರುಚಿತ್ರ, 1 ಮಲಯಾಳಂ, 1 ಲಂಡನ್ನಿಂದ ಆಂಗ್ಲಭಾಷೆಯ ಚಿತ್ರಗಳು ಕಿರುಚಿತ್ರೋತ್ಸವದಲ್ಲಿ ಪಾಲ್ಗೊಂಡದ್ದವು.
ಮೂರು ದಿನಗಳ ಕಾಲ ಅವುಗಳ ವಿಶೇಷ ಪ್ರದರ್ಶನ ಕೂಡ ಪ್ರೇಕ್ಷಕರ ಮನಮುಟ್ಟುವಲ್ಲಿ ಯಶಸ್ವಿಯಾಯಿತು. ಸಮಾರಂಭದಲ್ಲಿ ಉತ್ತರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಶಂಕರ ಸುಗತೆ, ನ್ಯಾಯವಾದಿ ಪ್ರಕಾಶ ಉಡಕೇರಿಯವರು ಉತ್ತರ ಕರ್ನಾಟಕದಲ್ಲಿ ಕನಿಷ್ಟ 500 ಎಕರೆ ಜಾಗೆಯಲ್ಲಿ ಸರಕಾರ ಸ್ಪಂದಿಸಿ ಯುಕೆ ಫಿಲ್ಮಸಿಟಿ ಸ್ಥಾಪಿಸುವ ಕುರಿತು ವಿಷಯ ಮಂಡಿಸಿದರು.
ಇದಕ್ಕೆ ಕಾರ್ಯಕ್ರಮಕ್ಕೆ ಆಗಮಿಸಿದ ಗಣ್ಯರು, ಚಿತ್ರಕಲಾವಿದರು, ತಂತ್ರಜ್ಞರು, ಕಲಾಭಿಮಾನಿಗಳು ಚಪ್ಪಾಳೆ ತಟ್ಟಿ ಬೆಂಬಲ ಸೂಚಿಸಿ ಸರ್ವಸಮ್ಮತ ಒಪ್ಪಿಗೆಯ ಧ್ವನಿಘೋಷ ಮಾಡಿದರು. ಈ ಒಪ್ಪಿಗೆ ಪಡೆದ ಚಿತ್ರೀಕರಣದ ತುಣುಕನ್ನು ಮಾನ್ಯ ಮುಖ್ಯಮಂತ್ರಿಗಳ ಗಮನಕ್ಕೆ ತರಲು ದೂರದರ್ಶನದ ನಿರ್ದೇಶಕಿ ಡಾ. ನಿರ್ಮಲಾ ಯಲಿಗಾರ ಅವರಿಗೆ ಒಪ್ಪಿಸಲಾಯಿತು.
ಮಾತಿನಮಲ್ಲ ಮಲ್ಲಪ್ಪ ಹೊಂಗಲ್ ಅವರಿಂದ ರಸಪೂರ್ಣ ಹಾಸ್ಯ, ಕುಮಾರ ಅವಿನಾಶ ಗಂಜಿಹಾಳರಿAದ ವಿವಿಧ ಕಲಾವಿದರ ಮಿಮಿಕ್ರಿ, ಬಾಲ ಕಲಾವಿದರ ನೃತ್ಯಗಳು ಪ್ರೇಕ್ಷಕರ ಮೆಚ್ಚುಗೆಯ ಚಪ್ಪಾಳೆ ಗಿಟ್ಟಿಸಿದವು.ಬೆಲ್ ಬಾಟಮ್ ಚಿತ್ರದ ನಿರ್ದೇಶಕ ಜಯತೀರ್ಥ ಮತ್ತು ಕಲಾವಿದೆ ರೂಪಿಕಾ ಅವರು ಚಿತ್ರಗಳ ಕುರಿತು ನಿರ್ದೇಶಕರು, ಕಲಾವಿದರು, ತಂತ್ರಜ್ಞರಿಗೆ ಹಲವಷ್ಟು ಮಾಹಿತಿಗಳನ್ನು ತಮ್ಮ ಅನುಭವಗಳ ಜೊತೆಗೆ ಹಂಚಿಕೊಂಡರು.
Also read: ಪರಿಸರ ಸಂರಕ್ಷಣೆಯಲ್ಲಿ ಪ್ರತಿಯೊಬ್ಬರೂ ಜವಾಬ್ದಾರಿ ಹೊರಬೇಕು: ಬಿ.ಎಲ್. ಚಂದ್ವಾನಿ ಕರೆ
ಕಿರುಚಿತ್ರಗಳ ಪ್ರಶಸ್ತಿ ವಿಜೇತರಿಗೆ ಖ್ಯಾತ ಚಲನಚಿತ್ರ ನಿರ್ದೇಶಕ ಜಯತೀರ್ಥ, ಕಿರುಚಿತ್ರ, ಚಲನಚಿತ್ರ ಕಲಾವಿದೆ ರೂಪಿಕಾ, ದೂರದರ್ಶನ ನಿರ್ದೇಶಕಿ ಡಾ.ನಿರ್ಮಲಾ ಯಲಿಗಾರ, ನಿರ್ಮಾಪಕ ಮಾರುತಿ ಜಡಿ, ಜಾರ್ಜ್ ಸೊಲೊಮನ್, ನಟ ನಿರ್ಮಾಪಕ, ಕವಿವಿ ಸಿಂಡಿಕೇಟ್ ಸದಸ್ಯ ಡಾ. ಕಲ್ಮೇಶ್ ಹಾವೇರಿಪೇಠ ಮಂಡಳಿಯ ಅಧ್ಯಕ್ಷ ಶಂಕರ ಸುಗತೆ ಪ್ರಶಸ್ತಿ ವಿತರಿಸಿದರು.
ಸಂಘಟನಾ ಕಾರ್ಯದರ್ಶಿ ರಾಹುಲ ದತ್ತಪ್ರಸಾದ, ಸದಸ್ಯರಾದ ಪ್ರಭು ಹಂಚಿನಾಳ, ಓಂಕಿರಣ, ಅಶ್ಪಾಕ ಸೈಯಿದ್, ಪ್ರವೀಣಾ ಕುಲಕರ್ಣಿ, ಚಿತ್ರ ನಿರ್ಮಾಪಕರಾದ ಶರಣಪ್ಪ ಕೊಟಗಿ, ನಿರ್ದೇಶಕರಾದ ಡಾ.ಸುರೇಶ ವೆಂಕಟೇಶ್, ಚಲನಚಿತ್ರ ಪತ್ರಿಕಾ ಸಂಪರ್ಕಾಧಿಕಾರಿಗಳಾದ ಡಾ.ಪ್ರಭು ಗಂಜಿಹಾಳ, ಡಾ. ವೀರೇಶ ಹಂಡಗಿ, ಚಿತ್ರನಿರ್ದೇಶಕ ಅರವಿಂದ ಮುಳಗುಂದ , ರಾಜ್ಯದ ಬೇರೆ ಬೇರೆ ಜಿಲ್ಲೆಗಳಿಂದ ಆಗಮಿಸಿದ್ದ ನಿರ್ಮಾಪಕರು, ನಿರ್ದೇಶಕರು, ಕಲಾವಿದರು, ತಂತ್ರಜ್ಞರು ಪ್ರೇಕ್ಷಕರು ಪಾಲ್ಗೊಂಡಿದ್ದರು.
ಸುದ್ಧಿ ಹಾಗೂ ಜಾಹೀರಾತಿಗಾಗಿ ಸಂಪರ್ಕಿಸಿ: Whatsapp: 9008761663, 9481252093 – info@kalpa.news
Discussion about this post